ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ ಬಿತ್ತಿತ್ತು ಪೈಲಟ್ ಕನಸು ; ಉಡಾನ್ ತರಬೇತಿ ಪೂರೈಸಿದ ಕಾರ್ಕಳದ ಶೈನಿ ಅಸ್ಮಾ ಸಲ್ಡಾನ

14-08-26 02:07 pm       HK News Staffer   ಕರಾವಳಿ

ಐದು ವರ್ಷದವಳಿದ್ದಾಗ ನಡೆದಿದ್ದ ಮಂಗಳೂರಿನ ವಿಮಾನ ದುರಂತದ ಕಹಿನೆನಪು ಈಕೆಯ ಬಾಳಲ್ಲಿ ಪೈಲಟ್ ಆಗುವ ಕನಸು ಕಟ್ಟುವಂತೆ ಮಾಡಿತ್ತು. ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಕೌಡೂರಿ ನಿವಾಸಿ ಶೈನಿ ಅಸ್ಮಾ ಸಲ್ಡಾನ ಪೈಲಟ್‌ ತರಬೇತಿ ಪೂರ್ಣಗೊಳಿಸಿ ಕಮರ್ಷಿಯಲ್‌ ಪೈಲಟ್‌ ಲೈಸೆನ್ಸ್‌ (CPL) ಪಡೆದುಕೊಳ್ಳುವ ಮೂಲಕ ಉಡುಪಿ ಜಿಲ್ಲೆಯ ಮೊದಲ ಮಹಿಳಾ ಪೈಲಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಉಡುಪಿ, ಆ.14:  ಐದು ವರ್ಷದವಳಿದ್ದಾಗ ನಡೆದಿದ್ದ ಮಂಗಳೂರಿನ ವಿಮಾನ ದುರಂತದ ಕಹಿನೆನಪು ಈಕೆಯ ಬಾಳಲ್ಲಿ ಪೈಲಟ್ ಆಗುವ ಕನಸು ಕಟ್ಟುವಂತೆ ಮಾಡಿತ್ತು. ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಕೌಡೂರಿ ನಿವಾಸಿ ಶೈನಿ ಅಸ್ಮಾ ಸಲ್ಡಾನ ಪೈಲಟ್‌ ತರಬೇತಿ ಪೂರ್ಣಗೊಳಿಸಿ ಕಮರ್ಷಿಯಲ್‌ ಪೈಲಟ್‌ ಲೈಸೆನ್ಸ್‌ (CPL) ಪಡೆದುಕೊಳ್ಳುವ ಮೂಲಕ ಉಡುಪಿ ಜಿಲ್ಲೆಯ ಮೊದಲ ಮಹಿಳಾ ಪೈಲಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಯುಪಿಯಲ್ಲಿ ಪೈಲಟ್‌ ತರಬೇತಿ

ಕೌಡೂರು ರಂಗನಪಲ್ಕೆಯ ಅಶೋಕ್‌ ಜಾಕೋಬ್‌ ಸಲ್ಡಾನ ಮತ್ತು ಮರಿಯಾ ಗ್ರೆಟ್ಟಾ ಸಲ್ಡಾನ ದಂಪತಿಯ ಪುತ್ರಿಯಾಗಿರುವ ಶೈನಿ ಅಸ್ಮಾ, ಕಾರ್ಕಳದ ಕ್ರೈಸ್ಟ್‌ ಕಿಂಗ್‌ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವರೆಗಿನ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಬಾಲ್ಯದಿಂದಲೇ ವಿಭಿನ್ನವಾದ ಕನಸು ಹೊಂದಿದ್ದ ಅವರು, ಶಿಕ್ಷಣದ ಬಳಿಕ ತಮ್ಮ ಗುರಿಯತ್ತ ಹೆಜ್ಜೆ ಹಾಕಿದರು. ಬೆಂಗಳೂರಿನಲ್ಲಿ ನಡೆದ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್‌ ಅಕಾಡೆಮಿಯ ಪ್ರವೇಶ ಪರೀಕ್ಷೆಯಲ್ಲಿ ದೇಶದಾದ್ಯಂತ ಐದು ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದರು. ಕಠಿಣ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 125 ಮಂದಿ ಆಯ್ಕೆಯಾಗಿದ್ದು, ಅವರಲ್ಲಿ ಶೈನಿ ಕೂಡ ಸ್ಥಾನ ಪಡೆದರು.

ಬಳಿಕ 2023ರ ಆಗಸ್ಟ್‌ನಿಂದ ಉತ್ತರ ಪ್ರದೇಶದ ಫುರ್ಸತ್‌ಗಂಜ್‌ನಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್‌ ಅಕಾಡೆಮಿಯಲ್ಲಿ ಪೈಲಟ್‌ ತರಬೇತಿ ಪಡೆದ ಅವರು, ಕಠಿಣ ತರಬೇತಿಯನ್ನು ಪೂರ್ಣಗೊಳಿಸಿ ಇದೀಗ ಕಮರ್ಷಿಯಲ್‌ ಪೈಲಟ್‌ ಲೈಸೆನ್ಸ್‌ ಪಡೆದುಕೊಂಡಿದ್ದಾರೆ.

5ನೇ ವಯಸ್ಸಿನಲ್ಲೇ ಕನಸಿನ ಬೀಜ 

ಶೈನಿ ಅವರ ಪೈಲಟ್‌ ಆಗುವ ಕನಸು ಐದು ವರ್ಷದ ಬಾಲ್ಯದಲ್ಲೇ ಮೂಡಿತ್ತು. ಮಂಗಳೂರಿನಲ್ಲಿ ಸಂಭವಿಸಿದ್ದ ವಿಮಾನ ಅಪಘಾತದ ಘಟನೆ ಬಾಲಕಿಯ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತ್ತು. ವಿಮಾನ ಹಾಗೂ ಪೈಲಟ್‌ ವೃತ್ತಿಯ ಬಗ್ಗೆ ಮೂಡಿದ ಕುತೂಹಲವೇ ಮುಂದೆ ಜೀವನದ ಗುರಿಯಾಗಿ ರೂಪುಗೊಂಡಿತು. ತಮ್ಮ ಸಾಧನೆಯ ಹಿಂದಿನ ಪ್ರೇರಣೆಯನ್ನು ನೆನಪಿಸಿಕೊಂಡ ಶೈನಿ, ಬಾಲ್ಯದಲ್ಲೇ ಕಂಡ ಕನಸನ್ನು ಗುರಿಯಾಗಿಸಿಕೊಂಡು ಕಷ್ಟಪಟ್ಟು ನನಸು ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಪೈಲಟ್‌ ತರಬೇತಿಯ ಹಾದಿ ಸುಲಭವಾಗಿರಲಿಲ್ಲ. ಸತತ ಪರಿಶ್ರಮ, ಶಿಸ್ತು, ತಾಂತ್ರಿಕ ಜ್ಞಾನ ಹಾಗೂ ಮಾನಸಿಕ ಸಿದ್ಧತೆಯೊಂದಿಗೆ ಶೈನಿ ತರಬೇತಿ ಪೂರ್ಣಗೊಳಿಸಿದ್ದಾರೆ. ವಿಮಾನ ಹಾರಾಟದ ಕೌಶಲ್ಯ, ಸುರಕ್ಷತಾ ಕ್ರಮಗಳು ಹಾಗೂ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವ ಕುರಿತು ತರಬೇತಿ ಪಡೆದಿರುವ ಅವರು, ಹಾರಾಟದ ಅಭ್ಯಾಸವನ್ನೂ ಪೂರ್ಣಗೊಳಿಸಿದ್ದಾರೆ. ಡಿಜಿಸಿಎಗೆ ಸಂಬಂಧಿಸಿದ ವಿವಿಧ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸುವ ಹಂತದಲ್ಲಿದ್ದಾರೆ.

ತಂದೆ-ತಾಯಿಯೇ ನನ್ನ ಸ್ಫೂರ್ತಿ 

ತಮ್ಮ ಸಾಧನೆಯ ಹಿಂದೆ ತಂದೆ ಅಶೋಕ್‌ ಸಲ್ಡಾನ ಹಾಗೂ ತಾಯಿ ಮರಿಯಾ ಗ್ರೆಟ್ಟಾ ಸಲ್ಡಾನ ಅವರ ಪ್ರೋತ್ಸಾಹ ಮತ್ತು ಬೆಂಬಲವೇ ಪ್ರಮುಖ ಕಾರಣ ಎಂದು ಶೈನಿ ಹೇಳಿದ್ದಾರೆ. ಬಾಲ್ಯದಲ್ಲಿ ಕಂಡ ಕನಸನ್ನು ಗುರಿಯಾಗಿಸಿ ಮುನ್ನಡೆಯಲು ತಂದೆಯ ಪ್ರೇರಣೆ ಬಹಳ ಮುಖ್ಯವಾಗಿತ್ತು ಎಂದು ಅವರು ತಿಳಿಸಿದ್ದಾರೆ. ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅದಕ್ಕಾಗಿ ನಿರಂತರವಾಗಿ ಪರಿಶ್ರಮಿಸಿದರೆ ಯಶಸ್ಸು ಖಚಿತ ಎಂದು ಶೈನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.