ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ; ಕಸ್ತೂರಿರಂಗನ್ ವರದಿ ಸಂಬಂಧಿಸಿ ಹೆಬ್ರಿ, ತೀರ್ಥಹಳ್ಳಿ ಜನರೊಂದಿಗೆ ಸಭೆ, ಜನರ ಬಳಿಗೇ ಮುಖ್ಯಮಂತ್ರಿ !

14-09-26 06:02 pm       HK News Staffer   ಕರಾವಳಿ

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ಸಚಿವ ಸಂಪುಟ ಸಭೆಗಾಗಿ ಸಿಎಂ ಡಿ.ಕೆ ಶಿವಕುಮಾರ್ ಒಂದು ದಿನ ಮೊದಲೇ ಮಂಗಳೂರಿಗೆ ಬರಲಿದ್ದಾರೆ. ಅಲ್ಲದೆ, ಸಿಎಂ ಆಗಿ ಮೊದಲ ಬಾರಿಗೆ ಕರಾವಳಿ ಜಿಲ್ಲೆಗೆ ಆಗಮಿಸುತ್ತಿರುವ ಡಿಕೆಶಿ ಮೊದಲ ಭೇಟಿಯಲ್ಲೆ ಜನರ ಬಳಿಗೆ ತೆರಳಿ ಸಮಸ್ಯೆ ಅರಿಯಲು ಮುಂದಾಗಿದ್ದಾರೆ.

ಮಂಗಳೂರು, ಸೆ.14: ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ಸಚಿವ ಸಂಪುಟ ಸಭೆಗಾಗಿ ಸಿಎಂ ಡಿ.ಕೆ ಶಿವಕುಮಾರ್ ಒಂದು ದಿನ ಮೊದಲೇ ಮಂಗಳೂರಿಗೆ ಬರಲಿದ್ದಾರೆ. ಅಲ್ಲದೆ, ಸಿಎಂ ಆಗಿ ಮೊದಲ ಬಾರಿಗೆ ಕರಾವಳಿ ಜಿಲ್ಲೆಗೆ ಆಗಮಿಸುತ್ತಿರುವ ಡಿಕೆಶಿ ಮೊದಲ ಭೇಟಿಯಲ್ಲೆ ಜನರ ಬಳಿಗೆ ತೆರಳಿ ಸಮಸ್ಯೆ ಅರಿಯಲು ಮುಂದಾಗಿದ್ದಾರೆ. 

17ರಂದು ಸಂಜೆ 5.25ಕ್ಕೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಬರಲಿರುವ ಸಿಎಂ ಡಿಕೆಶಿ ಅಂದು ಸಂಜೆ ಯಾವುದೇ ಸರ್ಕಾರಿ ಕಾರ್ಯಕ್ರಮದ ನಿಗದಿ ಮಾಡಿಲ್ಲ. ಇತರೇ ವಿಶೇಷ ಕಾರ್ಯಕ್ರಮಗಳೂ ಇಲ್ಲ. ಆದರೆ, ಮಂಗಳೂರಿನಲ್ಲಿ ವಾಸ್ತವ್ಯ ಮಾಡಲಿದ್ದು ಈ ವೇಳೆ, ಪಕ್ಷದ ನಾಯಕರು ಸೇರಿದಂತೆ ಆಪ್ತರೊಂದಿಗೆ ಮರುದಿನದ ಸಚಿವ ಸಂಪುಟ ಸಭೆ ವಿಚಾರದಲ್ಲಿ ಚರ್ಚಿಸುವ ನಿರೀಕ್ಷೆಯಿದೆ. 

ಸೆ.18ರಂದು ಪಡೀಲ್ ನಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಯ ಎರಡನೇ ಮಹಡಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಕರಾವಳಿ ಜಿಲ್ಲೆಗಳಿಗೆ ಸಂಬಂಧಪಟ್ಟ ಇಲಾಖೆಗಳನ್ನು ಹೊಂದಿರುವ ಸಂಬಂಧಿತ ಸಚಿವರು ಸಭೆಗೆ ಆಗಮಿಸಲಿದ್ದಾರೆ. 

ಮಧ್ಯಾಹ್ನ 2.30ಕ್ಕೆ ಮೇರಿಹಿಲ್ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಮೂಲಕ ಹೆಬ್ರಿಗೆ ತೆರಳಲಿದ್ದು ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಗ್ರಾಮಸ್ಥರನ್ನು ಭೇಟಿಯಾಗಿ ಅವರ ಅಹವಾಲು ಸ್ವೀಕರಿಸಲಿದ್ದಾರೆ. ಆನಂತರ ಸಂಜೆ 5 ಗಂಟೆಗೆ ಹೆಲಿಕಾಪ್ಟರ್ ಮೂಲಕ ಮರಳಿ ಮಂಗಳೂರಿಗೆ ಬಂದು ವಾಸ್ತವ್ಯ ಹೂಡಲಿದ್ದಾರೆ. ಮರುದಿನ ಬೆಳಗ್ಗೆ 9.30 ಗಂಟೆಗೆ ಹೆಲಿಕಾಪ್ಟರ್ ಮೂಲಕ ಮಂಗಳೂರಿನಿಂದ ತೀರ್ಥಹಳ್ಳಿಗೆ ತೆರಳಲಿದ್ದು ಅಲ್ಲಿಯೂ ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಸಭೆ ನಡೆಸಲಿದ್ದಾರೆ. ಆನಂತರ, ಮಧ್ಯಾಹ್ನ ಮೂರು ಗಂಟೆಗೆ ಬಾಳೆಹೊನ್ನೂರಿನಲ್ಲಿಯೂ ಇದೇ ವಿಚಾರದಲ್ಲಿ ಸಭೆಯಲ್ಲಿ ಪಾಲ್ಗೊಂಡು ಸಂಜೆಯ ವೇಳೆಗೆ ಅಲ್ಲಿಂದ ಕಾಪ್ಟರ್ ನಲ್ಲಿ ಬೆಂಗಳೂರು ತೆರಳಲಿದ್ದಾರೆ. 

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿದರೂ, ಇದರ ನಡುವೆಯೇ ಕಸ್ತೂರಿರಂಗನ್ ವರದಿ ಜಾರಿಗೊಳ್ಳುತ್ತಿರುವುದಕ್ಕೆ ಪಶ್ಚಿಮ ಘಟ್ಟಗಳ ತಪ್ಪಲಿನ ಗ್ರಾಮಗಳ ಜನರಿಂದ ವಿರೋಧ ವ್ಯಕ್ತವಾಗಿದ್ದರಿಂದ ಎರಡೂ ವಿಚಾರಗಳಿಗೆ ಮುಖ್ಯಮಂತ್ರಿ ಮಹತ್ವ ನೀಡಿ ಜನರ ಬಳಿಗೇ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸೆ. 20-21 ರಂದು ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ವಿಶೇಷ ಅಧಿವೇಶನ ನಡೆಯಲಿದ್ದು ಅದಕ್ಕೂ ಮುನ್ನ ಸಿಎಂ ಡಿಕೆಶಿ ಸಮಸ್ಯೆ ಅರಿಯಲು ಮುಂದಾಗಿದ್ದಾರೆ. 

ಪಶ್ಚಿಮ ಘಟ್ಟಗಳ ಸಂರಕ್ಷಣೆ ಸಲುವಾಗಿ ಕಸ್ತೂರಿರಂಗನ್ ಸಮಿತಿ ನೀಡಿರುವ ವರದಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದ್ದು ಇದೇ ತಿಂಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಿದೆ. ರಾಜ್ಯ ಸರ್ಕಾರ ಈ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸುತ್ತ ಬಂದರೂ, ವರದಿಯ ಸಾಧಕ ಬಾಧಕಗಳನ್ನು ಜನರಿಗೆ ತಲುಪಿಸಲು ಇಲ್ಲಿನ ಜನಪ್ರತಿನಿಧಿಗಳಿಗೆ ಸಾಧ್ಯವಾಗಿಲ್ಲ. ವರದಿ ಜಾರಿ ವಿಚಾರವನ್ನು ಗುಮ್ಮನಂತೆ ತೋರಿಸಿ ಬೇಳೆ ಬೇಯಿಸಲು ನೋಡುತ್ತಿದ್ದಾರೆ.