ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕೆ ಕಾರು ಅಡ್ಡಗಟ್ಟಿ ಹಲ್ಲೆ ; ಐವರು ಪೊಲೀಸ್ ವಶಕ್ಕೆ, ಕಾರು ಚಾಲಕನ ವಿರುದ್ಧವೂ ಕೇಸು ದಾಖಲು

15-08-26 04:19 pm       HK News Staffer   ಕ್ರೈಂ

ಅಪ್ರಾಪ್ತ ಬಾಲಕಿಯೊಬ್ಬಳನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ತಡೆದು ಹಲ್ಲೆ ನಡೆಸಿದ ಆರೋಪದಡಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದ ಆರೋಪದಲ್ಲಿ ಕಾರು ಚಾಲಕನ ವಿರುದ್ಧವೂ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಕಾರ್ಕಳ ತಾಲೂಕಿನ ಈದು ನಿವಾಸಿ ಶೈಕ್ ಮುಕ್ತಾರ್ (50) ಎಂದು ಗುರುತಿಸಲಾಗಿದೆ.

ಉಪ್ಪಿನಂಗಡಿ, ಆಗಸ್ಟ್ 14: ಅಪ್ರಾಪ್ತ ಬಾಲಕಿಯೊಬ್ಬಳನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ತಡೆದು ಹಲ್ಲೆ ನಡೆಸಿದ ಆರೋಪದಡಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದ ಆರೋಪದಲ್ಲಿ ಕಾರು ಚಾಲಕನ ವಿರುದ್ಧವೂ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಕಾರ್ಕಳ ತಾಲೂಕಿನ ಈದು ನಿವಾಸಿ ಶೈಕ್ ಮುಕ್ತಾರ್ (50) ಎಂದು ಗುರುತಿಸಲಾಗಿದೆ.

ರಸ್ತೆಯಲ್ಲೇ ಕಾರು ಅಡ್ಡಗಟ್ಟಿ ಹಲ್ಲೆ!

ಆಗಸ್ಟ್ 11ರ ರಾತ್ರಿ ಶೈಕ್ ಮುಕ್ತಾರ್ ಅವರು ತಮ್ಮ ಪರಿಚಯಸ್ಥರ ಅಪ್ರಾಪ್ತ ಮಗಳನ್ನು ಕಾರಿನಲ್ಲಿ ಕೂರಿಸಿಕೊಂಡು ಕೆಲಸದ ನಿಮಿತ್ತ ಹಾಸನದ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಕಾರು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕಡ ಕಾಪಿನಬಾಗಿಲು ಎಂಬಲ್ಲಿಗೆ ತಲುಪಿದಾಗ, ರಸ್ತೆಯಲ್ಲಿ ಸೇರಿದ್ದ ಗುಂಪೊಂದು ಕಾರನ್ನು ಅಡ್ಡಗಟ್ಟಿದೆ. ಕಾರಿನಲ್ಲಿದ್ದ ಅಪ್ರಾಪ್ತ ಬಾಲಕಿಯ ಕುರಿತು ವಿಚಾರಿಸಿದ ಗುಂಪು, ಶೈಕ್ ಮುಕ್ತಾರ್ ಅವರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದೆ ಎಂದು ಆತ ದೂರಿನಲ್ಲಿ ಆರೋಪಿಸಿದ್ದಾರೆ.

ಐವರ ವಶಕ್ಕೆ ಪಡೆದು ವಿಚಾರಣೆ

ಶೈಕ್ ಮುಕ್ತಾರ್ ನೀಡಿದ ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ. 106/2026ರಂತೆ BNSನ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಧನುಷ್ (23), ಸೂರಜ್ (25), ರಂಜಿತ್ ಭಂಡಾರಿ (29), ಚಾರ್ಮಾಡಿಯ ದಿನೇಶ್ (45) ಹಾಗೂ ಪುದುವೆಟ್ಟು ನಿವಾಸಿ ಪೂರ್ಣಾಕ್ಷ ಬಿ. (40) ಎಂಬ ಐವರನ್ನು ವಶಕ್ಕೆ ಪಡೆದಿದ್ದಾರೆ.

ಇದೇ ವೇಳೆ, ಅಪ್ರಾಪ್ತ ಬಾಲಕಿಯ ತಾಯಿ ಕೂಡ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಪ್ರತಿದೂರು ನೀಡಿದ್ದಾರೆ. ತಮ್ಮ ದೂರಿನಲ್ಲಿ “ಶೈಕ್ ಮುಕ್ತಾರ್ ನನ್ನ ಮಗಳನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಹೋಗಿದ್ದರು” ಎಂದು ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಶೈಕ್ ಮುಕ್ತಾರ್ ವಿರುದ್ಧ BNS ಕಲಂ 137(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಪ್ರಾಪ್ತ ಮಕ್ಕಳಿಗೆ ಸಂಬಂಧಿಸಿದ ಯಾವುದೇ ಅನುಮಾನಾಸ್ಪದ ಘಟನೆ ಕಂಡುಬಂದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಬದಲು ಪೊಲೀಸರಿಗೆ ಮಾಹಿತಿ ನೀಡುವುದು ಅತ್ಯಂತ ಮುಖ್ಯ. ಅದೇ ರೀತಿ, ಅಪ್ರಾಪ್ತರನ್ನು ಅವರ ಪೋಷಕರ ಅರಿವು ಮತ್ತು ಕಾನೂನುಬದ್ಧ ಸುರಕ್ಷತಾ ಕ್ರಮಗಳಿಲ್ಲದೆ ಎಲ್ಲಿಗೂ ಕರೆದೊಯ್ಯುವ ಸಂದರ್ಭಗಳಲ್ಲಿ ಸೂಕ್ತ ಪರಿಶೀಲನೆ ಅಗತ್ಯ.