ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದಾಗ ಬೆಚ್ಚಿಬಿದ್ದ ಸಿಬ್ಬಂದಿ; ತುಮಕೂರಿನಲ್ಲಿ 50 ಗ್ರಾಂ ಚಿನ್ನ ಕದ್ದ ಇಲಿ !

30-07-26 09:27 pm       HK News Staffer   ಕರ್ನಾಟಕ

ನಗರದ ಪ್ರತಿಷ್ಠಿತ ವಿಶ್ವಾಸ್ ಜ್ಯುವೆಲರಿ ಶಾಪ್‌ನಲ್ಲಿ ವಿಭಿನ್ನವಾದ ಚಿನ್ನಾಭರಣ ನಾಪತ್ತೆ ಪ್ರಕರಣ ನಡೆದಿದ್ದು, ಅಚ್ಚರಿ ಮೂಡಿಸಿದೆ.

ತುಮಕೂರು, ಜುಲೈ 30: ನಗರದ ಪ್ರತಿಷ್ಠಿತ ವಿಶ್ವಾಸ್ ಜ್ಯುವೆಲರಿ ಶಾಪ್‌ನಲ್ಲಿ ವಿಭಿನ್ನವಾದ ಚಿನ್ನಾಭರಣ ನಾಪತ್ತೆ ಪ್ರಕರಣ ನಡೆದಿದ್ದು, ಅಚ್ಚರಿ ಮೂಡಿಸಿದೆ.

ಅಂಗಡಿಯಿಂದ ಸುಮಾರು 50 ಗ್ರಾಂಗೂ ಅಧಿಕ ವಜ್ರ ಹಾಗೂ ಚಿನ್ನಾಭರಣಗಳು ನಾಪತ್ತೆಯಾಗಿದ್ದರಿಂದ ಮಾಲೀಕರು ಮತ್ತು ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು. ನಾಪತ್ತೆಯಾದ ಆಭರಣಗಳ ಮೌಲ್ಯ ಸುಮಾರು ₹10 ಲಕ್ಷ ಎಂದು ಅಂದಾಜಿಸಲಾಗಿದೆ.

ನಗರದ ಕಾಲ್ ಟೆಕ್ಸ್ ಸರ್ಕಲ್ ಸಮೀಪದ ವಿಶ್ವಾಸ್ ಜ್ಯುವೆಲರಿ ಶಾಪ್‌ನಲ್ಲಿ ಈ ಘಟನೆ ನಡೆದಿದ್ದು, ಬೆಳಗ್ಗೆ ಅಂಗಡಿ ತೆರೆದಾಗ ಕೆಲವು ಸರಗಳು ಮತ್ತು ಉಂಗುರಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಆದರೆ ಅಂಗಡಿಯ ಶಟರ್ ಅಥವಾ ಬಾಗಿಲು ಮುರಿದಿರುವ ಯಾವುದೇ ಗುರುತುಗಳಿರಲಿಲ್ಲ. ಅಲ್ಲದೆ ಹೊರಗಿನಿಂದ ಯಾರಾದರೂ ಅಂಗಡಿಗೆ ಪ್ರವೇಶಿಸಿರುವ ಸುಳಿವು ಕೂಡ ಸಿಕ್ಕಿರಲಿಲ್ಲ.

ಘಟನೆಯ ಹಿನ್ನೆಲೆ ತಿಳಿಯಲು ಮಾಲೀಕರು ಮತ್ತು ಸಿಬ್ಬಂದಿ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಸಿಸಿಟಿವಿಯಲ್ಲಿ ಒಂದು ಇಲಿ ಸದ್ದಿಲ್ಲದೆ ಅಂಗಡಿಯೊಳಗೆ ಓಡಾಡಿ, ವಜ್ರಾಭರಣಗಳನ್ನು ಒಂದೊಂದಾಗಿ ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು ದಾಖಲಾಗಿದ್ದವು. ಇಲಿಯ ಚಲನವಲನವನ್ನು ಗಮನಿಸಿದ ಸಿಬ್ಬಂದಿ ಅದರ ಜಾಡು ಹಿಡಿದು ಬಿಲವನ್ನು ಪತ್ತೆಹಚ್ಚಿದರು. ಬಳಿಕ ಬಿಲವನ್ನು ತೋಡಿದಾಗ ಸುಮಾರು 10 ಉಂಗುರಗಳು ಹಾಗೂ 3 ಚಿನ್ನದ ಸರಗಳು ಸೇರಿದಂತೆ ವಜ್ರ ಖಚಿತ ಆಭರಣಗಳು ಪತ್ತೆಯಾಗಿವೆ.

ನಾಪತ್ತೆಯಾಗಿದ್ದ ಎಲ್ಲಾ ಆಭರಣಗಳು ಸುರಕ್ಷಿತವಾಗಿ ಸಿಕ್ಕ ಹಿನ್ನೆಲೆಯಲ್ಲಿ ಜ್ಯುವೆಲರಿ ಶಾಪ್ ಮಾಲೀಕರು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಈ ಅಪರೂಪದ ಘಟನೆ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ.

ಚಿನ್ನಾಭರಣ ಹಾಗೂ ವಜ್ರದ ಆಭರಣಗಳಿಗೆ ಸಿಕ್ಕಿಸಲಾಗಿದ್ದ ಟ್ಯಾಗ್​ಗಳನ್ನು ಇಲಿಗಳು ತಿಂದು ಹಾಕಿರುವಂತಹದ್ದು ಪತ್ತೆಯಾಗಿದೆ.

ಮಾಲೀಕನ ಹೇಳಿಕೆ ; 

"ಪ್ರತಿ ದಿನ ಬೆಳಗ್ಗೆ ನಾವು ಚಿನ್ನಾಭರಣದ ಕೌಂಟಿಂಗ್​ ಮಾಡುತ್ತೇವೆ. ಇದೇ ತರಹ ಪರಿಶೀಲನೆ ಮಾಡಿದಾಗ ನಮ್ಮ ಸಿಬ್ಬಂದಿ 10 ಉಂಗುರ 2 ಸರದ ವ್ಯತ್ಯಾಸ ಇದೆ, ಇದು ಹೇಗೆ ಸಾಧ್ಯ ಎಂದು ನನ್ನ ಬಳಿ ಹೇಳಿದಾಗ ನಾನು ಲೆಕ್ಕಾಚಾರದಲ್ಲಿ ತಪ್ಪಾಗಿರಬಹುದು. ಇನ್ನೊಂದು ಬಾರಿ ನೋಡಿ ನೋಡಿ ಎಂದಿದ್ದೆ. ಅವರು ಮತ್ತೆ ಮತ್ತೆ ಪರಿಶೀಲಿಸಿದರೂ ಕಡಿಮೆ ಬಂತು. ಮೊದಲಿಗೆ ನಾವು ಗ್ರಾಹಕರು ಕದ್ದಿರಬಹುದು ಎಂದು ಸಂಶಯ ಪಟ್ಟೆವು. ತಕ್ಷಣ ಸಿಸಿಟಿವಿ ಪರಿಶೀಲಿಸಿದೆವು. ಆದರೆ ಅಲ್ಲಿ ಕಳ್ಳತನ ಆಗಿಲ್ಲ. ಇದೇ ವೇಳೆ ಮತ್ತೊಬ್ಬ ಸಿಬ್ಬಂದಿ ಇನ್ನೊಂದು ಟ್ರೇ ಅಲ್ಲಿ ಉಂಗುರಗಳು ಇವೆ, ಆದರೆ ಟ್ಯಾಗ್​ಗಳು ಇಲ್ಲ ಎಂದರು. ಹೀಗಾಗಿ ಮತ್ತೆ ನಮ್ಮ ಎಲ್ಲಾ ಟೀಂ ರಾತ್ರಿಯಿಡೀ ಸಿಸಿಟಿವಿಯನ್ನು ಸೂಕ್ಷ್ಮವಾಗಿ ಗಮನಿಸಿದೆವು. ಈ ವೇಳೆ ಒಂದು ಇಲಿ ಚಿನ್ನದ ಉಂಗುರವನ್ನು ಎತ್ತಿಕೊಂಡು ಹೋಗುವುದು ಗಮನಕ್ಕೆ ಬಂತು. ನಾವು ಕಾರ್ಪೊರೇಟರ್​ ರಾಜು ಎಂಬಾತನನ್ನು ಕರೆಸಿ ಹುಡುಕಲು ಪ್ರಾರಂಭಿಸಿದೆವು. ಈ ವೇಳೆ ಎಲ್ಲಾ ಕೌಂಟರ್​ಗಳನ್ನು ತೆರೆದು, ಬೆಳಕು ಹರಿಸಿ ಹುಡುಕಿದಾಗ ಒಂದು ತೂತಿನಲ್ಲಿ ಕಳೆದುಹೋಗಿದ್ದ ಎಲ್ಲಾ ಚಿನ್ನಾಭರಣ ಪತ್ತೆಯಾಯಿತು. ಈ ಕಾರ್ಯಾಚರಣೆ ನಡೆಸಲು 13 ಗಂಟೆ ಬೇಕಾಯಿತು" ಎಂದು ವಿಶ್ವಾಸ್ ಜ್ಯುವೆಲರಿ ಶಾಪ್‌ನ ಮಾಲೀಕ ವಿಶ್ವಾಸ್​ ಅವರು ತಿಳಿಸಿದರು.