Gold Loan Scam at Paduva Society, ShaktiNagar Mangalore: ಪದುವಾ ಸೊಸೈಟಿಯಲ್ಲಿ ಭಾರೀ ಗೋಲ್ಮಾಲ್ ; ಗ್ರಾಹಕರು ಅಡವಿಟ್ಟಿದ್ದ ಕೇಜಿಗಟ್ಟಲೆ ಚಿನ್ನವನ್ನೇ ಕಿತ್ತೊಯ್ದ ಮ್ಯಾನೇಜರ್ ! ಕೋಟ್ಯಂತರ ಮೌಲ್ಯದ 6.5 ಕೇಜಿ ಆಭರಣ ಸೋಲ್ಡ್ ಔಟ್! 3.5 ಕೇಜಿ ರೋಲ್ಡ್ ಗೋಲ್ಡ್ ಚಿನ್ನ ವಶಕ್ಕೆ*

30-06-25 06:12 pm       Giridhar Shetty, Mangaluru   ಕ್ರೈಂ

ಗ್ರಾಹಕರು ತಮ್ಮ ಕಷ್ಟಕ್ಕೆ ಅಡವಿಟ್ಟಿದ್ದ ಕೇಜಿಗಟ್ಟಲೆ ಚಿನ್ನಾಭರಣವನ್ನೇ ಸೊಸೈಟಿಯ ಮ್ಯಾನೇಜರ್ ಒಬ್ಬ ಎಗರಿಸಿದ್ದು ಅದನ್ನು ಬೇರೊಂದು ಸೊಸೈಟಿಯಲ್ಲಿ ಅಡವಿಟ್ಟು ಕೋಟ್ಯಂತರ ರೂಪಾಯಿ ಸಾಲ ಪಡೆದು ದೋಖಾ ಎಸಗಿರುವ ಪ್ರಕರಣ ಮಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಮಂಗಳೂರು, ಜೂನ್ 29 : ಗ್ರಾಹಕರು ತಮ್ಮ ಕಷ್ಟಕ್ಕೆ ಅಡವಿಟ್ಟಿದ್ದ ಕೇಜಿಗಟ್ಟಲೆ ಚಿನ್ನಾಭರಣವನ್ನೇ ಸೊಸೈಟಿಯ ಮ್ಯಾನೇಜರ್ ಒಬ್ಬ ಎಗರಿಸಿದ್ದು ಅದನ್ನು ಬೇರೊಂದು ಸೊಸೈಟಿಯಲ್ಲಿ ಅಡವಿಟ್ಟು ಕೋಟ್ಯಂತರ ರೂಪಾಯಿ ಸಾಲ ಪಡೆದು ದೋಖಾ ಎಸಗಿರುವ ಪ್ರಕರಣ ಮಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಮಂಗಳೂರಿನ ಶಕ್ತಿನಗರದ ಪದುವಾ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ದೋಖಾ ನಡೆದಿದ್ದು, ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಹಕರು ತಮ್ಮ ಕಷ್ಟದಲ್ಲಿ ಅಡವಿವಿಟ್ಟಿದ್ದ ಆರೂವರೆ ಕೇಜಿ ಬಂಗಾರದ ಆಭರಣವನ್ನು ಅದೇ ಸೊಸೈಟಿಯ ಮ್ಯಾನೇಜರ್ ಪ್ರೀತೇಶ್ ಎಂಬಾತ ಕಳವುಗೈದು ಬೇರೆ ಬೇರೆ ಕಡೆ ಅಡವಿಟ್ಟಿದ್ದಾನೆಂಬ ಮಾಹಿತಿ ಲಭಿಸಿದೆ. ಸೊಸೈಟಿ ಮೇಲಿನ ನಂಬಿಕೆಯಿಂದ ಹಲವಾರು ಗ್ರಾಹಕರು ತಮ್ಮ ಅಗತ್ಯಕ್ಕಾಗಿ ಚಿನ್ನವನ್ನು ಅಡವಿಟ್ಟು ಹಣ ಸಾಲ ಪಡೆದಿದ್ದರು. ಗ್ರಾಹಕರು ಅಡವಿಟ್ಟಿದ್ದ ಆರೂವರೆ ಕೇಜಿ ಬಂಗಾರಕ್ಕೆ ಪ್ರತಿಯಾಗಿ ಸೊಸೈಟಿಯಿಂದ 3.25 ಕೋಟಿ ರೂಪಾಯಿ ಸಾಲ ನೀಡಲಾಗಿತ್ತು. ಇದೀಗ ಗ್ರಾಹಕರು ಇಟ್ಟಿದ್ದ ಬಂಗಾರವೇ ನಾಪತ್ತೆಯಾಗಿದ್ದು, ಅದನ್ನು ಎಗರಿಸಿದ ಮ್ಯಾನೇಜರ್ ತನ್ನ ಆಪ್ತರ ಮೂಲಕ ಬೇರೆ ಬೇರೆ ಸೊಸೈಟಿಗಳಲ್ಲಿ ಅಡವಿಟ್ಟು ಸಾಲ ತೆಗೆದಿದ್ದಾನೆ.

ಶಕ್ತಿನಗರದಲ್ಲೇ ಶಾಖೆ ಇರುವ ಕರಾವಳಿ ಹೆಸರಿನ ಸೊಸೈಟಿಯಲ್ಲಿ ಹಲವರ ಹೆಸರಲ್ಲಿ ಬಂಗಾರ ಅಡ ಇಟ್ಟಿರುವುದನ್ನು ಪತ್ತೆ ಮಾಡಲಾಗಿದೆ. ಅದೇ ಶಾಖೆಯಿಂದ 2200 ಗ್ರಾಮ್ ಬಂಗಾರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರೀತೇಶ್ ಪರವಾಗಿ ಚಿನ್ನ ಇಟ್ಟು ಸಾಲ ಪಡೆದಿದ್ದ ಸರಿಪಲ್ಲ ನಿವಾಸಿ ಶೇಖ್ ಮಹಮ್ಮದ್ ಎಂಬಾತನನ್ನು ಬಂಧಿಸಲಾಗಿದೆ. ಇನ್ನೂ ಹಲವರು ಈ ವಂಚನೆಯಲ್ಲಿ ಭಾಗಿಯಾಗಿದ್ದು ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬಂಗಾರ ಕಿತ್ತುಕೊಂಡು ವಂಚನೆ ಎಸಗಿರುವ ಜಾಲ ಸೊಸೈಟಿ ಆಡಳಿತಕ್ಕೆ ತಿಳಿಯುತ್ತಿದ್ದಂತೆ ಮ್ಯಾನೇಜರ್ ಪ್ರೀತೇಶ್ ವಿದೇಶಕ್ಕೆ ಪರಾರಿಯಾಗಿದ್ದ. ಇದರ ಬೆನ್ನಲ್ಲೇ ಗ್ರಾಹಕರು ಸೊಸೈಟಿ ಕಚೇರಿಗೆ ಬಂದು ಕಿರಿಕಿರಿ ಮಾಡತೊಡಗಿದ್ದರು. ಇಲ್ಲಿ ಚಿನ್ನ ಕಳಕೊಂಡವರು ಹೆಚ್ಚಿನವರು ಕ್ರಿಸ್ತಿಯನ್ನರೇ ಆಗಿದ್ದಾರೆ. ಜೂನ್ 17ರಂದು ಎಫ್ಐಆರ್ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಪ್ರಮುಖ ಆರೋಪಿ ಬಂಧನಕ್ಕಾಗಿ ಲುಕೌಟ್ ನೋಟಿಸ್ ಜಾರಿ ಮಾಡಿದ್ದರು. ಇದೀಗ ಪ್ರಮುಖ ಆರೋಪಿ ಪ್ರೀತೇಶ್ ವಿದೇಶದಿಂದ ಬಂದು ಮಂಗಳೂರಿನ ಕೋರ್ಟಿಗೆ ಶರಣಾಗಿದ್ದಾನೆ ಎಂಬ ಮಾಹಿತಿ ದೊರಕಿದ್ದು, ಆತನನ್ನು ಜೈಲಿಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಪೊಲೀಸರು ಇನ್ನು ಕಸ್ಟಡಿಗೆ ಪಡೆಯಲಿದ್ದಾರೆ.

ಇದೇ ವೇಳೆ, ಬಂಧಿತ ಮಹಮ್ಮದ್ ಶೇಖ್ ಬಳಿಯಿಂದ 3.5 ಕೇಜಿ ರೋಲ್ಡ್ ಗೋಲ್ಡ್ ಬಂಗಾರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗ್ರಾಹಕರು ಇಟ್ಟಿದ್ದ ಅಸಲಿ ಬಂಗಾರವನ್ನು ಸೊಸೈಟಿಯಿಂದ ಪಡೆದು ಆ ಜಾಗಕ್ಕೆ ನಕಲಿ ಬಂಗಾರವನ್ನು ಇಡುವ ಪ್ಲಾನ್ ಆಗಿತ್ತಾ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪದುವಾ ಸೊಸೈಟಿಗೆ 3.25 ಕೋಟಿ ಸಾಲದ ಹಣವೂ ಗೋತಾ ಆಗಿದೆ. ಅದರ ಜೊತೆಗೆ, ಗ್ರಾಹಕರು ಇಟ್ಟಿದ್ದ ಚಿನ್ನವೂ ಖೋತಾ ಆಗಿದೆ. ಆರೂವರೆ ಕೇಜಿ ಬಂಗಾರದ ಈಗಿನ ಮೌಲ್ಯ ಅಂದಾಜು ಆರೂವರೆ ಕೋಟಿ ಆಗುತ್ತದೆ. ಇದೆಲ್ಲವನ್ನೂ ಪದುವಾ ಸೊಸೈಟಿಯೇ ಭರಿಸಬೇಕಾಗುತ್ತದೆ. ಸೊಸೈಟಿಯಲ್ಲಿ ಪ್ರತಿ ವರ್ಷ ಅಡಿಟಿಂಗ್ ಆಗುತ್ತಿದ್ದರೆ, ಗ್ರಾಹಕರ ಬಂಗಾರ ಇದೆಯೇ, ವರ್ಷದಲ್ಲಿ ಎಷ್ಟು ವಹಿವಾಟು ಆಗಿದೆ, ಎಷ್ಟು ಸಾಲ ಹೋಗಿದೆ ಎನ್ನುವುದು ತಿಳಿಯುತ್ತದೆ. ಹೀಗಾಗಿ ಈ ಅವ್ಯವಹಾರದಲ್ಲಿ ಸೊಸೈಟಿ ಆಡಳಿತದ ಪಾಲು ಎಷ್ಟಿದೆ ಎನ್ನುವ ಬಗ್ಗೆಯೂ ತನಿಖೆ ಆಗಬೇಕಾಗಿದೆ.

A shocking gold loan scam has surfaced in Mangaluru’s Shaktinagar area, where the manager of Padavu Vyavasaya Seva Sahakari Sangha - Agricultural Co-operative Society allegedly embezzled gold ornaments pledged by customers and secured huge loans by re-pledging them elsewhere. According to reports, customers who had trusted the Paduva Society and pledged their hard-earned gold ornaments for loans are now left in distress after it came to light that approximately 6.5 kilograms of gold, valued at several crores, has gone missing. The prime accused, identified as Preethesh, the manager of the society, is said to have pledged the stolen gold in other financial institutions and obtained large sums of money in loans.