ಮಾಜಿ ಪ್ರಧಾನಿ ದೇವೇಗೌಡರ ಧರ್ಮಪತ್ನಿ ಚನ್ನಮ್ಮ ನಿಧನ ; ಆಸಿಡ್ ದಾಳಿಯ ನೋವನ್ನೂ ಮರೆತು ಕ್ಷಮಿಸಿದ್ದ ಮಹಾತಾಯಿ

18-07-26 06:22 pm       HK News Staffer   ದೇಶ - ವಿದೇಶ

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚನ್ನಮ್ಮ (85) ಅವರು ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಜುಲೈ 15ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿತ್ತು.

ಬೆಂಗಳೂರು, ಜುಲೈ 18: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚನ್ನಮ್ಮ (85) ಅವರು ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಜುಲೈ 15ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿತ್ತು. 

ಉಸಿರಾಟದ ಸಮಸ್ಯೆಯಿಂದ ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಚನ್ನಮ್ಮ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯ ಡಾ. ಸತ್ಯನಾರಾಯಣ ನೇತೃತ್ವದಲ್ಲಿ ಚಿಕಿತ್ಸೆ ಮುಂದುವರಿದಿದ್ದರೂ, ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.

ಚನ್ನಮ್ಮ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜಕೀಯ ಗಣ್ಯರು, ಕುಟುಂಬಸ್ಥರು ಹಾಗೂ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಮಣಿಪಾಲ್ ಆಸ್ಪತ್ರೆಗೆ ಆಗಮಿಸಲು ಆರಂಭಿಸಿದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.

ಹಾಸನ ಜಿಲ್ಲೆಯ ಮುತ್ತಿಗೆ ಹಿರೇಹಳ್ಳಿಯವರಾದ ಚನ್ನಮ್ಮ ಅವರು 1954ರ ಮೇ 25ರಂದು ಹೆಚ್.ಡಿ. ದೇವೇಗೌಡರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದರು. ಈ ದಂಪತಿಗೆ ಹೆಚ್.ಡಿ. ರೇವಣ್ಣ, ಹೆಚ್.ಡಿ. ಬಾಲಕೃಷ್ಣ, ಹೆಚ್.ಡಿ. ರಮೇಶ್ ಗೌಡ, ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ನಾಲ್ವರು ಪುತ್ರರು ಹಾಗೂ ಶೈಲಜಾ ಮತ್ತು ಅನಸೂಯಾ ಎಂಬ ಇಬ್ಬರು ಪುತ್ರಿಯರಿದ್ದಾರೆ.

ರಾಜಕೀಯದಲ್ಲಿ ಸದಾ ಸಕ್ರಿಯರಾಗಿದ್ದ ದೇವೇಗೌಡರಿಗೆ ಕುಟುಂಬದ ಹೊಣೆಗಾರಿಕೆ ತಟ್ಟದಂತೆ ಸಂಸಾರವನ್ನು ಸಮರ್ಥವಾಗಿ ನಿಭಾಯಿಸಿದ ಚನ್ನಮ್ಮ, ಆರು ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಜವಾಬ್ದಾರಿಯನ್ನು ಯಶಸ್ವಿಯಾಗಿ ಹೊತ್ತು ಆದರ್ಶ ಗೃಹಿಣಿಯಾಗಿ ಗುರುತಿಸಿಕೊಂಡಿದ್ದರು. ದೇವೇಗೌಡರ ರಾಜಕೀಯ ಪಯಣದ ಹಿಂದಿನ ಮೌನ ಶಕ್ತಿಯಾಗಿ ಅವರು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.

72 ವರ್ಷಗಳ ಆದರ್ಶ ದಾಂಪತ್ಯ

1954ರಲ್ಲಿ ವಿವಾಹವಾದ ದೇವೇಗೌಡ ಮತ್ತು ಚೆನ್ನಮ್ಮ ದಂಪತಿ ಸುಮಾರು 72 ವರ್ಷಗಳ ಕಾಲ ಜೊತೆಯಾಗಿ ಜೀವನ ಸಾಗಿಸಿದ್ದರು. ರಾಜಕೀಯದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ದೇವೇಗೌಡರ ಆಹಾರ, ಆರೋಗ್ಯ ಹಾಗೂ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಚೆನ್ನಮ್ಮ ಸಮರ್ಥವಾಗಿ ನಿಭಾಯಿಸುತ್ತಿದ್ದರು. ದೆಹಲಿಯಲ್ಲಿದ್ದ ಸಂದರ್ಭದಲ್ಲೂ ದೇವೇಗೌಡರಿಗೆ ಸ್ವತಃ ಅಡುಗೆ ಮಾಡಿ ಊಟ ನೀಡುತ್ತಿದ್ದ ಅವರು, ಎಲ್ಲೆಡೆ ಪತಿಯೊಂದಿಗೆ ಹೆಜ್ಜೆ ಹಾಕಿದ ಜೀವನ ಸಂಗಾತಿಯಾಗಿದ್ದರು.

ಮಹಾಶಿವರಾತ್ರಿಯ ದಿನ ನಡೆದ ಭೀಕರ ದಾಳಿ 

2001ರ ಫೆಬ್ರವರಿ 21ರಂದು ಮಹಾಶಿವರಾತ್ರಿ ಅಂಗವಾಗಿ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯ ಈಶ್ವರ ದೇವಸ್ಥಾನಕ್ಕೆ ದೇವೇಗೌಡರ ಕುಟುಂಬ ಪೂಜೆಗೆ ತೆರಳಿತ್ತು. ರಾತ್ರಿ ಸುಮಾರು 8 ಗಂಟೆಗೆ ಪೂಜೆ ಮುಗಿಸಿ ಹೊರಬರುತ್ತಿದ್ದ ವೇಳೆ ಚೆನ್ನಮ್ಮ ಹಾಗೂ ಭವಾನಿ ರೇವಣ್ಣ ಅವರ ಮೇಲೆ ದುಷ್ಕರ್ಮಿ ಆಸಿಡ್ ಎರಚಿದ್ದ. ಘಟನೆಯಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲೆಯಾಗಿದ್ದರು. ಆಸಿಡ್ ದಾಳಿಯ ತೀವ್ರತೆಗೆ ಚೆನ್ನಮ್ಮ ಅವರು ಸುಮಾರು ಎರಡು ತಿಂಗಳು ಪ್ರಜ್ಞಾಹೀನ ಸ್ಥಿತಿಯಲ್ಲೇ ಚಿಕಿತ್ಸೆ ಪಡೆಯಬೇಕಾಯಿತು. ಆ ಸಂದರ್ಭ ದೇವೇಗೌಡರ ಕುಟುಂಬ ಅನುಭವಿಸಿದ ನೋವು ಅಪಾರವಾಗಿತ್ತು.

ತಮ್ಮನ ಮಗನೇ ಆರೋಪಿ ! 

ಈ ಪ್ರಕರಣದಲ್ಲಿ ದೇವೇಗೌಡರ ತಮ್ಮ ಬಸವೇಗೌಡ ಅವರ ಪುತ್ರ ಲೋಕೇಶ್ ಪ್ರಮುಖ ಆರೋಪಿಯಾಗಿದ್ದ. ಆರಂಭದಲ್ಲಿ ಇದನ್ನು ಕೌಟುಂಬಿಕ ಕಲಹದ ಪರಿಣಾಮ ಎಂದು ಹೇಳಲಾಗಿತ್ತು. ಆದರೆ ಬಳಿಕ ದೇವೇಗೌಡರು, "ನನ್ನ ತಮ್ಮನ ಮಗನೇ ದಾಳಿ ನಡೆಸಿದ್ದ. ಆದರೆ ಅದರ ಹಿಂದೆ ರಾಜಕೀಯ ಪ್ರೇರಣೆಯೂ ಇತ್ತು. ಮೂಲ ಗುರಿ ನನ್ನ ಪುತ್ರ ಹೆಚ್.ಡಿ. ರೇವಣ್ಣ. ಅವರು ಅಂದು ಅಲ್ಲಿರಲಿಲ್ಲ. ಅದರಿಂದ ನನ್ನ ಪತ್ನಿ ಮತ್ತು ಸೊಸೆಯ ಮೇಲೆ ದಾಳಿ ನಡೆಯಿತು" ಎಂದು ಬಹಿರಂಗಪಡಿಸಿದ್ದರು.

8 ವರ್ಷ ಶಿಕ್ಷೆ;  ಕ್ಷಮಿಸಿದ ದೇವೇಗೌಡ

ಪ್ರಕರಣದಲ್ಲಿ ಲೋಕೇಶ್ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, 8 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆ ಅನುಭವಿಸುತ್ತಿದ್ದ ವೇಳೆ ಲೋಕೇಶ್ ಅವರ ತಂದೆ ಹಾಗೂ ದೇವೇಗೌಡರ ತಮ್ಮ ಬಸವೇಗೌಡರಿಗೆ ಕ್ಯಾನ್ಸರ್ ಇರುವುದು ತಿಳಿದುಬಂದಿತ್ತು.
ಈ ಸಂದರ್ಭದಲ್ಲಿ ದೇವೇಗೌಡರು ಮಾನವೀಯ ದೃಷ್ಟಿಯಿಂದ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ತಮ್ಮ ಕೊನೆಯ ದಿನಗಳಲ್ಲಿ ತಂದೆ-ಮಗ ಜೊತೆಯಾಗಿರಲಿ ಎಂಬ ಕಾರಣಕ್ಕೆ ಲೋಕೇಶ್ ಬಿಡುಗಡೆಗೆ ಅವಕಾಶ ಕಲ್ಪಿಸುವಂತೆ ಕೋರಿದ್ದರು.

ದೇವೇಗೌಡರ ಪ್ರಕಾರ, ನ್ಯಾಯಮೂರ್ತಿಗಳು "ನಿಮ್ಮ ಪತ್ನಿಯ ಮೇಲೆಯೇ ಆಸಿಡ್ ದಾಳಿ ನಡೆಸಿದ ವ್ಯಕ್ತಿಯನ್ನು ಬಿಡುಗಡೆ ಮಾಡಲು ಕೇಳುತ್ತಿದ್ದೀರಾ?" ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು. ಆದರೆ, ತಮ್ಮ ತಮ್ಮನ ಪರಿಸ್ಥಿತಿಯನ್ನು ಮನಗಂಡು ತಾವು ಆ ನಿರ್ಧಾರ ಕೈಗೊಂಡಿದ್ದಾಗಿ ಅವರು ತಿಳಿಸಿದ್ದರು.

ತಮ್ಮ ಮೇಲೆ ಆಸಿಡ್ ದಾಳಿ ನಡೆಸಿದ ಆರೋಪಿಯನ್ನು ಬಿಡುಗಡೆ ಮಾಡುವ ಪತಿಯ ನಿರ್ಧಾರಕ್ಕೂ ಚೆನ್ನಮ್ಮ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ. ಕುಟುಂಬ ಮತ್ತು ಸಂಬಂಧಗಳಿಗೆ ಮಹತ್ವ ನೀಡಿದ ಅವರ ಮನೋಭಾವವನ್ನು ದೇವೇಗೌಡರು ಹಲವು ಬಾರಿ ಕೊಂಡಾಡಿದ್ದರು. ರಾಜಕೀಯದ ಏಳು-ಬೀಳು, ಕುಟುಂಬದ ಸಂಕಷ್ಟಗಳ ನಡುವೆಯೂ ಪತಿಯ ಬೆನ್ನಿಗೆ ನಿಂತ ಚೆನ್ನಮ್ಮ ಅವರ ತ್ಯಾಗ, ಸಹನೆ ಮತ್ತು ಮಾನವೀಯತೆ ದೇವೇಗೌಡರ ಬದುಕಿನ ಪ್ರಮುಖ ಆಧಾರವಾಗಿತ್ತು.

ದೇವೇಗೌಡ ಮತ್ತು ಕಾಳಮ್ಮ ದಂಪತಿಯ ಹಿರಿಯ ಪುತ್ರಿಯಾಗಿದ್ದ ಚನ್ನಮ್ಮ ಅವರು ಆ ಕಾಲದಲ್ಲೇ ಎಸ್‌ಎಸ್‌ಎಲ್‌ಸಿ ಶಿಕ್ಷಣ ಪೂರ್ಣಗೊಳಿಸಿದ್ದರು. ಮನೆಯ ಹಿರಿಯ ಮಗಳಾಗಿ ತಮ್ಮ ನಾಲ್ವರು ಸಹೋದರರು ಮತ್ತು ಮೂವರು ಸಹೋದರಿಯರಿಗೆ ತಾಯಿಯಂತೆ ಆಸರೆಯಾಗಿದ್ದರು.