ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು ; ಐತಿಹಾಸಿಕ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಸಚಿವ ಖಾದರ್‌ಗೆ ಮಿಥುನ್ ರೈ ಮನವಿ

15-09-26 12:50 pm       HK News Staffer   ಕರಾವಳಿ

ತುಳುನಾಡಿನ ಹೆಮ್ಮೆಯ ಕರಾವಳಿ ಹೆಬ್ಬಾಗಿಲಾಗಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮರವೀರ ‘ಕೋಟಿ-ಚೆನ್ನಯ’ರ ಹೆಸರನ್ನು ನಾಮಕರಣ ಮಾಡಬೇಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆಯಲ್ಲೇ ಈ ಬಗ್ಗೆ ಅಧಿಕೃತ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಒತ್ತಾಯಿಸಿದ್ದಾರೆ.

ಮಂಗಳೂರು, ಸೆ 15: ತುಳುನಾಡಿನ ಹೆಮ್ಮೆಯ ಕರಾವಳಿ ಹೆಬ್ಬಾಗಿಲಾಗಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮರವೀರ ‘ಕೋಟಿ-ಚೆನ್ನಯ’ರ ಹೆಸರನ್ನು ನಾಮಕರಣ ಮಾಡಬೇಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆಯಲ್ಲೇ ಈ ಬಗ್ಗೆ ಅಧಿಕೃತ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಒತ್ತಾಯಿಸಿದ್ದಾರೆ.

ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿರುವ ಅವರು, ಈ ಭಾಗದ ಕೋಟ್ಯಂತರ ಜನರ ಸಾಂಸ್ಕೃತಿಕ ಹಾಗೂ ಭಾವನಾತ್ಮಕ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವಂತೆ ಕೋರಿದ್ದಾರೆ.

ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರು ಕೇವಲ ಐತಿಹಾಸಿಕ ನಾಯಕರಷ್ಟೇ ಅಲ್ಲ, ಈ ಮಣ್ಣಿನ ಸ್ವಾಭಿಮಾನ, ಸಾಮಾಜಿಕ ನ್ಯಾಯ, ಸತ್ಯ ಹಾಗೂ ಧರ್ಮದ ಪ್ರಮುಖ ಸಂಕೇತವಾಗಿದ್ದಾರೆ. ತುಳುನಾಡಿನ ಪ್ರತಿಯೊಂದು ಸಮುದಾಯದ ಮನಸ್ಸಿನಲ್ಲಿ ಅಪ್ರತಿಮ ಶೌರ್ಯ ಮತ್ತು ಬಲಿಷ್ಠ ಸಾಂಸ್ಕೃತಿಕ ಅಸ್ಮಿತೆಯಾಗಿ ನೆಲೆಸಿರುವ ಈ ಮಹಾನ್ ಚೇತನಗಳ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವುದು ಈ ಭಾಗದ ಜನತೆಗೆ ನೀಡುವ ಬಹುದೊಡ್ಡ ಗೌರವವಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡುವ ಕುರಿತಾದ ಸುದೀರ್ಘ ಹೋರಾಟದ ಹಿನ್ನೆಲೆಯನ್ನು ನೆನಪಿಸಿದ ಮಿಥುನ್ ರೈ, ತಾವು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ, ದಿನಾಂಕ 10 ಡಿಸೆಂಬರ್ 2010 ರಂದು ಕೆ.ಪಿ.ಟಿ ವೃತ್ತದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಬೃಹತ್ 'ಪಂಜಿನ ಮೆರವಣಿಗೆ'ಯ ನೇತೃತ್ವ ವಹಿಸಿ, ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡಬೇಕೆಂದು ಪ್ರಬಲ ಒತ್ತಾಯ ಮಂಡಿಸಲಾಗಿತ್ತು.
ಈ ಬೇಡಿಕೆಗೆ ಕರಾವಳಿಯ ಸಮಸ್ತ ಜನತೆಯ ಸಂಪೂರ್ಣ ಬೆಂಬಲ ಹಾಗೂ ದಶಕಗಳ ಹೋರಾಟದ ಹಿನ್ನೆಲೆಯಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆ ನಡೆಯುತ್ತಿರುವ ಈ ಮಹತ್ವದ ಸಂದರ್ಭದಲ್ಲೇ, ಮಂಗಳೂರು ವಿಮಾನ ನಿಲ್ದಾಣವನ್ನು ‘ಕೋಟಿ-ಚೆನ್ನಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಸಂಪುಟದಲ್ಲಿ ಅನುಮೋದಿಸಬೇಕು. ಬಳಿಕ ಕೇಂದ್ರ ಸರ್ಕಾರಕ್ಕೆ ಅಂತಿಮ ಶಿಫಾರಸು ಕಳುಹಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಲ್ಲಿ ಮಿಥುನ್ ರೈ ಮನವಿ ಮಾಡಿದ್ದಾರೆ.