ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ ! ದೇರಳಕಟ್ಟೆಯಲ್ಲಿ ರಸ್ತೆ ಡಿವೈಡರ್ ಏರಿ ನಿಂತ ಬಸ್, ಅದೃಷ್ಟವಶಾತ್ ತಪ್ಪಿತು ಭಾರೀ ಅನಾಹುತ

23-06-26 03:18 pm       HK News Staffer   ಕರಾವಳಿ

ಬಸ್ಸು ಚಲಿಸುತ್ತಿದ್ದಾಗಲೇ ಚಾಲಕನಿಗೆ ಬಿಪಿ ಲೋ ಆದ ಪರಿಣಾಮ ನಿಯಂತ್ರಣ ತಪ್ಪಿದ ಬಸ್ಸು ರಸ್ತೆಯ ಡಿವೈಡರ್ ಏರಿ ನಿಂತಿದ್ದು, ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ಬೆಳಗ್ಗೆ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯ ಮುಂಭಾಗ ನಡೆದಿದೆ.

ಉಳ್ಳಾಲ, ಜೂ.23: ಬಸ್ಸು ಚಲಿಸುತ್ತಿದ್ದಾಗಲೇ ಚಾಲಕನಿಗೆ ಬಿಪಿ ಲೋ ಆದ ಪರಿಣಾಮ ನಿಯಂತ್ರಣ ತಪ್ಪಿದ ಬಸ್ಸು ರಸ್ತೆಯ ಡಿವೈಡರ್ ಏರಿ ನಿಂತಿದ್ದು, ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ಬೆಳಗ್ಗೆ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯ ಮುಂಭಾಗ ನಡೆದಿದೆ.

ಮುಡಿಪು -ಸ್ಟೇಟ್ ಬ್ಯಾಂಕಿನ ನಡುವೆ ಸಂಚರಿಸುವ ಗೋಪಾಲಕೃಷ್ಣ ಹೆಸರಿನ ಖಾಸಗಿ ಸರ್ವಿಸ್ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಏರಿದೆ. ಬಸ್ಸು ಮುಡಿಪುವಿನಿಂದ ದೇರಳಕಟ್ಟೆ ತಲುಪಿದಾಗ ಚಾಲಕ ಜನಾರ್ಧನ್ ಅವರಿಗೆ ಬಿಪಿ ಲೋ ಆದ ಪರಿಣಾಮ ಅವರು ಸ್ಟೇರಿಂಗ್ ಮೇಲೆಯೇ ಕುಸಿದಿದ್ದರೆನ್ನಲಾಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಬಸ್ಸು ರಸ್ತೆ ಮಧ್ಯದ ಡಿವೈಡರ್ ಏರಿ ನಿಂತಿದೆ.

ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಯೆನೆಪೋಯ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ವಾಹನ ಚಾಲಕರು ದಿನನಿತ್ಯಲೂ ವಿರುದ್ಧ ಧಿಕ್ಕಿನಲ್ಲಿ ಚಲಿಸಿ ಯೂ-ಟರ್ನ್ ಹೊಡೆಯುತ್ತಿರುತ್ತಾರೆ. ಆದರೆ ಇಂದು ಘಟನೆ ನಡೆದ ಸಂದರ್ಭದಲ್ಲಿ ಬಸ್ಸಿಗೆ ಯಾವುದೇ ವಾಹನಗಳು ಅಡ್ಡ ಸಿಗದ ಕಾರಣ ಅನಾಹುತ ತಪ್ಪಿದಂತಾಗಿದೆ.

ಬಿಪಿ ಲೋ ಆಗಿ ಗಂಭೀರ ಸ್ಥಿತಿಯಲ್ಲಿದ್ದ ಚಾಲಕ ಜನಾರ್ಧನ ಅವರನ್ನು ಅಲ್ಲೇ ಇದ್ದ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಯ ಬಳಿಕ ಅವರು ಚೇತರಿಸಿಕೊಂಡಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.