ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅಡಿಗಿ ಕುಳಿತ 12 ಅಡಿ ಬೃಹತ್ ಕಾಳಿಂಗ ! ರಕ್ಷಣೆಗೆ ಹೋದಾಗ ಹೆಬ್ಬಾವನ್ನೇ ವಾಂತಿ ಮಾಡಿದ ನಾಗರಾಜ

12-09-26 03:09 pm       HK News Staffer   ಕರಾವಳಿ

ಮನೆಯ ತೋಟದಲ್ಲಿ ಬರೋಬ್ಬರಿ 12 ಅಡಿಗೂ ಅಧಿಕ ಉದ್ದದ ಬೃಹತ್ ಕಾಳಿಂಗ ಸರ್ಪ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ತಾಲೂಕಿನ ತೆಂಕಕಾರಂದೂರು ಗ್ರಾಮದ ಕಡಿಂಗದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಬೆಳ್ತಂಗಡಿ, ಸೆ 12: ಮನೆಯ ತೋಟದಲ್ಲಿ ಬರೋಬ್ಬರಿ 12 ಅಡಿಗೂ ಅಧಿಕ ಉದ್ದದ ಬೃಹತ್ ಕಾಳಿಂಗ ಸರ್ಪ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ತಾಲೂಕಿನ ತೆಂಕಕಾರಂದೂರು ಗ್ರಾಮದ ಕಡಿಂಗದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಕಡಿಂಗ ನಿವಾಸಿ ಹಿತೇಶ್ ಅವರ ಮನೆಯ ತೋಟದಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿತ್ತು. ಮನೆಯವರು ಗಮನಿಸಿದಾಗ, ಕಾಳಿಂಗ ಸರ್ಪವು ಹೆಬ್ಬಾವನ್ನು ನುಂಗಿದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಇದರಿಂದ ಆತಂಕಗೊಂಡ ಮನೆಯವರು ತಕ್ಷಣ ಉರಗ ರಕ್ಷಕ ಲಾಯಿಲ ಗ್ರಾಮದ ಸ್ನೇಕ್ ಅಶೋಕ್ ಅವರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ದೊರೆತ ಕೂಡಲೇ ಸ್ನೇಹಿತ ಪ್ರತೀಕ್ ಅವರೊಂದಿಗೆ ಸ್ಥಳಕ್ಕೆ ಧಾವಿಸಿದ ಸ್ನೇಕ್ ಅಶೋಕ್, ಕಾಳಿಂಗನ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಿ, ಯಾವುದೇ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಆದರೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭ ಅಚ್ಚರಿಯ ಘಟನೆಯೊಂದು ನಡೆದಿದೆ. ಕಾಳಿಂಗ ಸರ್ಪವು ತಾನು ನುಂಗಿದ್ದ ಹೆಬ್ಬಾವನ್ನು ಏಕಾಏಕಿ ವಾಂತಿ ಮಾಡಿದೆ. ಬಳಿಕ ಉರಗ ರಕ್ಷಕರು ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು, ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸೂಕ್ತ ರಕ್ಷಿತಾರಣ್ಯಕ್ಕೆ ಬಿಡಿಸಿದ್ದಾರೆ.

15 ಸಾವಿರಕ್ಕೂ ಅಧಿಕ ಹಾವುಗಳ ರಕ್ಷಣೆ ;

ಸ್ನೇಕ್ ಅಶೋಕ್ ಹಲವು ವರ್ಷಗಳಿಂದ ಉರಗ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇದುವರೆಗೆ 248 ಕಾಳಿಂಗ ಸರ್ಪಗಳು ಸೇರಿದಂತೆ ಸುಮಾರು 15 ಸಾವಿರ ವಿವಿಧ ಜಾತಿಯ ಹಾವುಗಳನ್ನು ರಕ್ಷಿಸಿರುವುದಾಗಿ ತಿಳಿಸಿದ್ದಾರೆ.

ಜನವಸತಿ ಪ್ರದೇಶಗಳಲ್ಲಿ ಹಾವುಗಳು ಕಾಣಿಸಿಕೊಂಡಾಗ ಅವುಗಳನ್ನು ಕೊಲ್ಲದೆ, ಸುರಕ್ಷಿತವಾಗಿ ರಕ್ಷಿಸಿ ಅವುಗಳ ನೈಸರ್ಗಿಕ ವಾಸಸ್ಥಳಕ್ಕೆ ಬಿಡುವ ಮೂಲಕ ಉರಗ ಸಂರಕ್ಷಣೆಯಲ್ಲಿ ಸ್ನೇಕ್ ಅಶೋಕ್ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.