ಚರಕದಿಂದ ನೂಲು ತೆಗೆದು, ಸಮುದ್ರ ಕಿನಾರೆಯಲ್ಲಿ ಉಪ್ಪು ತಯಾರಿಸಿದ್ದಕ್ಕೆ ಸ್ವಾತಂತ್ರ್ಯ ಬಂದಿತ್ತೇ..? ಗಾಂಧೀಜಿಯ ಉತ್ಪ್ರೇಕ್ಷೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ವೀರರನ್ನೇ ಮರೆತು ಬಿಟ್ಟೆವು ; ಪ್ರಸಾದ್ ರೈ

15-08-26 10:08 pm       HK News Staffer   ಕರಾವಳಿ

ಗಾಂಧೀಜಿಯನ್ನೇ ಉತ್ಪ್ರೇಕ್ಷೆ ಮಾಡುತ್ತ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಛತ್ರಪತಿ ಶಿವಾಜಿ ಮಹಾರಾಜ್, ರಾಣಾ ಪ್ರತಾಪ್, ವೀರ ಸಾವರ್ಕರ್, ಸುಭಾಶ್ಚಂದ್ರ ಬೋಸ್ ಸೇರಿದಂತೆ ಅನೇಕ ವೀರರು ಯಾರೆಂದೇ ಗೊತ್ತಿಲ್ಲವೆಂಬ ಮಾನಸಿಕತೆ ಜನಮಾನಸದಲ್ಲಿರುವುದಕ್ಕೆ ಇತಿಹಾಸದ ಪಠ್ಯ ಪುಸ್ತಕಗಳಲ್ಲಿದ್ದ ವಿಚಾರಗಳೇ ಕಾರಣವಾಗಿದೆ.

ಉಳ್ಳಾಲ, ಆ.15: ಗಾಂಧೀಜಿಯನ್ನೇ ಉತ್ಪ್ರೇಕ್ಷೆ ಮಾಡುತ್ತ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಛತ್ರಪತಿ ಶಿವಾಜಿ ಮಹಾರಾಜ್, ರಾಣಾ ಪ್ರತಾಪ್, ವೀರ ಸಾವರ್ಕರ್, ಸುಭಾಶ್ಚಂದ್ರ ಬೋಸ್ ಸೇರಿದಂತೆ ಅನೇಕ ವೀರರು ಯಾರೆಂದೇ ಗೊತ್ತಿಲ್ಲವೆಂಬ ಮಾನಸಿಕತೆ ಜನಮಾನಸದಲ್ಲಿರುವುದಕ್ಕೆ ಇತಿಹಾಸದ ಪಠ್ಯ ಪುಸ್ತಕಗಳಲ್ಲಿದ್ದ ವಿಚಾರಗಳೇ ಕಾರಣವಾಗಿದೆ. ಆ.15 ಬ್ರಿಟೀಷರು ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ದಿನವಲ್ಲ, ದೇಶದ ಪ್ರತಿಯೋರ್ವ ವ್ಯಕ್ತಿ ಕ್ರಾಂತಿಕಾರಿಯಾಗಿ ಬ್ರಿಟೀಷರ ಎದೆಯಲ್ಲಿ ಹೆದರಿಕೆಯ ಬೆಂಕಿ ಹಚ್ಚಿ ಎಡಗಾಲಿಂದ ಒದ್ದು ಓಡಿಸಿದ ದಿನವಾಗಿದೆಯೆಂದು ವಿಶ್ವ ಹಿಂದು ಪರಿಷದ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಹೇಳಿದರು.

ವಿಶ್ವ ಹಿಂದು ಪರಿಷದ್, ಬಜರಂಗದಳ ಉಳ್ಳಾಲ ಪ್ರಖಂಡ ವತಿಯಿಂದ ಕೊಲ್ಯ ಶ್ರೀ ಮೂಕಾಂಬಿಕ ಕ್ಷೇತ್ರದ ಆವರಣದಲ್ಲಿ ಶುಕ್ರವಾರ ರಾತ್ರಿ ನಡೆದ ಅಖಂಡ ಭಾರತ ಸಂಕಲ್ಪ ದಿನದ ಸಭೆಯಲ್ಲಿ ದಿಕ್ಸೂಚಿ ಭಾಷಣ ನೆರವೇರಿಸಿ ಅವರು ಮಾತನಾಡಿದರು. 

ಆ.15 ರಂದು ಬೆರಳೆಣಿಕೆಯ ವ್ಯಕ್ತಿಗಳನ್ನಷ್ಟೆ ಸ್ಮರಣೆ ಮಾಡಿ‌ ಬ್ರಿಟೀಷರು ಸ್ವಾತಂತ್ರ್ಯ ಕೊಟ್ಟು ಹೋದರೆಂದು ಬಾಲ್ಯದಲ್ಲಿ ಕೇಳಿರುವ ಭಾಷಣಗಳು ಈಗಲೂ ಕಿವಿಯಲ್ಲಿ ಅನುರಣಿಸುತ್ತಿದೆ. ಇದು ನಿಜನಾ ಎಂಬುದರ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಚಿಂತಿಸಲು ದಾರಿ ತೋರಿಸಿಕೊಟ್ಟಿತ್ತು. ಇವತ್ತು ಕೂಡಾ ದೇಶವನ್ನ ವಿಭಜನೆ ಮಾಡಿದವರನ್ನೇ ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸುವ ರಾಜಕೀಯ ಶಿಕ್ಷಣದ ವ್ಯವಸ್ಥೆ ಬೆಳೆದು ನಿಂತಿದೆ. ಕೇವಲ ಚರಕದಿಂದ ನೂಲು ತೆಗೆದು, ಸಮುದ್ರ ಕಿನಾರೆಯಲ್ಲಿ ಉಪ್ಪು ತಯಾರಿಸಿದರಿಂದ‌ ಸ್ವಾತಂತ್ರ್ಯ ಬಂದಿತ್ತಾ? ಗಾಂಧೀಜಿಯವರ ಬಗ್ಗೆ ನಮ್ಮದೇನೂ ತಕರಾರಿಲ್ಲ, ಅವರ ಕಾಲದಲ್ಲಿ ನಡೆದಾಡುವ ದೇವರೆಂದೇ ಅವರು ಆರಾಧಿಸಲ್ಪಟ್ಟವರಾಗಿದ್ದಾರೆ. ಆದರೆ ಅವರನ್ನೇ ಉತ್ಪ್ರೇಕ್ಷೆ ಮಾಡುತ್ತಾ ಸ್ವಾತಂತ್ರ್ಯ ಹೋರಾಟಕ್ಕೆ ತ್ಯಾಗ, ಬಲಿದಾನ ಮಾಡಿದವರನ್ನ ನಾವು ಮರೆತು ಬಿಟ್ಟಿದ್ದೇವೆ. ಕೇವಲ 1947ರಲ್ಲಿ ನಡೆದದ್ದೇ ಸ್ವಾತಂತ್ರ್ಯ ಹೋರಾಟವಲ್ಲ, ಅದಕ್ಕೂ ಹಿಂದಿನ ಹೋರಾಟದ ಇತಿಹಾಸವನ್ನ ನಾವು ಅರಿತು ಹೋರಾಟಗಾರರನ್ನು ಸ್ಮರಿಸುವ ವಾತಾವರಣ ಸೃಷ್ಟಿಸಬೇಕಿದೆ. ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಂಡ ಬಳಿಕ ದೇಶದ ಸೈನಿಕರು ಇಂದು ಎದೆ ಕೊಟ್ಟು ನಡೆಯುವಂತಾಗಿದೆ. ಭಾರತವನ್ನು ಮತ್ತೆ ಅಖಂಡವಾಗಿ ನೋಡುವ ಸ್ಥಿತಿ ನಿರ್ಮಾಣವಾಗುತ್ತದೆ. ನಮ್ಮಲ್ಲಿ ಇಂದು ಕಾರು, ಬಂಗಲೆ ಇದ್ದರೂ ಸಹ ಮಕ್ಕಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಸುಖಕ್ಕೆ ಧಕ್ಕೆ ಬಾರದೆಂದು ಮಕ್ಕಳೇ ಬೇಡವೆನಿಸಿರುವುದು ಹಿಂದೂ ಸಮಾಜದ ಶೋಚನೀಯ ಸ್ಥಿತಿಯಾಗಿದೆಯೆಂದರು.

ಕೊಲ್ಯ ಶಾರದಾ ಮಂದಿರದಿಂದ ಮೂಕಾಂಬಿಕ ಕ್ಷೇತ್ರದ ವರೆಗೆ ನಡೆದ ಪಂಜಿನ ಮೆರವಣಿಗೆಯಲ್ಲಿ ವಿಶ್ವ ಹಿಂದೂ ಪರಿಷದ್ , ಬಜರಂಗದಳದ ನೂರಾರು ಸ್ವಯಂಸೇವಕರು ಭಾಗವಹಿಸಿದರು.‌ ಮಾಜಿ ಸೈನಿಕರ ಸಂಘ ಅಬ್ಬಕ್ಕ ವಲಯದ ಅಧ್ಯಕ್ಷರಾದ ಕ್ಯಾ.ಜಿ.ಎಸ್ ಪ್ರಸಾದ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಕೊಲ್ಯ ಶ್ರೀ ಮೂಕಾಂಬಿಕಾ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್, ವಿಹಿಂಪ ಉಳ್ಳಾಲ ನಗರ ಪ್ರಖಂಡ‌ದ ಅಧ್ಯಕ್ಷರಾದ ನಾರಾಯಣ ಕುಂಪಲ, ಉಳ್ಳಾಲ ಗ್ರಾಮಾಂತರ ಪ್ರಖಂಡದ ಅಧ್ಯಕ್ಷರಾದ ಶಿವಪ್ರಸಾದ್ ಕೊಣಾಜೆ, ಸಹ ಕಾರ್ಯದರ್ಶಿ ಹರಿಪ್ರಸಾದ್, ಬಜರಂಗದಳ ಉಳ್ಳಾಲ ಗ್ರಾಮಾಂತರ ಪ್ರಖಂಡ ಸಂಚಾಲಕರಾದ ಚೇತನ್ ಅಸೈಗೋಳಿ, ಉಳ್ಳಾಲ ನಗರ ಪ್ರಖಂಡ ಸಂಚಾಲಕರಾದ ಪ್ರದೀಪ್ ಕೆರೆಬೈಲ್, ಪ್ರವೀಣ್ ಬಸ್ತಿ ಮೊದಲಾದವರು ಉಪಸ್ಥಿತರಿದ್ದರು.