ಮೂಡುಬಿದ್ರೆ ; ಕುಡಿದ ಮತ್ತಿನಲ್ಲಿ ಮಚ್ಚು ಹಿಡಿದು ಯುವಕನ ರಂಪಾಟ, ಕೆಲ ಹೊತ್ತು ಭೀತಿ ಮೂಡಿಸಿದ ಕಿಡಿಗೇಡಿ ಕೃತ್ಯ ಸಿಸಿಟಿವಿಯಲ್ಲಿ ಸೆರೆ

18-07-26 10:06 pm       HK News Staffer   ಕ್ರೈಂ

ಕುಡಿದ ಮತ್ತಿನಲ್ಲಿ ಯುವಕನೊಬ್ಬ ಕೈಯಲ್ಲಿ ಮಚ್ಚು ಹಿಡಿದುಕೊಂಡು ಮೂಡುಬಿದ್ರೆ ಬಸ್ ನಿಲ್ದಾಣದಲ್ಲಿ ಅಡ್ಡಾಡುತ್ತಾ ಜನರಲ್ಲಿ ಭೀತಿ ಮೂಡಿಸಿದ ಘಟನೆ ನಡೆದಿದ್ದು ಬಳಿಕ ಸ್ಥಳೀಯರೇ ಸೇರಿ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಮಂಗಳೂರು, ‌ಜುಲೈ 18: ಕುಡಿದ ಮತ್ತಿನಲ್ಲಿ ಯುವಕನೊಬ್ಬ ಕೈಯಲ್ಲಿ ಮಚ್ಚು ಹಿಡಿದುಕೊಂಡು ಮೂಡುಬಿದ್ರೆ ಬಸ್ ನಿಲ್ದಾಣದಲ್ಲಿ ಅಡ್ಡಾಡುತ್ತಾ ಜನರಲ್ಲಿ ಭೀತಿ ಮೂಡಿಸಿದ ಘಟನೆ ನಡೆದಿದ್ದು ಬಳಿಕ ಸ್ಥಳೀಯರೇ ಸೇರಿ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. 

ಬಂಟ್ವಾಳ ತಾಲೂಕಿನ ವಾಮನಪದವು ಬಳಿಯ ಅಜ್ಜಿಬೆಟ್ಟು ನಿವಾಸಿ ರಾಜೇಶ್ (22) ಎಂದು ಯುವಕನನ್ನು ಗುರುತಿಸಲಾಗಿದ್ದು ಮೂಡುಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಪರೀತ ಕುಡಿತದ ಚಟ ಹೊಂದಿದ್ದು ಕಂಠಪೂರ್ತಿ ಕುಡಿದು ಈ ಕೃತ್ಯ ಎಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಯುವಕ ಕೈಯಲ್ಲಿ ಮಚ್ಚು ಹಿಡಿದು ಅತ್ತಿತ್ತ ಹೋಗಿದ್ದು ಬಳಿಕ ಬಸ್ ನಿಲ್ದಾಣದಲ್ಲಿರುವ ಮೊಬೈಲ್ ಶಾಪ್ ಗೆ ಬಂದು ಅಲ್ಲಿದ್ದವರಿಗೆ ಬೆದರಿಕೆ ಹಾಕಿದ್ದಾನೆ. 

ಶಾಪ್ ನಲ್ಲಿದ್ದವರಲ್ಲಿ ತನಗೆ ಮೊಬೈಲ್ ನೀಡುವಂತೆ ಹೇಳಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಕೆಲ ಹೊತ್ತು ಬೈದಾಡಿದ್ದು ಬಳಿಕ ಅಲ್ಲಿದ್ದ ಸ್ಥಳೀಯರು ಸೇರಿ ಕೈಯಲ್ಲಿದ್ದ ಮಚ್ಚನ್ನು ಎಳೆದು ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ.‌ ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶನಿವಾರ ಸಂಜೆ ವೇಳೆಗೆ ಘಟನೆ ನಡೆದಿದ್ದು ಬಿಸಿ ರೋಡಿನಲ್ಲಿ ಯುವತಿಯನ್ನು ಹತ್ಯೆಗೈದ ಘಟನೆ ಹಸಿಯಾಗಿರುವಾಗಲೇ ಇಂತಹ ಘಟನೆ ನಡೆದಿದ್ದರಿಂದ ಭಯದ ವಾತಾವರಣ ಸೃಷ್ಟಿಯಾಗಿತ್ತು.