ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ ಚಲೋ ಪಾದಯಾತ್ರೆ, ಅವರ ಆರೋಗ್ಯ ಮತ್ತು ಆಯುಷ್ಯ ಚೆನ್ನಾಗಿರಲಿ ; ನಾಗೇಂದ್ರ ವ್ಯಂಗ್ಯ

12-09-26 09:40 pm       HK News Staffer   ಕರ್ನಾಟಕ

ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿತ್ತು. ಅದನ್ನು ಕರಗಿಸಿಕೊಳ್ಳಲು ಬಳ್ಳಾರಿ ಚಲೋ ಪಾದಯಾತ್ರೆ ಮಾಡಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಬಿ. ನಾಗೇಂದ್ರ ವ್ಯಂಗ್ಯವಾಡಿದರು.

ಬಳ್ಳಾರಿ, ಸೆ 12: ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿತ್ತು. ಅದನ್ನು ಕರಗಿಸಿಕೊಳ್ಳಲು ಬಳ್ಳಾರಿ ಚಲೋ ಪಾದಯಾತ್ರೆ ಮಾಡಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಬಿ. ನಾಗೇಂದ್ರ ವ್ಯಂಗ್ಯವಾಡಿದರು.

ತಾಲೂಕಿನ ರೂಪನಗುಡಿ ಗ್ರಾಮದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕೊಲೆಸ್ಟ್ರಾಲ್‌ ಮತ್ತು ಕೊಬ್ಬು ಕಡಿಮೆ ಮಾಡಿಕೊಳ್ಳಲು ಬಿಜೆಪಿ ನಾಯಕರು ಪಾದಯಾತ್ರೆ ಮಾಡಿದ್ದಾರೆ. ಮನೆಯಲ್ಲಿ ವಾಕಿಂಗ್ ಮಾಡಲು ಅವರಿಗೆ ಸಮಯ ಇರಲಿಲ್ಲ. ಈಗ ಪಾದಯಾತ್ರೆ ಮಾಡಿ ಒಬ್ಬೊಬ್ಬರು ಐದು ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ’ ಎಂದು ಲೇವಡಿ ಮಾಡಿದರು.

ಬಿಜೆಪಿಯವರು ಯಾವುದೇ ವಿಷಯವಿಲ್ಲದೆ ಪಾದಯಾತ್ರೆ ಮಾಡಿದ್ದಾರೆ. ಬಿಜೆಪಿಯವರ ಒತ್ತಡಕ್ಕೆ ಮಣಿದು ನಾನು ರಾಜೀನಾಮೆ ನೀಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೆ’ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಲ್ಲಿನ ಕೆಟ್ಟತನವನ್ನು ತೊಳೆದು ಹಾಕಿಕೊಳ್ಳಲು ಅವರು ಪಾದಯಾತ್ರೆ ಮಾಡಿದ್ದಾರೆ. ಅವರ ಪಾದಯಾತ್ರೆಯನ್ನು ನಾನು ಸ್ವಾಗತಿಸುತ್ತೇನೆ. ಬಿಜೆಪಿಯವರ ಆರೋಗ್ಯ ಮತ್ತು ಆಯುಷ್ಯ ಚೆನ್ನಾಗಿರಲಿ’ ಎಂದು ಹೇಳಿದರು

‘2028ರ ಚುನಾವಣೆಯಲ್ಲಿ ಬಿಜೆಪಿ ಬಲಿಷ್ಠವಾಗಿ ಬರಲಿ. ಅವರ ಸವಾಲನ್ನು ನಾವು ಎರಡು ಪಟ್ಟು ಶಕ್ತಿಯಿಂದ ಎದುರಿಸುತ್ತೇವೆ. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ 10 ಸ್ಥಾನ ಗೆಲ್ಲಲಿದೆ ಎಂಬ ಸವಾಲನ್ನು ನಾವು ಸ್ವೀಕರಿಸುತ್ತೇವೆ. ಬಳ್ಳಾರಿ ಮಾತ್ರವಲ್ಲ, ಇಡೀ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. 2028ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 153 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ’ ಎಂದು ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.