Chandrashekhar, Belthangady: ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಪಲ ಚನ್ನಿಗರಾಯ! ಸಹೋದ್ಯೋಗಿ ಮಹಿಳೆಯ ಗಲ್ಲ, ಬೆನ್ನು ಸವರಿ ಲೈಂಗಿಕ ಕಿರುಕುಳ ; ಆರೋಗ್ಯ ಇಲಾಖೆಗೆ ಇದು ದೊಡ್ಡ ಸಂಗತಿ ಅಲ್ವಂತೆ !

16-06-26 02:34 pm       HK News Staffer   ಕ್ರೈಂ

ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಉಗ್ರಾಣ ವಿಭಾಗದಲ್ಲಿ ಫಾರ್ಮಸಿ ಅಧಿಕಾರಿಯಾಗಿರುವ ಚಂದ್ರಶೇಖರ್ ಎಂಬಾತ ತನ್ನ ಸಹೋದ್ಯೋಗಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಅಲ್ಲಿಯೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.

ಮಂಗಳೂರು, ಜೂನ್ 16: ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಉಗ್ರಾಣ ವಿಭಾಗದಲ್ಲಿ ಫಾರ್ಮಸಿ ಅಧಿಕಾರಿಯಾಗಿರುವ ಚಂದ್ರಶೇಖರ್ ಎಂಬಾತ ತನ್ನ ಸಹೋದ್ಯೋಗಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಅಲ್ಲಿಯೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.

ಮಹಿಳೆ ನೀಡಿರುವ ದೂರಿನಲ್ಲಿ 2026ರ ಜನವರಿ 1ರಂದು ಚಂದ್ರಶೇಖರ್ ತನ್ನ ಗಲ್ಲ, ಕುತ್ತಿಗೆಯನ್ನು ಮುಟ್ಟಿ ನೀನು ಬಾರೀ ಚಂದ ಕಾಣುತ್ತಿದ್ದೀಯಾ ಎಂದು ಹೇಳಿ ಮೈಯನ್ನು ಸವರಿದ್ದಾರೆ. ಇದಲ್ಲದೆ, ಈ ಹಿಂದೆಯೂ ಆರೋಪಿತ ವ್ಯಕ್ತಿ ಮಹಿಳೆಯನ್ನು ಒಳಗೆ ಕರೆಸಿಕೊಂಡು ಕೈ, ಬೆನ್ನು ಮುಟ್ಟುವುದು, ಸೊಂಟ, ಎದೆಯ ಭಾಗವನ್ನು ಸ್ಪರ್ಶಿಸುವುದು ಇತ್ಯಾದಿ ರೀತಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ಸದ್ರಿ ಮಹಿಳೆಯು ಆರೋಪಿತನ ಕೈಕೆಳಗಡೆ ಕೆಲಸ ಮಾಡುತ್ತಿರುವುದರಿಂದ ಈ ಬಗ್ಗೆ ಹೊರಗಡೆ ತಿಳಿಸಿದರೆ ಕೆಲಸದಿಂದ ತೆಗೆದು ಹಾಕುವುದಾಗಿ ಭಯದಿಂದ ಯಾರಿಗೂ ಹೇಳಿರಲಿಲ್ಲ. ಇತ್ತೀಚೆಗೆ ಮಹಿಳೆಯ ತಮ್ಮ ಮೃತಪಟ್ಟಿದ್ದರಿಂದ ಮಾನಸಿಕ ಆಘಾತದಲ್ಲಿದ್ದರೂ ಆರೋಪಿತ ವ್ಯಕ್ತಿ ಮಾನಸಿಕ ಕಿರುಕುಳ, ಹಿಂಸೆ ನೀಡುವುದನ್ನು ಮುಂದುವರಿಸಿದ್ದರಿಂದ ತಡವಾಗಿ ಪೊಲೀಸ್ ದೂರು ನೀಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಜೂನ್ 11ರಂದು ಎಫ್ಐಆರ್ ದಾಖಲಾಗಿದ್ದರೂ, ಪೊಲೀಸರು ಮಾತ್ರ ಆರೋಪಿತ ಸರ್ಕಾರಿ ಅಧಿಕಾರಿಯೆಂಬ ನೆಲೆಯಲ್ಲಿ ಕ್ರಮ ಜರುಗಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯು ತನ್ನ ಕೆಲಸಕ್ಕೆ ರಾಜಿನಾಮೆ ಕೊಟ್ಟು ಪೊಲೀಸ್ ದೂರು ನೀಡಿದ್ದಾರಂತೆ. ಇದೇ ವೇಳೆ, ಆರೋಪಿ ಚಂದ್ರಶೇಖರ್ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ 25 ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆಂದು ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಎಚ್.ಆರ್ ತಿಮ್ಮಯ್ಯ, ನಾವು ಘಟನೆ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಗೆ ಬರೆದಿದ್ದು, ಆಂತರಿಕ ತನಿಖೆ ನಡೆಸಲಾಗುತ್ತಿದೆ. ಆಂತರಿಕ ತನಿಖೆಯಲ್ಲಿ ಕಿರುಕುಳ ನೀಡಿರುವುದು ಸಾಬೀತಾದರೆ ಕ್ರಮ ಜರುಗಿಸುತ್ತೇವೆ. ಆ ವ್ಯಕ್ತಿ 2014ರಿಂದ ಸದ್ರಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದು, ಮುಂದಿನ ವರ್ಷ ವರ್ಗಾವಣೆ ಆಗಲಿದ್ದಾರೆ ಎಂದು ತಿಳಿಸಿದ್ದಾರೆ. ಇವರ ಲೆಕ್ಕದಲ್ಲಿ ಸಹೋದ್ಯೋಗಿ ಮಹಿಳೆಗೆ ಕಿರುಕುಳ ಎನ್ನುವುದು ಸಾಮಾನ್ಯ ಸಂಗತಿ ಆಗಿರಬೇಕು.

ಸಾಮಾನ್ಯವಾಗಿ ಯಾವುದೇ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪೊಲೀಸರು ತುರ್ತಾಗಿ ಕ್ರಮ ಜರುಗಿಸುತ್ತಾರೆ. ಆರೋಪಿ ಸಾಮಾನ್ಯ ವ್ಯಕ್ತಿಯಾದಲ್ಲಿ ಕೂಡಲೇ ಬಂಧಿಸಿ ಜೈಲಿಗೆ ತಳ್ಳುವುದು ರೂಢಿ. ಜಾಲತಾಣದಲ್ಲಿ ಕಿರುಕುಳದ ಭಾಷೆಯಲ್ಲಿ ಕಮೆಂಟ್ ಮಾಡಿದರೂ ಅವರನ್ನು ಬಂಧಿಸುತ್ತಾರೆ. ಆದರೆ ಸರ್ಕಾರಿ ಇಲಾಖೆಯ ಅಧಿಕಾರಿ ಆರೋಪಿಯಾದರೆ, ಕರ್ತವ್ಯ ಸಂದರ್ಭದಲ್ಲಿ ಕೃತ್ಯ ಎಸಗಿದ್ದರೆ ಕ್ರಮಕ್ಕೆ ಮೇಲಧಿಕಾರಿಗಳ ಹುಕುಂ ಬರುವುದಕ್ಕಾಗಿ ಮೀನ ಮೇಷ ಎಣಿಸುತ್ತಾರೆ. ಈ ಪ್ರಕರಣದಲ್ಲಿಯೂ ಬೆಳ್ತಂಗಡಿ ಪೊಲೀಸರು ಕಾನೂನನ್ನು ತಕ್ಕಡಿಯಲ್ಲಿಟ್ಟು ಸಮಯ ತಳ್ಳುತ್ತಿದ್ದಾರೆ.

A pharmacy officer working in the drug storage section of the Government Hospital in Belthangady has been booked following allegations of sexual harassment made by a female colleague employed on a contract basis.