ಕಸ್ತೂರಿರಂಗನ್ ವರದಿ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ, ವಂದೇ ಮಾತರಂ ವಿಚಾರದಲ್ಲಿ ಕಾಂಗ್ರೆಸ್ ನಿಲುವಿನಲ್ಲಿ ಬದಲಿಲ್ಲ ; ನ.1ರೊಳಗೆ ಪರವಾನಗಿ ರಹಿತ ಬಂದೂಕು ಸರ್ಕಾರಕ್ಕೆ ಒಪ್ಪಿಸದಿದ್ದರೆ ಕಠಿಣ ಕ್ರಮ

11-09-26 05:50 pm       HK News Staffer   ಕರ್ನಾಟಕ

"ಕಸ್ತೂರಿ ರಂಗನ್‌ ವರದಿ ವಿಚಾರವಾಗಿ ಚರ್ಚೆ ನಡೆಸಲು ಸೆಪ್ಟೆಂಬರ್‌ 21 ರಿಂದ 23 ರ ವರೆಗೆ ಮೂರು ದಿನಗಳ ವಿಧಾನಮಂಡಲ ಅಧಿವೇಶನ ಕರೆಯಲಾಗಿದ್ದು, ರೈತರ ಹಿತದೃಷ್ಟಿಯಿಂದ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರು ಸೆ.11: "ಕಸ್ತೂರಿ ರಂಗನ್‌ ವರದಿ ವಿಚಾರವಾಗಿ ಚರ್ಚೆ ನಡೆಸಲು ಸೆಪ್ಟೆಂಬರ್‌ 21 ರಿಂದ 23 ರ ವರೆಗೆ ಮೂರು ದಿನಗಳ ವಿಧಾನಮಂಡಲ ಅಧಿವೇಶನ ಕರೆಯಲಾಗಿದ್ದು, ರೈತರ ಹಿತದೃಷ್ಟಿಯಿಂದ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
                                                                                                                                                                                                                                               
ಅರಣ್ಯ ಭವನದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ‌ನೀಡಿದರು‌. "ಅಧಿವೇಶನದಲ್ಲಿ ಎಲ್ಲ ಶಾಸಕರು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಮುಕ್ತವಾಗಿ ನೀಡಬೇಕು. ರಾಜ್ಯದ ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದರು. ನವೆಂಬರ್ 1ರ ಒಳಗೆ ಪರವಾನಗಿ ಹೊಂದಿಲ್ಲದ ಬಂದೂಕುಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಅಕ್ರಮ ಬಂದೂಕು, ಶಸ್ತ್ರಗಳಿಂದಲೇ ಅರಣ್ಯ ಅಧಿಕಾರಿಗಳು ಬಲಿಯಾಗಿದ್ದಾರೆ ಎಂಬುದನ್ನು ಸರ್ಕಾರ ಗಂಭೀರ ಪರಿಗಣಿಸಿದೆ ಎಂದರು. 

ಎಪಿಎಂಸಿ ಭೇಟಿಗೆ ಹೈಕೋರ್ಟ್‌ ಮೆಚ್ಚುಗೆ 

ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರು ಮುಖ್ಯಮಂತ್ರಿಯವರ ಎಪಿಎಂಸಿ ಭೇಟಿ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ ಕುರಿತು  ಕೇಳಿದಾಗ, "ನಮ್ಮ ಕೆಲಸವನ್ನು ಗುರುತಿಸಿದ ಹೈಕೋರ್ಟ್ ಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲ ಸಚಿವರಿಗೂ ಎಪಿಎಂಸಿಗಳ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದೇನೆ. ಏಕೆಂದರೆ ಸಾಮಾನ್ಯ ಜನರು ಯಾವುದೇ ಕಾರಣಕ್ಕೂ ತೊಂದರೆ ಅನುಭವಿಸಬಾರದು ಎಂಬುದು ಸರ್ಕಾರದ ನಿಲುವು" ಎಂದರು.

ಬಾಲಕಾರ್ಮಿಕರ ರಕ್ಷಣೆ ಪೊಲೀಸರ ಕರ್ತವ್ಯ 

ಬಾಲ ಕಾರ್ಮಿಕರ ರಕ್ಷಣೆ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆ ಬಗ್ಗೆ ಕೇಳಿದಾಗ, "ಬಾಲಕಾರ್ಮಿಕರ ರಕ್ಷಣೆ ವಿಚಾರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆ ದುರದೃಷ್ಟಕರ. ಮಕ್ಕಳನ್ನು ರಕ್ಷಿಸುವುದು ಕಾರ್ಮಿಕ ಇಲಾಖೆ ಮಾತ್ರವಲ್ಲ, ಪೊಲೀಸ್ ಇಲಾಖೆಯ ಜವಾಬ್ದಾರಿಯೂ ಹೌದು.‌ ಬಾಲ ಕಾರ್ಮಿಕರನ್ನು ರಕ್ಷಿಸುವ ಕಾರ್ಯದಲ್ಲಿ ಪೊಲೀಸ್ ಹಾಗೂ ಕಾರ್ಮಿಕ ಇಲಾಖೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು" ಎಂದರು.

ಜಾರಕಿಹೊಳಿ ವಿರುದ್ಧ ರಾಜಕೀಯ ಟಾರ್ಗೆಟ್ 

"ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಧೈರ್ಯ ತುಂಬಿದ್ದೇನೆ. ಅವರು ಯಾವುದೇ ತಪ್ಪು ಮಾಡಿಲ್ಲ. ಕಾನೂನು ಚೌಕಟ್ಟಿನಲ್ಲಿಯೇ ವ್ಯವಹಾರ ನಡೆಸುತ್ತಿದ್ದಾರೆ" ಎಂದು ಹೇಳಿದರು. "ಇದು ರಾಜಕೀಯವಾಗಿ ನಡೆಯುತ್ತಿರುವ ಬೆಳವಣಿಗೆ. ಕಾಂಗ್ರೆಸ್ ಪಕ್ಷದ ನಾಯಕರನ್ನು ಹಾಗೂ ವಿರೋಧ ಪಕ್ಷದವರನ್ನು ಗುರಿ ಮಾಡಲಾಗುತ್ತಿದೆ. ಇನ್ನೂ ಮೂರು–ನಾಲ್ಕು ಜನರನ್ನು ಗುರಿ ಮಾಡುವ ಸಾಧ್ಯತೆ ಇದೆ ಎಂಬ ಅರಿವು ನನಗಿದೆ" ಎಂದರು.

"ಬಿಜೆಪಿ ನಾಯಕರಿಗೆ ಸಂಬಂಧಿಸಿದ ಹಣ ವರ್ಗಾವಣೆ ಹಾಗೂ ವಿದೇಶಿ ಖಾತೆಗಳಿಗೆ ಹಣ ಹೋಗಿರುವ ಆರೋಪಗಳಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಕಾಂಗ್ರೆಸ್ ನಾಯಕರ ಮೇಲಷ್ಟೇ ತನಿಖಾ ಸಂಸ್ಥೆಗಳ ಕ್ರಮ ನಡೆಯುತ್ತಿದೆ" ಎಂದು ಹೇಳಿದರು.

ವಂದೇ ಮಾತರಂ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಸ್ಪಷ್ಟ 

ವಂದೇ ಮಾತರಂ ಹಾಡಿನ ವಿಚಾರವಾಗಿ ಕೇಳಿದಾಗ, "ವಂದೇ ಮಾತರಂ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಬಹಳ ಹಿಂದಿನಿಂದಲೂ ಸ್ಪಷ್ಟವಾಗಿದೆ. ವಂದೇ ಮಾತರಂ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಕಾಂಗ್ರೆಸ್ ಗೌರವ ನೀಡುತ್ತದೆ" ಎಂದು ಹೇಳಿದರು.

"ನಮ್ಮ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರು ತಮ್ಮ ಕಾಲದಲ್ಲಿಯೂ ಅಕ್ರಮ ಬಂದೂಕು ಶಸ್ತ್ರಾಸ್ತ್ರಗಳನ್ನು ಸರ್ಕಾರದ ವಶಕ್ಕೆ ನೀಡಲು ಕರೆ ನೀಡಿದ್ದರು. ಇದರಿಂದ ಸಾವಿರಾರು ಜನ ಮುಂದೆ ಬಂದು ಸರ್ಕಾರದ ವಶಕ್ಕೆ ನೀಡಿದರು" ಎಂದರು‌.