Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದು ಕೇಸು ; ಶಿಕ್ಷೆ ವಿಧಿಸಲು ಅವಕಾಶ ಇಲ್ಲದಿದ್ದರೂ ಪೊಲೀಸರ ಚಾರ್ಜ್ ಶೀಟ್, ಡಾ.ಕಕ್ಕಿಲ್ಲಾಯರ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

21-06-26 08:59 pm       HK News Staffer   ಕರಾವಳಿ

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಮಳಿಗೆಯೊಂದಕ್ಕೆ ಮಾಸ್ಕ್ ಧರಿಸದೆ ಪ್ರವೇಶಿಸಿದ ಆರೋಪದಲ್ಲಿ ನಗರದ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣ ಮತ್ತು ಅದರ ಕುರಿತು ಕೋರ್ಟಿಗೆ ಸಲ್ಲಿಸಿದ್ದ ಆರೋಪ ಪಟ್ಟಿಗಳನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಮಂಗಳೂರು, ಜೂನ್ 21: ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಮಳಿಗೆಯೊಂದಕ್ಕೆ ಮಾಸ್ಕ್ ಧರಿಸದೆ ಪ್ರವೇಶಿಸಿದ ಆರೋಪದಲ್ಲಿ ನಗರದ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣ ಮತ್ತು ಅದರ ಕುರಿತು ಕೋರ್ಟಿಗೆ ಸಲ್ಲಿಸಿದ್ದ ಆರೋಪ ಪಟ್ಟಿಗಳನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

2021ರ ಮೇ 18ರಂದು ನಗರದ ಮಳಿಗೆಯೊಂದಕ್ಕೆ ಡಾ. ಶ್ರೀನಿವಾಸ ಕಕ್ಕಿಲ್ಲಾಯರು ಭೇಟಿ ನೀಡಿದ್ದ ವೇಳೆ ಮಾಸ್ಕ್ ಧರಿಸಿಲ್ಲ ಎಂದು ಆರೋಪಿಸಿ ಸ್ಥಳದಲ್ಲಿ ಮಾತುಕತೆ ಆಗಿತ್ತು. ಪೊಲೀಸರು ಮಾಸ್ಕ್ ಧರಿಸಲೇಬೇಕೆಂದು ವಾದಿಸಿದ್ದಲ್ಲದೆ ಅವರ ವಿರುದ್ಧ ಮಂಗಳೂರು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 

ಈ ಬಗ್ಗೆ ಮಂಗಳೂರಿನ ಆರನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿ, ವಿಚಾರಣೆ ನಡೆದಿತ್ತು. 2021ರ ಜೂನ್ 18ರಂದು ಪ್ರಕರಣ ಹೈಕೋರ್ಟಿಗೆ ವರ್ಗಾವಣೆಗೊಂಡಿತ್ತು. ಸುದೀರ್ಘ ವಾದ ಆಲಿಸಿದ ನ್ಯಾಯಾಲಯ ಇದೀಗ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಗಳನ್ನೇ ರದ್ದುಪಡಿಸಿ ಆದೇಶಿಸಿದೆ.

ಈ ನಡುವೆ, ತನ್ನ ಮೇಲೆ ಹೊರಿಸಲಾಗಿದ್ದ ಮೊಕದ್ದಮೆಯನ್ನು ರದ್ದು ಪಡಿಸುವಂತೆ ಕೋರಿ ಶ್ರೀನಿವಾಸ ಕಕ್ಕಿಲ್ಲಾಯರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ 2021ರ ಆಗಸ್ಟ್ 3ರಂದು ಸಲ್ಲಿಸಿದ್ದ ರಿಟ್ ಅರ್ಜಿಯ ಮೇಲೆ ನ್ಯಾಯಮೂರ್ತಿ ನಟರಾಜನ್ ಅವರಿದ್ದ ನ್ಯಾಯಪೀಠವು 2021ರ ಆ.31ರಂದು ಮಧ್ಯಂತರ ತಡೆಯಾಜ್ಞೆಯನ್ನು ನೀಡಿತ್ತು. ನಂತರ ನ್ಯಾಯಮೂರ್ತಿಗಳಾದ ನಾಗಪ್ರಸನ್ನ ಹಾಗೂ ಆರ್. ನಟರಾಜ್ ಅವರಿದ್ದ ನ್ಯಾಯಪೀಠಕ್ಕೆ ಈ ತಡೆಯಾಜ್ಞೆಯನ್ನು ವಿಸ್ತರಿಸಲಾಗಿತ್ತು. ಇದೀಗ ನ್ಯಾಯಮೂರ್ತಿ ರವಿ ಹೊಸಮನಿ ಅವರ ನ್ಯಾಯಪೀಠವು ಪ್ರಕರಣವನ್ನು ಸಂಪೂರ್ಣವಾಗಿ ರದ್ದುಪಡಿಸುವಂತೆ ಅಂತಿಮ ಆದೇಶ ನೀಡಿದೆ.

ಹೆಚ್ಚೆಂದರೆ 200 ರೂಪಾಯಿ ದಂಡವನ್ನಷ್ಟೇ ವಿಧಿಸಬಹುದಾದ ಈ ಪ್ರಕರಣವನ್ನು ನ್ಯಾಯಾಂಗದ ವಿಚಾರಣೆಗೊಳಪಡಿಸಲು ಅಥವಾ ಶಿಕ್ಷಿಸಲು ಕಾನೂನಿನಲ್ಲಿ ಅವಕಾಶಗಳೇ ಇಲ್ಲ. ಮಾತ್ರವಲ್ಲ, ಸಾಂಕ್ರಾಮಿಕ ರೋಗಗಳ ಕಾಯಿದೆ ಅಡಿಯಲ್ಲಿ ಕೊರೋನಾ ಸಾಂಕ್ರಾಮಿಕದ ಪ್ರಕಟಣೆಯನ್ನು ಮಾಡಿಯೇ ಇಲ್ಲ, ಹಾಗಾಗಿ ಈ ಮೊಕದ್ದಮೆಯನ್ನು ಸಂಪೂರ್ಣವಾಗಿ ರದ್ದು ಪಡಿಸಬೇಕು ಎನ್ನುವ ಅರ್ಜಿದಾರರ ವಾದವನ್ನು ಉಚ್ಛ ನ್ಯಾಯಾಲಯವು ಪುರಸ್ಕರಿಸಿದೆ. ಪ್ರತಿವಾದಿಗಳಾಗಿದ್ದ ಮೂಲ ದೂರುದಾರರಾಗಲೀ, ಸರಕಾರವಾಗಲೀ ಯಾವುದೇ ಪ್ರತಿವಾದಗಳನ್ನು ಸಲ್ಲಿಸಲಿಲ್ಲ. 

ಶ್ರೀನಿವಾಸ ಕಕ್ಕಿಲ್ಲಾಯ ಅವರ ಪರವಾಗಿ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಸಚಿನ್ ಬಿ.ಎಸ್. ಮತ್ತು ಅನಿಕೇತ್ ಕೆ.ವಿ. ಅವರು ವಾದಿಸಿದ್ದರು, ಮಂಗಳೂರಿನ ನ್ಯಾಯವಾದಿಗಳಾದ ಚಿದಾನಂದ ಕೆದಿಲಾಯ ಹಾಗೂ ಶಿವಪ್ರಸಾದ್ ಅವರು ಸಹಕರಿಸಿದ್ದಾರೆ.

ತನ್ನ ವಿರುದ್ಧ ಉತ್ಪ್ರೇಕ್ಷಿತ ಹೇಳಿಕೆಗಳನ್ನೂ, ವೈಯಕ್ತಿಕ ನಿಂದನೆಗಳನ್ನೂ ಮಾಡಿ ಡಾ. ಶ್ರೀನಿವಾಸ ಕಕ್ಕಿಲ್ಲಾಯರ ತೇಜೋವಧೆಗೂ ಘಟನೆ ಸಂದರ್ಭ ಪ್ರಯತ್ನಿಸಲಾಗಿತ್ತು. ಅದಕ್ಕಾಗಿ ಸೂಪರ್ ಮಾರ್ಕೆಟ್‌ ಮಾಲಕರ ವಿರುದ್ಧ, ಮಂಗಳೂರಿನ ಐಎಂಎ ಮತ್ತು ಎಎಂಸಿ ಎಂಬ ವೈದ್ಯಕೀಯ ಸಂಘಟನೆಗಳ ಪದಾಧಿಕಾರಿಗಳ ವಿರುದ್ಧ ಡಾ. ಶ್ರೀನಿವಾಸ ಕಕ್ಕಿಲ್ಲಾಯರು ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿದ್ದು, ಅದರ ವಿಚಾರಣೆ ಮುಂದುವರಿದಿದೆ.