ಐಷಾರಾಮಿ ಹೊಟೇಲ್ ಬಳಿಕ ಸರ್ಕಾರಿ ಕಚೇರಿಗಳ ಕ್ಯಾಂಟೀನ್ ಗಳಿಗೂ ದಾಳಿ ; ಅಸುರಕ್ಷತೆ, ಆಹಾರದಲ್ಲಿ ಜಿರಳೆ ಪತ್ತೆ ! ವಿಕಾಸಸೌಧ ಆವರಣದ ಹೊಟೇಲ್‌ಗಳಿಗೆ ನೋಟಿಸ್, ಬಂದ್ ಮಾಡಲು ಸೂಚನೆ

13-08-26 02:22 pm       HK News Staffer   ಕರ್ನಾಟಕ

ಖಾಸಗಿ ಐಷಾರಾಮಿ ಹೋಟೆಲ್‌ಗಳು, ಪಬ್‌ಗಳ ಬಳಿಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಪ್ರಮುಖ ಸರ್ಕಾರಿ ಕಚೇರಿಗಳ ಕ್ಯಾಂಟೀನ್‌ಗಳ ಮೇಲೂ ದಾಳಿ ನಡೆಸಿದ್ದು, ಅವಧಿ ಮೀರಿದ ಆಹಾರ, ಜಿರಳೆಗಳಿದ್ದ ಆಹಾರಗಳನ್ನು ಪತ್ತೆಹಚ್ಚಿದೆ.

ಬೆಂಗಳೂರು, ಆ.13: ಖಾಸಗಿ ಐಷಾರಾಮಿ ಹೋಟೆಲ್‌ಗಳು, ಪಬ್‌ಗಳ ಬಳಿಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಪ್ರಮುಖ ಸರ್ಕಾರಿ ಕಚೇರಿಗಳ ಕ್ಯಾಂಟೀನ್‌ಗಳ ಮೇಲೂ ದಾಳಿ ನಡೆಸಿದ್ದು, ಅವಧಿ ಮೀರಿದ ಆಹಾರ, ಜಿರಳೆಗಳಿದ್ದ ಆಹಾರಗಳನ್ನು ಪತ್ತೆಹಚ್ಚಿದೆ.

ಜೊಮ್ಯಾಟೋದ ಹೈಪರ್‌ಪ್ಯೂರ್‌ ಗೋದಾಮಿನಲ್ಲಿ ತಪಾಸಣೆ ನಡೆಸಿದ ವೇಳೆ, ಹಲವು ಹೋಟೆಲ್‌ಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸುವ ಈ ಘಟಕದಲ್ಲಿ ಸುರಕ್ಷತಾ ಮಾನದಂಡ ಅನುಸರಿಸದ 146 ಕೆ.ಜಿ. ಕೋಳಿ ಮಾಂಸ ಪತ್ತೆಯಾಗಿತ್ತು. ಇದಲ್ಲದೆ, 300 ಕೆ.ಜಿ. ಪ್ಯಾಕ್‌ ಮಾಡಲಾದ ಅಕ್ಕಿ, 20 ಕೆ.ಜಿ. ಡ್ರೈಫ್ರೂಟ್ಸ್ ಹಾಗೂ 15 ಕೆ.ಜಿ. ಮಸಾಲೆ ಪದಾರ್ಥಗಳಲ್ಲಿ ತಪ್ಪಾದ ಲೇಬಲಿಂಗ್‌ ಕಂಡುಬಂದಿದೆ. ಶೈತ್ಯೀಕರಣದಲ್ಲಿ ಇಡಬೇಕು ಎಂದು ಲೇಬಲ್‌ನಲ್ಲಿ ಸೂಚಿಸಿದ್ದರೂ 10 ಕೆ.ಜಿ. ಆಮದು ಮಾಡಿದ ಮೂಲಂಗಿ ಉಪ್ಪಿನಕಾಯಿಯನ್ನು ಶೈತ್ಯೀಕರಣವಿಲ್ಲದೆ ಸಂಗ್ರಹಿಸಿದ್ದನ್ನು ಪತ್ತೆ ಮಾಡಿದ್ದರು.  

ಆಗಸ್ಟ್‌ 12ರಂದು ಆರೋಗ್ಯ ಸೌಧ, ವಿಧಾನಸೌಧ, ಶಾಸಕರ ಭವನ, ವಿಕಾಸಸೌಧ ಹಾಗೂ ಎಂ.ಎಸ್‌. ಕಟ್ಟಡದಲ್ಲಿರುವ ಹೋಟೆಲ್‌ ಮತ್ತು ಆಹಾರ ಮಳಿಗೆಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದರು. ಆಹಾರದ ಗುಣಮಟ್ಟ, ಲೇಬಲಿಂಗ್‌, ಸಂಗ್ರಹಣೆ, ಸ್ವಚ್ಛತೆ ಮತ್ತು ಆಹಾರ ನಿರ್ವಹಣಾ ಕ್ರಮಗಳನ್ನು ಪರಿಶೀಲಿಸಿದರು. ವಿಕಾಸಸೌಧ ಆವರಣದ ಕ್ಯಾಂಟೀನ್‌ ಒಂದರಲ್ಲಿ 500 ಗ್ರಾಂ ಅವಧಿ ಮೀರಿದ ರವಾ ಹಾಗೂ 500 ಗ್ರಾಂ ಅವಧಿ ಮೀರಿದ ಕೊಕೊಕಾಂಟ್‌ ಪೌಡರ್‌ ಪತ್ತೆಯಾಗಿದ್ದು, ವಶಪಡಿಸಲಾಗಿದೆ. ಅಲ್ಲದೆ, ಕ್ಯಾಂಟೀನ್‌ನಲ್ಲಿ ಅಸ್ವಚ್ಛ ಪರಿಸ್ಥಿತಿಯೂ ಕಂಡುಬಂದಿದೆ.

ಇದೇ ವೇಳೆ, ಮಲ್ಲಿಗೆ ಹೋಟೆಲ್‌ನಲ್ಲಿ ಅಸ್ವಚ್ಛ ಮತ್ತು ಆಹಾರದಲ್ಲಿ ಜಿರಳೆಗಳು ಪತ್ತೆಯಾಗಿವೆ. ಹೋಟೆಲ್‌ನಲ್ಲಿ ಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಂಡಿರದೇ ಇರುವುದಕ್ಕೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲಿಯೇ ಮತ್ತೊಂದು ಹೋಟೆಲ್‌ನಲ್ಲೂ ಅಸ್ವಚ್ಛ ವಾತಾವರಣ ಕಂಡುಬಂದಿದ್ದು ಸಲಹಾ ನೋಟಿಸ್‌ ನೀಡಲಾಗಿದೆ. ಎಂ.ಎಸ್‌. ಕಟ್ಟಡದಲ್ಲಿರುವ ಹೋಟೆಲ್‌ವೊಂದರಲ್ಲಿ ಅಸ್ವಚ್ಛ ಪರಿಸ್ಥಿತಿಯಲ್ಲಿ ಆಹಾರ ತಯಾರು, ವಹಿವಾಟು ನಡೆಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಹೋಟೆಲ್‌ ಬಂದ್‌ ಮಾಡಲಾಗಿದೆ.