Mangalore crime, Arrest: ಕೈ ಕೋಳದಲ್ಲೇ ಪೊಲೀಸರನ್ನು ತಳ್ಳಿ ಎಸ್ಕೇಪ್ ಆಗಿದ್ದ ಅಲ್ತಾಫ್ ಹುಸೇನ್ ವಿಜಯಪುರದಲ್ಲಿ ಅರೆಸ್ಟ್ ; ಸರ ಕಿತ್ತ ಕೇಸ್ ಬೆನ್ನತ್ತಿ ನಟೋರಿಯಸ್ ಕ್ರಿಮಿನಲ್ಗಳಿದ್ದ ಗ್ಯಾಂಗ್ ಪತ್ತೆ

12-08-26 11:18 pm       HK News Staffer   ಕ್ರೈಂ

ಮಂಗಳೂರು ಪೊಲೀಸರ ಕೈಯಿಂದ ಕೈ ಕೋಳದ ಜೊತೆಯಲ್ಲೇ ಪರಾರಿಯಾಗಿದ್ದ ಬಾಗಲಕೋಟ ಮೂಲದ ನಟೋರಿಯಸ್ ಆರೋಪಿ ಅಲ್ತಾಫ್ ಹುಸೇನ್ ಎರಡು ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮಂಗಳೂರು, ಆ.12: ಮಂಗಳೂರು ಪೊಲೀಸರ ಕೈಯಿಂದ ಕೈ ಕೋಳದ ಜೊತೆಯಲ್ಲೇ ಪರಾರಿಯಾಗಿದ್ದ ಬಾಗಲಕೋಟ ಮೂಲದ ನಟೋರಿಯಸ್ ಆರೋಪಿ ಅಲ್ತಾಫ್ ಹುಸೇನ್ ಎರಡು ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

ಮಹಿಳೆಯೊಬ್ಬರ ಚಿನ್ನದ ಸರ ಕಿತ್ತು ಎಸ್ಕೇಪ್ ಆಗಿದ್ದ ಪ್ರಕರಣದಲ್ಲಿ ಬಂಧಿಸಿ ಕರೆತರುತ್ತಿದ್ದಾಗ ಅಲ್ತಾಫ್ ಹುಸೇನ್ ನಗರದ ಪಾಂಡೇಶ್ವರದ ರೊಜಾರಿಯೋ ಶಾಲೆಯ ಬಳಿ ಪೊಲೀಸರ ಕೈಯಿಂದ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡಿದ್ದ. ಜೂನ್ 26ರಂದು ನಡೆದ ಪರಾರಿ ಘಟನೆ ಸಂಬಂಧಿಸಿ ಪಾಂಡೇಶ್ವರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಇದೀಗ ವಿಜಯಪುರ ಜಿಲ್ಲೆಯ ಗೋಲಗುಂಬಜ್ ಬಳಿಯ ಓಣಿಯಲ್ಲಿದ್ದಾಗ ಪಾಂಡೇಶ್ವರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಾರುತಿ ಪಿ. ಹಾಗೂ ಸಿಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಸಾಗರ್, ಆಂಜನೇಯ ಸೇರಿ ಬಂಧಿಸಿದ್ದಾರೆ. 

ಜೂನ್ 14ರಂದು ಮಧ್ಯಾಹ್ನ 12.30 ಗಂಟೆಗೆ ಮಹಿಳೆಯೊಬ್ಬರು ವೆಲೆನ್ಸಿಯಾದಿಂದ ಸೂಟರ್ ಪೇಟೆ ಕಡೆಗೆ ನಡೆದು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದಿದ್ದವರು ಚಿನ್ನದ ಸರ ಕಿತ್ತುಕೊಂಡು ಹೋಗಿದ್ದರು. ಕೃತ್ಯವನ್ನು ಬಾಗಲಕೋಟ ನಿವಾಸಿ ಅಲ್ತಾಫ್ ಹುಸೇನ್ ಮತ್ತು ಉತ್ತರ ಪ್ರದೇಶ ನಿವಾಸಿ ರವಿ ಬೋರ ಎಂಬವರು ಮಾಡಿದ್ದಾಗಿ ಪೊಲೀಸರು ಪತ್ತೆ ಮಾಡಿದ್ದರು.‌ ತನಿಖೆಯಲ್ಲಿ ಇನ್ನೊಬ್ಬ ಉತ್ತರ ಪ್ರದೇಶ ನಿವಾಸಿ ಮೊಹಮ್ಮದ್ ಸಾಹಿಲ್ ಸಿದ್ದಿಕಿ ಕೂಡ ಭಾಗಿಯಾಗಿದ್ದು ಪತ್ತೆಯಾಗಿತ್ತು. ‌

ಪ್ರಕರಣ ಸಂಬಂಧಿಸಿ ಮೂವರು ಆರೋಪಿಗಳನ್ನು ಜೂನ್ 26ರಂದು ಪೊಲೀಸರು ಬಂಧಿಸಿ ರೊಜಾರಿಯೋ ಶಾಲೆಯ ಬಳಿಯಿಂದ ಕರೆತರುತ್ತಿದ್ದಾಗ ಅಲ್ತಾಫ್ ಹುಸೇನ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಈತನ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ಕಮಿಷನರ್ ಸುಧೀರ್ ರೆಡ್ಡಿ ರಚಿಸಿದ್ದರು. ಎರಡು ತಿಂಗಳ ಬಳಿಕ ಆರೋಪಿಯನ್ನು ವಿಜಯಪುರದಲ್ಲಿ ಬಂಧಿಸಿ ಮಂಗಳೂರಿಗೆ ಕರೆತಂದಿದ್ದಾರೆ. 

ಸರ ಗಳ್ಳತನ ಬಳಿಕ ಮಂಗಳೂರಿನ ಮೀನುಗಾರಿರು ದಕ್ಕೆಗೆ ಅಲ್ತಾಫ್ ಹುಸೇನ್ ಗ್ಯಾಂಗ್ ಬಂದಿರುವ ಬಗ್ಗೆ ಪೊಲೀಸರಿಗೆ ಪಕ್ಕಾ ಮಾಹಿತಿ ಬಂದಿತ್ತು. ಈ ವೇಳೆ, ಗ್ಯಾಂಗ್ ಬಂಧಿಸಲು ಪಾಂಡೇಶ್ವರ ಠಾಣೆಯ ಪೊಲೀಸರು ಅಲ್ಲಿ ತೆರಳಿದ್ದರು.‌ ಐವರು ಪೊಲೀಸ್ ಸಿಬಂದಿ ಮೂವರನ್ನು ಕರೆತರುತ್ತಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಇಬ್ಬರನ್ನು ಬೆನ್ನಟ್ಟಿ ಹಿಡಿದರೆ ಕೈ ಕೋಳದಲ್ಲೇ ಅಲ್ತಾಫ್ ಹುಸೇನ್ ಪರಾರಿಯಾಗಿದ್ದ. ಈ ಗ್ಯಾಂಗ್ ಮೇಲೆ ಹೈದ್ರಾಬಾದ್, ಬಾಗಲಕೋಟೆ, ಗದಗ ಸೇರಿದಂತೆ ಹಲವಾರು ಕಡೆಗಳಲ್ಲಿ ಪ್ರಕರಣ ದಾಖಲಾಗಿವೆ. ಅಲ್ತಾಫ್ ರಸ್ತೆಯಲ್ಲಿ ತಪ್ಪಿಸಿಕೊಂಡು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.