ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ; ಕಾರಿಗೆ ಬೆಂಕಿ ಹಚ್ಚಿ ಮೂವರ ಹತ್ಯೆ, ನಾಲ್ವರು ಆರೋಪಿಗಳ ಸೆರೆ

18-06-26 07:17 pm       HK News Staffer   ದೇಶ - ವಿದೇಶ

ಛತ್ತೀಸ್ಗಢದಲ್ಲಿ ಮರಳು ಮಾಫಿಯಾದ ಅಟ್ಟಹಾಸ ಮಿತಿಮೀರಿದ್ದು, ಬಿಜೆಪಿ ಮುಖಂಡರೊಬ್ಬರನ್ನು ಕಾರಿನೊಳಗೆ ಸಿಲುಕಿಸಿ ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಈ ಭೀಕರ ಕೃತ್ಯದಲ್ಲಿ ಬಿಜೆಪಿ ನಾಯಕ ಭರತ್ ಸಿಂಗ್ ಸೇರಿದಂತೆ ಮೂವರು ಸಜೀವ ದಹನವಾಗಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.

ಛತ್ತೀಸ್ಗಢ, ಜೂನ್ 18: ಛತ್ತೀಸ್ಗಢದಲ್ಲಿ ಮರಳು ಮಾಫಿಯಾದ ಅಟ್ಟಹಾಸ ಮಿತಿಮೀರಿದ್ದು, ಬಿಜೆಪಿ ಮುಖಂಡರೊಬ್ಬರನ್ನು ಕಾರಿನೊಳಗೆ ಸಿಲುಕಿಸಿ ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಈ ಭೀಕರ ಕೃತ್ಯದಲ್ಲಿ ಬಿಜೆಪಿ ನಾಯಕ ಭರತ್ ಸಿಂಗ್ ಸೇರಿದಂತೆ ಮೂವರು ಸಜೀವ ದಹನವಾಗಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.

ಕೊರಿಯಾ ಜಿಲ್ಲೆಯ ಸೋನ್ಹತ್ ಪೊಲೀಸ್ ಠಾಣೆ ವ್ಯಾಪ್ತಿಯ ನೌಗೈನ್ ಗ್ರಾಮದಲ್ಲಿ ಈ ರಕ್ತಸಿಕ್ತ ಘಟನೆ ನಡೆದಿದ್ದು, ಮರಳು ಗಣಿಗಾರಿಕೆ ವಿವಾದವೇ ಹತ್ಯೆಗೆ ಕಾರಣ ಎನ್ನಲಾಗಿದೆ.

ಟ್ರಕ್‌ಗಳ ನಡುವೆ ಕಾರು ಸಿಲುಕಿಸಿ ಬೆಂಕಿ
ಮರಳು ಗಣಿಗಾರಿಕೆ ಸಂಬಂಧದ ವಿವಾದ ಬಗೆಹರಿಸಲು ಭರತ್ ಸಿಂಗ್ ತಮ್ಮ ಫಾರ್ಚೂನರ್ ಕಾರಿನಲ್ಲಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಹೊಂಚು ಹಾಕಿದ್ದ ಎದುರಾಳಿ ಬಣ, ಕಾರಿನ ಮುಂದೆ ಮತ್ತು ಹಿಂದೆ ಎರಡು ಟ್ರಕ್‌ಗಳನ್ನು ಅಡ್ಡಗಟ್ಟಿ ತಪ್ಪಿಸಿಕೊಳ್ಳದಂತೆ ಸುತ್ತುವರಿದಿದೆ.

ಬಳಿಕ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಭರತ್ ಸಿಂಗ್ ಸ್ಥಳದಲ್ಲೇ ಕಾರಿನೊಳಗೆ ಸಜೀವ ದಹನಗೊಂಡಿದ್ದಾರೆ. ಅವರೊಂದಿಗೆ ಇದ್ದ ಸೋದರ ಸಂಬಂಧಿ ನಾಗೇಂದ್ರ ಸಿಂಗ್ ಕೂಡ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವೀರೇಂದ್ರ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಗಾಯಾಳು ಮಯಾಂಕ್ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮರಳು ವ್ಯವಹಾರದಿಂದ ಶುರುವಾದ ರಕ್ತಸಿಕ್ತ ವೈಷಮ್ಯ
ಪ್ರಾಥಮಿಕ ತನಿಖೆಯ ಪ್ರಕಾರ, ಭರತ್ ಸಿಂಗ್ (ಠಾಕೂರ್) ಬಣ ಹಾಗೂ ಮತ್ತೊಬ್ಬ ಬಿಜೆಪಿ ನಾಯಕ ಮನೋಜ್ ತ್ರಿಪಾಠಿ ಕುಟುಂಬದ ನಡುವೆ ಈ ಭಾಗದ ಮರಳು ಗಣಿಗಾರಿಕೆ ಮತ್ತು ಸಾಗಣೆ ನಿಯಂತ್ರಣಕ್ಕಾಗಿ ಹಲವು ತಿಂಗಳುಗಳಿಂದ ವೈಷಮ್ಯ ನಡೆಯುತ್ತಿತ್ತು.

ಮೊದಲಿಗೆ ವ್ಯಾಪಾರಿಕ ವಿವಾದವಾಗಿದ್ದ ಸಂಘರ್ಷ, ನಂತರ ಸ್ಥಳೀಯ ಪ್ರಾಬಲ್ಯದ ಹೋರಾಟವಾಗಿ ಮಾರ್ಪಟ್ಟು ಕೊನೆಗೆ ಭೀಕರ ಹತ್ಯಾಕಾಂಡಕ್ಕೆ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ನಾಲ್ವರು ಆರೋಪಿಗಳ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಷತ್ ತ್ರಿಪಾಠಿ, ವಿಶಾಲ್ ತ್ರಿಪಾಠಿ, ಸತ್ಯಪ್ರಕಾಶ್ ತ್ರಿಪಾಠಿ ಹಾಗೂ ಮನ್ನು ತ್ರಿಪಾಠಿ ಸೇರಿದಂತೆ ನಾಲ್ವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಐವರು ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ.

ಸಿಬಿಐ ತನಿಖೆಗೆ ಕುಟುಂಬಸ್ಥರ ಒತ್ತಾಯ
“ಇದು ಆಕಸ್ಮಿಕ ಘಟನೆ ಅಲ್ಲ. ಪೂರ್ವಯೋಜಿತವಾಗಿ ನಡೆಸಿದ ಕೊಲೆ” ಎಂದು ಆರೋಪಿಸಿರುವ ಮೃತರ ಕುಟುಂಬಸ್ಥರು, ಪ್ರಕರಣವನ್ನು ಸಿಬಿಐಗೆ ವಹಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ತಪ್ಪಿತಸ್ಥರನ್ನು ಬಿಡುವುದಿಲ್ಲ: ಸಿಎಂ ವಿಷ್ಣು ದೇವ್ ಸಾಯಿ
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, “ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಪ್ರಮುಖ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.

ಈ ಘಟನೆಗೆ ಸ್ಥಳೀಯ ಶಾಸಕ ಭಯ್ಯಾಲಾಲ್ ರಾಜ್‌ವಾಡೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, “ಕೊರಿಯಾ ಜಿಲ್ಲೆಯ ಇತಿಹಾಸದಲ್ಲೇ ಇಂತಹ ಕ್ರೂರ ಘಟನೆ ನಡೆದಿಲ್ಲ” ಎಂದು ಹೇಳಿದ್ದಾರೆ. ಹತ್ಯೆ ಪ್ರಕರಣದ ಬಳಿಕ ಇಡೀ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.