ಧರ್ಮಸ್ಥಳ ಮೇಲಾಣೆ ಅಡ್ಡ ಮತದಾನ ಮಾಡಿಲ್ಲ, ಮೋದಿ ಬಂದಿದ್ದರಿಂದಲೇ ನನ್ನ ಗೆಲುವಾಗಿತ್ತು ; ಬೇಲೂರು ಶಾಸಕ ಹೆಚ್.ಕೆ. ಸುರೇಶ್

20-06-26 06:40 pm       HK News Staffer   ಕರ್ನಾಟಕ

ನಾನು ಚುನಾವಣೆಯಲ್ಲಿ ಗೆಲ್ಲಲು ಪ್ರಧಾನಿ ಮೋದಿ ಕಾರಣ. ಅವರೇ ನನ್ನ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದ್ದರಿಂದ ಗೆಲುವಾಗಿತ್ತು. ಬಿಜೆಪಿ ಪಕ್ಷ ನನಗೆ ತಾಯಿ ಸಮಾನ. ಪಕ್ಷಕ್ಕೆ ದ್ರೋಹ ಯಾವತ್ತೂ ಮಾಡಲ್ಲ. ಧರ್ಮಸ್ಥಳ ಮಂಜುನಾಥ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ, ನಾನು ಅಡ್ಡ ಮತದಾನ ಮಾಡಿಲ್ಲ ಎಂದು ಬೇಲೂರು ಶಾಸಕ ಹೆಚ್.ಕೆ. ಸುರೇಶ್ ತಿಳಿಸಿದ್ದಾರೆ,

ಬೆಂಗಳೂರು, ಜೂನ್ 20: ನಾನು ಚುನಾವಣೆಯಲ್ಲಿ ಗೆಲ್ಲಲು ಪ್ರಧಾನಿ ಮೋದಿ ಕಾರಣ. ಅವರೇ ನನ್ನ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದ್ದರಿಂದ ಗೆಲುವಾಗಿತ್ತು. ಬಿಜೆಪಿ ಪಕ್ಷ ನನಗೆ ತಾಯಿ ಸಮಾನ. ಪಕ್ಷಕ್ಕೆ ದ್ರೋಹ ಯಾವತ್ತೂ ಮಾಡಲ್ಲ. ಧರ್ಮಸ್ಥಳ ಮಂಜುನಾಥ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ, ನಾನು ಅಡ್ಡ ಮತದಾನ ಮಾಡಿಲ್ಲ ಎಂದು ಬೇಲೂರು ಶಾಸಕ ಹೆಚ್.ಕೆ. ಸುರೇಶ್ ತಿಳಿಸಿದ್ದಾರೆ,

ಪರಿಷತ್ ಚುನಾವಣೆ ಸಂಬಂಧಿಸಿ ವಿಧಾನಸೌಧ ಆವರಣದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಪರಿಷತ್​ ಚುನಾವಣೆಯಲ್ಲಿ ನಾನು ಪ್ರಥಮ ಪ್ರಾಶಸ್ತ್ಯದ ಮತವನ್ನು ಬಿಜೆಪಿಯ ಲಿಂಗರಾಜು ಪಾಟೀಲ್ ಮತ್ತು ಎರಡನೇ ಪ್ರಾಶಸ್ತ್ಯದ ಮತವನ್ನು ಜೆಡಿಎಸ್ ಪಕ್ಷದ ಗೋವಿಂದರಾಜುಗೆ ಹಾಕಿದ್ದೇನೆ ಎಂದರು. ಇದಕ್ಕೆ ಸಾಕ್ಷಿಯಾಗಿ ದೊಡ್ಡಗೌಡನ ಪಾಟೀಲ್ ಮತ್ತು ಅಭ್ಯರ್ಥಿ ಲಿಂಗರಾಜು ಪಾಟೀಲ್ ಅವರೊಡನೆ ಮತ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನಾನು ಹಿಂದುತ್ವ, ಪಕ್ಷದ ಸಿದ್ಧಾಂತ ಮತ್ತು ಶಿಸ್ತಿಗೆ ಬದ್ಧನಾಗಿದ್ದೇನೆ. 2005ರಲ್ಲಿ ಪಕ್ಷ ಸಂಘಟನೆ ಮೇಲೆ ವಿಶ್ವಾಸವಿಟ್ಟು, 300 ಮತಗಳು ಬೀಳುವಂತಹ ಗಂಡಸಿ ವಿಧಾನಸಭಾ ಕ್ಷೇತ್ರದಿಂದ ಸಂಘಟನೆಯ ಧೃಡಸಂಕಲ್ಪವನ್ನು ಮಾಡಿ ಶಾಸಕನಾಗಿದ್ದೇನೆ. ನನ್ನ ಯಶಸ್ಸನ್ನು ಸಹಿಸದೇ ಕೆಲವು ಮುಖಂಡರು, ನನ್ನ ಮೇಲೆ ಹೊರಿಸುತ್ತಿರುವ ಆರೋಪಗಳಿಗೆ ಯಾವುದೇ ದಾಖಲೆ ಅಥವಾ ಪುರಾವೆಗಳನ್ನು ನೀಡದೇ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿರುವುದು ಖಂಡನೀಯ. ಇಂತಹ ಸುಳ್ಳು ಹಾಗೂ ದುರುದ್ದೇಶಪೂರಿತ ಹೇಳಿಕೆಗಳಿಂದ ನನ್ನ ವೈಯುಕ್ತಿಕ ಘನತೆಗೆ, ರಾಜಕೀಯ ವರ್ಚಸ್ಸಿಗೆ ಹಾಗೂ ಹಲವು ವರ್ಷಗಳಿಂದ ಪಕ್ಷಕ್ಕಾಗಿ ಮಾಡಿದ ನನ್ನ ಸೇವೆ, ಬದ್ಧತೆಗೆ ಹಾನಿಯಾಗಿದೆ ಎಂದು ಕಿಡಿಕಾರಿದರು. 

ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ನಾನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ ಹಾಗೂ ಅಡ್ಡ ಮತದಾನವನ್ನು ಮಾಡಿರುವುದಿಲ್ಲ ಎಂದು ಪ್ರಮಾಣೀಕರಿಸುತ್ತೇನೆ. ನನ್ನ ಘನತೆ ಮತ್ತು ರಾಜಕೀಯ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಕೆಲವರು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಅಪಪ್ರಚಾರ ನಡೆಸುತ್ತಿದ್ದಾರೆ. ಅದ್ದರಿಂದ ವಿಪ್ ಉಲ್ಲಂಘನೆಗೆ ಸಂಬಂಧಿಸಿ ಅಥವಾ ಆರ್ಥಿಕ ಆಮಿಷಕ್ಕೆ ಒಳಗಾಗಿರುವ ಬಗ್ಗೆಯಾಗಲೀ, ಮತ್ತು ಇನ್ನಿತರ ಆರೋಪಗಳ ಬಗ್ಗೆಯಾಗಲಿ, ಸತ್ಯಾಸತ್ಯತೆಯನ್ನು ಪತ್ತೆಹಚ್ಚಲು, ಸತ್ಯಶೋಧನಾ ಸಮಿತಿ ರಚಿಸಿ ಪರಿಶೀಲಿಸಿ. ನನ್ನ ಬಗ್ಗೆ ಅಪಪ್ರಚಾರ ನಡೆಸಿರುವವರ ವಿರುದ್ಧ ಹಾಗೂ ಸುಳ್ಳು ಆರೋಪ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ತಡವಾಗಿ ಮತದಾನಕ್ಕೆ ಹೋಗಿರುವ ಕಾರಣ ಈ ರೀತಿ ಆರೋಪವನ್ನು ಮಾಡಿದ್ದಾರೆ. ಜೂನ್ 18ರಂದು ರಾಘವೇಂದ್ರ ಸ್ವಾಮಿಗಳ ವಿಶೇಷ ದಿನವಾಗಿದ್ದು, ನನ್ನ ಮಗನ ಮದುವೆಯ ವಿಚಾರ ಸಂಬಂಧ ವಧುವಿನ ಮನೆಯವರು ತಕ್ಷಣ ನಮ್ಮ ಮನೆಗೆ ಬಂದ ಕಾರಣ ನನ್ನ ಮತ ಕ್ಷೇತ್ರದಿಂದ ನಾನು ಒಂದಿಷ್ಟು ತಡವಾಗಿ ಮತದಾನಕ್ಕೆ ಬಂದಿದ್ದು, ಆ ಕಾರಣವನ್ನು ಇಟ್ಟುಕೊಂಡು ಕೆಲವು ಮುಖಂಡರು ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ನನ್ನ ಬಗ್ಗೆ ಸುಳ್ಳುಸುದ್ದಿಗಳು ಹಾಗೂ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ನನಗೆ ಮತ್ತು ನನ್ನ ಕ್ಷೇತ್ರದ ಜನತೆಗೆ ಬಹಳ ನೋವುಂಟಾಗಿದೆ ಎಂದರು. 

ನಾಯಕತ್ವದ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದು. ಪಕ್ಷವನ್ನು ಮಾತೃ ಸ್ವರೂಪವಾಗಿ ಗೌರವಿಸುತ್ತೇನೆ. ನನ್ನ ಪಕ್ಷದ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಚಟುವಟಿಕೆಯಲ್ಲೂ ಭಾಗಿಯಾಗಿರುವುದಿಲ್ಲ. ಇತರೇ ಪಕ್ಷದ ಯಾವುದೇ ಮುಖಂಡರುಗಳಿಂದಾಗಲಿ, ಕಾರ್ಯಕರ್ತರ ಬಳಿಯಿಂದಾಗಲಿ, ಆಸೆ, ಆಮಿಷಕ್ಕೆ ಒಳಗಾಗಿಲ್ಲ. ನಾನು ಆರ್ಥಿಕವಾಗಿ ದೇವರ ದಯೆಯಿಂದ ಸಧೃಡನಾಗಿದ್ದೇನೆ. ಕಳೆದ ಎರಡು ಚುನಾವಣೆಯಲ್ಲಿ ಪರಾಭಾವವನ್ನು ಹೊಂದಿದ್ದರೂ ಪಕ್ಷದ ಹೋರಾಟದ ಫಲವಾಗಿ 2023ರಲ್ಲಿ ಶಾಸಕನಾಗಲು ಕ್ಷೇತ್ರದ ಜನ ಆಶೀರ್ವಾದ ಮಾಡಿದ್ದಾರೆ ಎಂದರು.