ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ; ಮತ್ತೆ ಬಜ್ಪೆಗೆ ಬಂದಿಳಿದ ಎನ್ಐಎ ಅಧಿಕಾರಿಗಳು, ಫಂಡಿಂಗ್ ಬಗ್ಗೆ ಶಂಕಿತ ಕೆಲವರ ವಿಚಾರಣೆ

23-06-26 02:15 pm       HK News Staffer   ಕ್ರೈಂ

ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು ದಿಢೀರ್ ಆಗಿ ಮತ್ತೆ ಬಜ್ಪೆ ಠಾಣೆಗೆ ಬಂದಿದ್ದಾರೆ. ಡಿವೈಎಸ್ಪಿ ರಾಜೀವ್ ಸಿಂಗ್, ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ್ ಸೇರಿದಂತೆ ಐವರು ಅಧಿಕಾರಿಗಳ ತಂಡ ಬಜ್ಪೆಗೆ ಆಗಮಿಸಿದೆ.

ಮಂಗಳೂರು, ಜೂನ್ 23: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು ದಿಢೀರ್ ಆಗಿ ಮತ್ತೆ ಬಜ್ಪೆ ಠಾಣೆಗೆ ಬಂದಿದ್ದಾರೆ. ಡಿವೈಎಸ್ಪಿ ರಾಜೀವ್ ಸಿಂಗ್, ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ್ ಸೇರಿದಂತೆ ಐವರು ಅಧಿಕಾರಿಗಳ ತಂಡ ಬಜ್ಪೆಗೆ ಆಗಮಿಸಿದೆ. 

ಕೆಲವರಿಗೆ ನೋಟೀಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದೆ ಎನ್ನುವ ಮಾಹಿತಿ ಇದೆ. ಅಧಿಕಾರಿಗಳು ಠಾಣೆಯಲ್ಲಿ ಬೀಡು ಬಿಟ್ಟಿದ್ದು, ಕೆಲವು ದಾಖಲಾತಿಗಳನ್ನು ಮುಂದಿಟ್ಟು ಶಂಕಿತರ ಮೇಲೆ ನಿಗಾ ಇಟ್ಟಿದ್ದಾರೆ. ಕಳೆದ ವರ್ಷ 2025ರ ಆಗಸ್ಟ್ 2ರಂದು ಮಂಗಳೂರು ಹೊರವಲಯದ ಸುರತ್ಕಲ್ ಮತ್ತು ಬಜ್ಪೆ ಠಾಣೆ ವ್ಯಾಪ್ತಿಯ 14 ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಒಯ್ದಿದ್ದರು ಎನ್ನಲಾಗಿತ್ತು. ಇದೀಗ ಒಂದು ವರ್ಷದ ಬಳಿಕ ತಂಡ ಮರಳಿದ್ದು ನಿಷೇಧಿತ ಪಿಎಫ್ಐ ಸಂಘಟನೆಯೊಂದಿಗೆ ಲಿಂಕ್ ಹೊ‌ಂದಿರುವ ಕೆಲವರನ್ನು ವಿಚಾರಣೆಗೆ ಕರೆಸಿದೆ. 

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪಿಎಫ್ಐ ಕಾರ್ಯಕರ್ತರು ಸೇರಿ 12 ಮಂದಿಯನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ವಿದೇಶದಿಂದ ಫಂಡಿಂಗ್ ಆಗಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಎನ್ಐಎ ತನಿಖೆಗೆ ವಹಿಸಲಾಗಿತ್ತು. ಪ್ರಕರಣದಲ್ಲಿ ಬಂಧಿತ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ತನಿಖೆಗೆ ಒಳಪಡಿಸಿದ್ದು ಸಂಶಯ ಬಂದ ಅಂಶಗಳನ್ನು ಆಧರಿಸಿ ತನಿಖೆ ಮುಂದುವರಿಸಲಾಗಿತ್ತು. 

ಬಜಪೆ ಠಾಣೆ ವ್ಯಾಪ್ತಿಯ 10 ಕಡೆ ಹಾಗೂ ಸುರತ್ಕಲ್ ಠಾಣೆ ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಕೊಲೆ ಆರೋಪಿಗಳ ಮನೆ ಹಾಗೂ ಎಸ್ ಡಿಪಿಐ ಮುಖಂಡರ ಮನೆಗೆಲಳಿಗೆ ದಾಳಿ ನಡೆಸಿದ್ದರು. ವಶಕ್ಕೆ ಪಡೆದಿದ್ದ ಹಲವು ದಾಖಲೆಗಳನ್ನು ಪರಿಶೀಲಿಸಿರುವ ಅಧಿಕಾರಿಗಳು ವರ್ಷದ ನಂತರ ತನಿಖೆ ಸಕ್ರಿಯಗೊಳಿಸಿದ್ದಾರೆ. 2025 ರ ಮೇ 1‌ರಂದು ಬಜಪೆ ಬಳಿಯ ಕಿನ್ನಿಪದವು‌ ಎಂಬಲ್ಲಿ‌ ರಾತ್ರಿ ಎಂಟು ಗಂಟೆ ವೇಳೆಗೆ ಸುಹಾಸ್ ಶೆಟ್ಟಿ ಬರ್ಬರ ಹತ್ಯೆಯಾಗಿತ್ತು.