ಬೆಂಗಳೂರು -ಮಂಗಳೂರು 5 ಗಂಟೆ ಪ್ರಯಾಣದ ಕನಸಿಗೆ ಬ್ರೇಕ್ ; ಶಿರಾಡಿ ಜಂಟಿ ಸುರಂಗ ಯೋಜನೆಯಿಂದ ಹಿಂದೆ ಸರಿದ ರೈಲ್ವೇ, ಪ್ರತ್ಯೇಕ ಸುರಂಗ ನಿರ್ಮಾಣಕ್ಕೆ ಹೆದ್ದಾರಿ ಇಲಾಖೆ ನಿರ್ಧಾರ

19-06-26 07:48 pm       HK News Staffer   ಕರಾವಳಿ

ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಾಣದ ಅವಧಿಯನ್ನು 8-9 ಗಂಟೆಗಳಿಂದ ಕೇವಲ 5 ಗಂಟೆಗಳಿಗೆ ಇಳಿಸುವ ಮಹತ್ವಾಕಾಂಕ್ಷೆಯ ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆಗೆ ಮಹತ್ವದ ತಿರುವು ಸಿಕ್ಕಿದೆ. ರಸ್ತೆ ಮತ್ತು ರೈಲು ಮಾರ್ಗವನ್ನು ಒಂದೇ ಸುರಂಗದಲ್ಲಿ ನಿರ್ಮಿಸುವ ಪ್ರಸ್ತಾವನೆಗೆ ತಾಂತ್ರಿಕ ಅಡೆತಡೆ ಎದುರಾಗಿದ್ದು, ರೈಲ್ವೆ ಇಲಾಖೆ ಜಂಟಿ ಯೋಜನೆಯಿಂದ ಹಿಂದೆ ಸರಿಯಲು ಮುಂದಾಗಿದೆ.

ಮಂಗಳೂರು, ಜೂನ್ 19: ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಾಣದ ಅವಧಿಯನ್ನು 8-9 ಗಂಟೆಗಳಿಂದ ಕೇವಲ 5 ಗಂಟೆಗಳಿಗೆ ಇಳಿಸುವ ಮಹತ್ವಾಕಾಂಕ್ಷೆಯ ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆಗೆ ಮಹತ್ವದ ತಿರುವು ಸಿಕ್ಕಿದೆ. ರಸ್ತೆ ಮತ್ತು ರೈಲು ಮಾರ್ಗವನ್ನು ಒಂದೇ ಸುರಂಗದಲ್ಲಿ ನಿರ್ಮಿಸುವ ಪ್ರಸ್ತಾವನೆಗೆ ತಾಂತ್ರಿಕ ಅಡೆತಡೆ ಎದುರಾಗಿದ್ದು, ರೈಲ್ವೆ ಇಲಾಖೆ ಜಂಟಿ ಯೋಜನೆಯಿಂದ ಹಿಂದೆ ಸರಿಯಲು ಮುಂದಾಗಿದೆ.

ರಸ್ತೆ-ರೈಲು ಜಂಟಿ ಯೋಜನೆಗೆ ತಾಂತ್ರಿಕ ಅಡ್ಡಿ

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ವ್ಯಾಪ್ತಿಯ ಸುಮಾರು 42 ಕಿಲೋಮೀಟರ್ ಅಪಾಯಕಾರಿ ಮಾರ್ಗವನ್ನು ಸುರಂಗದ ಮೂಲಕ ನೇರವಾಗಿಸುವ ಯೋಜನೆಗೆ ಭಾರೀ ನಿರೀಕ್ಷೆ ವ್ಯಕ್ತವಾಗಿತ್ತು. ಆದರೆ ಇತ್ತೀಚಿನ ಜಂಟಿ ಸರ್ವೆ ವೇಳೆ ಭೌಗೋಳಿಕ ಏರಿಳಿತಗಳು ಯೋಜನೆಗೆ ಸವಾಲಾಗಿ ಪರಿಣಮಿಸಿವೆ. ಹೆದ್ದಾರಿ ಇಲಾಖೆಯ ನಿಯಮಗಳ ಪ್ರಕಾರ ಸುರಂಗ ರಸ್ತೆಗೆ 1:50 ಗ್ರೇಡಿಯಂಟ್ ಸಾಕಾಗುತ್ತದೆ. ಇದರ ಆಧಾರದ ಮೇಲೆ ಸುಮಾರು 38 ಕಿಲೋಮೀಟರ್ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಸಾಧ್ಯವಾಗಲಿದೆ.

ಆದರೆ ರೈಲ್ವೆ ಇಲಾಖೆಯ ಸುರಕ್ಷತಾ ಮಾನದಂಡಗಳ ಪ್ರಕಾರ 1:150 ಗ್ರೇಡಿಯಂಟ್ ಕಡ್ಡಾಯವಾಗಿದೆ. ಹೀಗಾಗಿ ಇದೇ ಮಾದರಿಯಲ್ಲಿ ರೈಲು ಹಳಿ ನಿರ್ಮಿಸಲು ಸುಮಾರು 88 ಕಿಲೋಮೀಟರ್ ಉದ್ದದ ಸುರಂಗ ಅಗತ್ಯವಾಗುತ್ತದೆ ಎಂದು ರೈಲ್ವೇ ಅಧಿಕಾರಿಗಳು ಅಂದಾಜಿಸಿದ್ದಾರೆ.‌ ಹೀಗಾಗಿ 38 ಕಿಲೋಮೀಟರ್ ರಸ್ತೆ ಸುರಂಗ ಮತ್ತು 88 ಕಿಲೋಮೀಟರ್ ರೈಲು ಸುರಂಗವನ್ನು ಒಂದೇ ಪ್ರಕಾರದಲ್ಲಿ ಜೋಡಿಸುವುದು ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಕಷ್ಟಸಾಧ್ಯ ಎಂಬ ಅಭಿಪ್ರಾಯಕ್ಕೆ ರೈಲ್ವೆ ಇಲಾಖೆ ಬಂದಿದೆ. 

ಇದರಿಂದಾಗಿ ರಸ್ತೆ ಮತ್ತು ರೈಲು ಯೋಜನೆಗಳನ್ನು ಪ್ರತ್ಯೇಕ ಅನುಷ್ಠಾನಗೊಳಿಸಲು ಎರಡೂ ಇಲಾಖೆಗಳು ಚಿಂತನೆ ನಡೆಸುತ್ತಿವೆ.
ಹೆದ್ದಾರಿ ಇಲಾಖೆಗೆ ದೊಡ್ಡ ತಾಂತ್ರಿಕ ಅಡೆತಡೆಗಳಿಲ್ಲದ ಕಾರಣ, ರಸ್ತೆ ಸುರಂಗ ಯೋಜನೆಯನ್ನು ಶೀಘ್ರವಾಗಿ ಅನುಷ್ಟಾನಕ್ಕೆ ತರುವ ಸಿದ್ಧತೆ ನಡೆದಿದೆ. ಏರಿಳಿತದ ಅಂತಿಮ ನಕ್ಷೆ ಸಿದ್ಧವಾದ ಬಳಿಕ ವಿವರವಾದ ಯೋಜನಾ ವರದಿ ತಯಾರಿಸಿ, ಟೆಂಡರ್ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ.  ಆಮೂಲಕ ಬೆಂಗಳೂರು- ಮಂಗಳೂರು ನಡುವಿನ ರಸ್ತೆ ಪ್ರಯಾಣವನ್ನು ಗಣನೀಯ ಕಡಿಮೆ ಮಾಡುವ ಕನಸು ಶೀಘ್ರ ಸಾಕಾರವಾಗುವ ನಿರೀಕ್ಷೆ ಮೂಡಿದೆ. 

ರೈಲು ಯೋಜನೆಗೆ ವಿಳಂಬ ಸಾಧ್ಯತೆ

ರೈಲ್ವೆ ಇಲಾಖೆ ಸುರಕ್ಷತೆ ಹಾಗೂ ತಾಂತ್ರಿಕ ಮಾನದಂಡಗಳ ವಿಚಾರದಲ್ಲಿ ಕಟ್ಟುನಿಟ್ಟಿನ ನಿಲುವು ಹೊಂದಿರುವುದರಿಂದ, ಕರಾವಳಿ ಭಾಗದ ರೈಲು ಸುರಂಗ ಯೋಜನೆ ವಿಳಂಬವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬೆಳವಣಿಗೆ ಬೆನ್ನಲ್ಲೇ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂಬರುವ ಸಂಸತ್ ಅಧಿವೇಶನದ ವೇಳೆ ರೈಲ್ವೆ ಹಾಗೂ ರಸ್ತೆ ಸಾರಿಗೆ ಸಚಿವರೊಂದಿಗೆ ಚರ್ಚೆ ನಡೆಸಿ ಯೋಜನೆಯ ಕಗ್ಗಂಟು ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.