ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ; ಕ್ಯಾನ್ಸರ್ ಪೀಡಿತ ಪತಿಗಾಗಿ ಬಂದಿದ್ದ ಹಣವನ್ನೇ ದೋಚಿದ್ದ ವಂಚಕರು, ಮಾನವೀಯತೆ ಮೆರೆದ ಶಾಸಕ ಅಶೋಕ ರೈ 

28-07-26 10:23 pm       HK News Desk   ಕರಾವಳಿ

ಸುಳ್ಯ ತಾಲೂಕಿನ ಬೀರಮಂಗಲ ನಿವಾಸಿ ಮಹಿಳೆಯೋರ್ವರಿಗೆ ಪುತ್ತೂರು ಶಾಸಕ ಅಶೋಕ್ ರೈ ಅವರ ಹೆಸರಿನಲ್ಲಿ ವಂಚನೆ ಎಸಗಿದ ಘಟನೆ ನಡೆದಿದ್ದು ವಿಚಾರ ತಿಳಿಯುತ್ತಿದ್ದಂತೆ ಶಾಸಕ ಅಶೋಕ ರೈ ಸ್ವತಃ ಮಹಿಳೆ ಕಳೆದುಕೊಂಡ ಮೊತ್ತವನ್ನು ಪಾವತಿಸಿ ಮಾನವೀಯತೆ ಮೆರೆದಿದ್ದಾರೆ. 

ಪುತ್ತೂರು, ಜುಲೈ 28 : ಸುಳ್ಯ ತಾಲೂಕಿನ ಬೀರಮಂಗಲ ನಿವಾಸಿ ಮಹಿಳೆಯೋರ್ವರಿಗೆ ಪುತ್ತೂರು ಶಾಸಕ ಅಶೋಕ್ ರೈ ಅವರ ಹೆಸರಿನಲ್ಲಿ ವಂಚನೆ ಎಸಗಿದ ಘಟನೆ ನಡೆದಿದ್ದು ವಿಚಾರ ತಿಳಿಯುತ್ತಿದ್ದಂತೆ ಶಾಸಕ ಅಶೋಕ ರೈ ಸ್ವತಃ ಮಹಿಳೆ ಕಳೆದುಕೊಂಡ ಮೊತ್ತವನ್ನು ಪಾವತಿಸಿ ಮಾನವೀಯತೆ ಮೆರೆದಿದ್ದಾರೆ. 

ಸುಳ್ಯ ಕಸಬಾ ದಕ್ಷಿಣ ಬೀರಮಂಗಲ ನಿವಾಸಿ ಗಣೇಶ್‌ ಎಂಬವರ ಪತ್ನಿ ಪುಷ್ಪಾವತಿ ಹಣ ಕಳೆದುಕೊಂಡವರು. ಗಂಡ ಗಣೇಶ್ ಕ್ಯಾನ್ಸರ್ ಪೀಡಿತರಾಗಿದ್ದು ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರ ಕಷ್ಟವನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಪ್ರಸಾರವಾಗಿತ್ತು. ಸುದ್ದಿಯನ್ನು ಗಮನಿಸಿದ್ದ ದಾನಿಗಳು ಪುಷ್ಪಾವತಿ ಖಾತೆಗೆ ಹಣ ಕಳುಹಿಸಿದ್ದರು. ಒಟ್ಟು 22,500 ಹಣ ಜಮೆಯಾಗಿತ್ತು. 

ಈ ನಡುವೆ, ಜುಲೈ 27 ರಂದು ಸಂಜೆ ಮಹಿಳೆಗೆ ಅಪರಿಚಿತ ವ್ಯಕ್ತಿಯ ಕರೆ ಬಂದಿದ್ದು ಪುಷ್ಪಾವತಿ ಅವರಲ್ಲಿ ನಿಮಗೆ ಪುತ್ತೂರು ಶಾಸಕ ಅಶೋಕ್ ರೈ ಅವರು 3 ಲಕ್ಷ ಹಣ ನೀಡುವುದಾಗಿ ಹೇಳಿದ್ದಾರೆ. ಹಣ ಕಳುಹಿಸಬೇಕಾದರೆ ನೀವು 25 ಸಾವಿರ ರೂ. ಟ್ಯಾಕ್ಸ್ ಮೊತ್ತವನ್ನು ಪಾವತಿ ಮಾಡಬೇಕು ಎಂದು ಹೇಳಿದ್ದ. ಇದನ್ನು ನಂಬಿದ ಮಹಿಳೆ ಖಾತೆಯಲ್ಲಿದ್ದ 22500 ರೂ.ವನ್ನು ಕರೆ ಮಾಡಿದ್ದ ವ್ಯಕ್ತಿಗೆ ಫೋನ್ ಪೇ ಮಾಡಿದ್ದಾರೆ. ಆದರೆ ಬಳಿಕ ಅದೇ ನಂಬರಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಪುಷ್ಪಾವತಿಯವರು ಸುಳ್ಯ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನ್ನ ಹೆಸರು ಹೇಳಿ ಮಹಿಳೆಗೆ ವಂಚನೆ ಮಾಡಿದ ವಿಷಯ ತಿಳಿದ ಶಾಸಕ ಅಶೋಕ ರೈ, ಓರ್ವ ರೋಗಿಯ ಖಾತೆಗೆ ಬಂದಿದ್ದ ಹಣವನ್ನು ಸುಳ್ಳು ಹೇಳಿ ವಂಚನೆ ಮಾಡಿದ್ದು ದೇವರು ಮೆಚ್ಚದ ಕೆಲಸವಾಗಿದೆ ಎಂದು ಹೇಳಿ, ಆ ಸುದ್ದಿಯನ್ನು ವರದಿ ಮಾಡಿದ್ದವರಿಗೆ ಕರೆ ಮಾಡಿದ್ದರು. ನನ್ನ ಹೆಸರು ಹೇಳಿದ್ದಕ್ಕೆ, ನನ್ನ ಮೇಲಿನ ಗೌರವದಿಂದ ಮಹಿಳೆ ಹಣ ಕಳಿಸಿದ್ದಾರೆ, ಮಹಿಳೆ ಕಳೆದುಕೊಂಡ ಮೊತ್ತವನ್ನು ನಾನು ನೀಡುವುದಾಗಿ ತಿಳಿಸಿದ್ದರು. ಬಳಿಕ ಶಾಸಕರು ಮಹಿಳೆ ಕಳೆದುಕೊಂಡ ಮೊತ್ತ 22,500 ಕ್ಕೆ ಹೆಚ್ಚುವರಿಯಾಗಿ 7500 ನೀಡಿ ಒಟ್ಟು 30 ಸಾವಿರ ರೂ. ಖಾತೆಗೆ ಜಮೆ ಮಾಡುವುದಾಗಿ ತಿಳಿಸಿ ಮಹಿಳೆಗೆ ಸಾಂತ್ವನ ಹೇಳಿದ್ದಾರೆ.