20 ದಿನಗಳ ಉಪವಾಸದಿಂದ ಹದಗೆಟ್ಟ ಆರೋಗ್ಯ, ಸೋನಮ್ ವಾಂಗ್ಚುಕ್ ಬಲವಂತವಾಗಿ ಆಸ್ಪತ್ರೆಗೆ; ಅನಿರ್ದಿಷ್ಟ ನಿರಶನ ಘೋಷಿಸಿದ ಕಾಕ್ರೋಚ್ ಪಾರ್ಟಿಯ ಅಭಿಜಿತ್ ದೀಪ್ಕೆ, 20ರಂದು 'ಚಲೋ ಸಂಸದ್' ಬೆಂಬಲಿಸಲು ಮನವಿ

18-07-26 09:31 pm       HK News Staffer   ದೇಶ - ವಿದೇಶ

ನೀಟ್ ಪರೀಕ್ಷೆ ಅಕ್ರಮ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆಗೆ ಒತ್ತಾಯಿಸಿ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಅವರನ್ನು ಬಲವಂತವಾಗಿ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ನವದೆಹಲಿ, ಜುಲೈ 18: ನೀಟ್ ಪರೀಕ್ಷೆ ಅಕ್ರಮ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆಗೆ ಒತ್ತಾಯಿಸಿ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಅವರನ್ನು ಬಲವಂತವಾಗಿ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೆಹಲಿ ಹೈಕೋರ್ಟ್‌ ನಿರ್ದೇಶನದಂತೆ, ಆರೋಗ್ಯ ಹದಗೆಟ್ಟಿದ್ದ ವಾಂಗ್‌ಚುಕ್ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ ಮತ್ತು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಉಪ ಆಯುಕ್ತ (ನವದೆಹಲಿ) ಸಚಿನ್ ಶರ್ಮಾ ತಿಳಿಸಿದ್ದಾರೆ. ಪೊಲೀಸರು ಸ್ಥಳಾಂತರಕ್ಕೆ ಮುಂದಾದ ವೇಳೆ ಪ್ರತಿಭಟನಾಕಾರರು ಅಡ್ಡಿಪಡಿಸಲು ಯತ್ನಿಸಿದ್ದು ಸ್ವಲ್ಪ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಗೊಂದಲ ತಿಳಿಗೊಳಿಸಿ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಿ ಪ್ರತಿಭಟನೆ ಕೊನೆಗೊಳಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

ವಾಂಗ್ಚುಕ್ ಉಪವಾಸ ಸತ್ಯಾಗ್ರಹಕ್ಕೆ ಭಾರೀ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಹೋರಾಟ ಕೈಬಿಡುವುದಿಲ್ಲ. ಅವರ ಬದಲಿಗೆ ತಾನೇ ನಿರಶನ ಮುಂದುವರಿಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಘೋಷಿಸಿದ್ದು ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಯುವ ಜನರ ಬೆಂಬಲಿಸಿ ಜಂತರ್ ಮಂತರ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದು ಇದರಿಂದ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

"ಅಭಿಜೀತ್ ದಿಪ್ಕೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಜುಲೈ 20 ರಂದು ನಡೆಯಲಿರುವ 'ಚಲೋ ಸಂಸದ್' ಮೆರವಣಿಗೆ ಯೋಜಿಸಿದಂತೆ ನಡೆಯಲಿದೆ" ಎಂದು ಸಿಜೆಪಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.‌ ಇಂದಿನಿಂದ ನನ್ನ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುತ್ತಿದ್ದೇನೆ. ಯಾರೂ ಹಿಂದೆ ಸರಿಯಬೇಡಿ ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ. ಈ ಚಳುವಳಿ ದೊಡ್ಡದಾಗಿ ಬೆಳೆಯುತ್ತದೆ. ಅವರು ಗಂಭೀರ ತಪ್ಪು ಮಾಡಿದ್ದಾರೆ. ಎಲ್ಲರೂ ಜಂತರ್ ಮಂತರ್‌ಗೆ ಬರಬೇಕೆಂದು ನಾನು ಒತ್ತಾಯಿಸುತ್ತೇನೆ; ನಮ್ಮ ಚಳುವಳಿ ಇಲ್ಲಿಂದ ಮುಂದುವರಿಯುತ್ತದೆ ಮತ್ತು ಜುಲೈ 20 ರಂದು ನಿಗದಿಯಾಗಿರುವ ಮೆರವಣಿಗೆ ನಡೆದೇ ನಡೆಯುತ್ತದೆ ಎಂದು ದೀಪ್ಕೆ ಪೋಸ್ಟ್ ಹಾಕಿದ್ದಾರೆ. ‌