ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾರಿಗಳೆಂದು ನಂಬಿಸಿ 2.52 ಕೋಟಿ ಪೀಕಿಸಿದ ಸೈಬರ್ ಖದೀಮರು, 26 ದಿನಗಳಿಂದ ‘ಡಿಜಿಟಲ್ ಅರೆಸ್ಟ್’ ಆಗಿದ್ದ ಸ್ವಾಮೀಜಿ !

20-04-25 07:26 pm       HK News Desk   ಕ್ರೈಂ

ಸೈಬರ್ ವಂಚಕರು ತಮ್ಮನ್ನು ಇಡಿ ಅಧಿಕಾರಿಗಳೆಂದು ಪರಿಚಯಿಸಿ ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿರುವ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಸುಪ್ರದೀಪ್ತಾನಂದ ಅವರನ್ನು 26 ದಿನಗಳ ಡಿಜಿಟಲ್ ಅರೆಸ್ಟ್ ಮಾಡಿದ್ದಾಗಿ ಹೇಳಿ ಎರೂಡವರೆ ಕೋಟಿ ರೂಪಾಯಿ ಹಣವನ್ನು ಕಿತ್ತುಕೊಂಡಿದ್ದಾರೆ.

ಭೋಪಾಲ್, ಎ.20: ಸೈಬರ್ ವಂಚಕರು ತಮ್ಮನ್ನು ಇಡಿ ಅಧಿಕಾರಿಗಳೆಂದು ಪರಿಚಯಿಸಿ ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿರುವ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಸುಪ್ರದೀಪ್ತಾನಂದ ಅವರನ್ನು 26 ದಿನಗಳ ಡಿಜಿಟಲ್ ಅರೆಸ್ಟ್ ಮಾಡಿದ್ದಾಗಿ ಹೇಳಿ ಎರೂಡವರೆ ಕೋಟಿ ರೂಪಾಯಿ ಹಣವನ್ನು ಕಿತ್ತುಕೊಂಡಿದ್ದಾರೆ.

ಜೆಟ್ ಏರ್ವೇಸ್ ಸ್ಥಾಪಕ ನರೇಶ್ ಗೋಯಲ್ ಅವರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಲಿಂಕ್ ಹೊಂದಿದ್ದೀರಿ ಎಂದು ಸ್ವಾಮೀಜಿಯನ್ನು ಬೆದರಿಸಿದ್ದಲ್ಲದೆ, ಡಿಜಿಟಲ್ ಅರೆಸ್ಟ್ ಮಾಡಿಸಿದ್ದಾಗಿ ಹೇಳಿ ನಂಬಿಸಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ನೀಡುತ್ತಲೇ ಗ್ವಾಲಿಯರ್ ಎಸ್ಪಿ ಧರಮ್ ವೀರ್ ಸಿಂಗ್ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.

ಮಾರ್ಚ್ 15ರಂದು ಸ್ವಾಮಿಜಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತನ್ನನ್ನು ಇಡಿ ಅಧಿಕಾರಿಯೆಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ, ನರೇಶ್ ಗೋಯಲ್ ಪ್ರಕರಣದಲ್ಲಿ 20 ಕೋಟಿ ಹಣ ವರ್ಗಾವಣೆ ಮಾಡಿರುವ ಆರೋಪ ನಿಮ್ಮ ಮೇಲಿದೆ. ಅದಕ್ಕೆ ಸಂಬಂಧಿಸಿ ನಕಲಿ ಬ್ಯಾಂಕ್ ದಾಖಲೆಗಳನ್ನು, ಹಣ ವರ್ಗಾವಣೆ ಆಗಿರುವುದಕ್ಕೆ ಪಿಡಿಎಫ್ ದಾಖಲೆಗಳು, ಸ್ವಾಮೀಜಿ ಆಧಾರ್ ಕಾರ್ಡ್ ಅಟ್ಯಾಚ್ ಆಗಿರುವುದನ್ನೂ ತೋರಿಸಿದ್ದ. ರಾಮಕೃಷ್ಣ ಮಿಶನ್ ಫಂಡ್ ಬಗ್ಗೆ ಪರಿಶೀಲನೆ ಆಗಬೇಕಿದ್ದು, ಎಲ್ಲ ಮೊತ್ತವನ್ನೂ ಆರ್ ಬಿಐ ಮತ್ತೆ ರಿಟರ್ನ್ ಮಾಡಲಿದೆ. ಇದಕ್ಕಾಗಿ ನಿಮ್ಮ ಖಾತೆಯಲ್ಲಿರುವ ಹಣವನ್ನು ನಾವು ಹೇಳಿದ ಖಾತೆಗಳಿಗೆ ಹಾಕಬೇಕಾಗುತ್ತದೆ ಎಂದು ಹೇಳಿದ್ದರು. ಯಾವುದೇ ಕಾರಣಕ್ಕೂ ನೀವು ಈ ವೇಳೆ ಇತರ ಯಾರೊಂದಿಗೂ ಜೊತೆಗೆ ಸಮಾಲೋಚನೆ ಮಾಡಬಾರದು ಮತ್ತು ವಾಟ್ಸಪ್ ನಲ್ಲಿ ಪ್ರತೀ ಗಂಟೆಗೆ ಮಾಹಿತಿ ನೀಡುತ್ತಿರಬೇಕು ಎಂದು ಷರತ್ತು ವಿಧಿಸಿದ್ದರು.

ತನ್ನ ಹೆಸರಲ್ಲಿದ್ದ ದಾಖಲೆಗಳನ್ನು ನೋಡಿದ ಸ್ವಾಮೀಜಿ, ಅವರೊಂದಿಗೆ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದರು. ಅಲ್ಲದೆ, 26 ದಿನಗಳ ಕಾಲವೂ ವಂಚಕರು ಹೇಳಿದ ಎಲ್ಲ ದಾಖಲೆಗಳನ್ನೂ ನೀಡತೊಡಗಿದ್ದರು. ಪ್ರತಿ ಗಂಟೆಗೆ ಇವರನ್ನು ಪ್ರಶ್ನೆ ಮಾಡುತ್ತ ಮಾನಸಿಕವಾಗಿ ಹೊರಗಿನ ಸಂಪರ್ಕ ಇಲ್ಲದಂತೆ ಮಾಡಿದ್ದರು. ಸ್ವಾಮೀಜಿ ಒಂದೇ ಕಡೆ ಇರುವಂತೆ ನೋಡಿಕೊಂಡಿರಲು ಆಗಾಗ ಸೆಲ್ಫಿ ಫೋಟೋಗಳನ್ನೂ ಕೇಳುತ್ತಿದ್ದರು. ಆಶ್ರಮದಲ್ಲಿಯೂ ಯಾರ ಜೊತೆಗೂ ಮಾತನಾಡುವಂತಿಲ್ಲ. ನೀವು ಒಂದ್ವೇಳೆ ಮಾತು ತಪ್ಪಿದರೆ, ಏಳು ವರ್ಷ ಶಿಕ್ಷೆಗೆ ಒಳಗಾಗುತ್ತೀರಿ, 5 ಲಕ್ಷ ದಂಡ ಕಟ್ಟಬೇಕಾಗಬಹುದು ಎಂದೂ ಭಯಪಡಿಸಿದ್ದರು. ಇದರಿಂದಾಗಿ ನೈಜ ಇಡಿ ಅಧಿಕಾರಿಗಳೇ ತನಿಖೆ ಮಾಡುತ್ತಿದ್ದಾರೆಂದು ನಂಬಿ ಆಶ್ರಮಕ್ಕೆ ಸಂಬಂಧಪಟ್ಟ ದಾಖಲೆಗಳನ್ನೂ ನೀಡಿದ್ದರು. ವಂಚಕರು ಹೇಳಿದಂತೆ, ಬೇರೆ ಬೇರೆ ಖಾತೆಗಳಿಗೆ ಒಟ್ಟು 2,52,99,000 ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದರು.

ಎಪ್ರಿಲ್ 11ರಂದು ಆರ್ ಬಿಐಗೆಂದು ಕಳಿಸಲ್ಪಟ್ಟ ಹಣ ಹಿಂತಿರುಗಿ ಬಾರದೇ ಇದ್ದುದರಿಂದ ಮತ್ತು ಇದಕ್ಕಾಗಿ ಮತ್ತೆ ಮತ್ತೆ ಕರೆ ಮಾಡಿದರೂ ಸ್ವೀಕರಿಸದೇ ಇದ್ದುದರಿಂದ ಸ್ವಾಮೀಜಿ ತಾನು ಮೋಸ ಹೋಗಿದ್ದಾಗಿ ಅರಿವಿಗೆ ಬಂದಿತ್ತು. ಇದರ ಬೆನ್ನಲ್ಲೇ ಎಸ್ಪಿ ಧರಮ್ ವೀರ್ ಸಿಂಗ್ ಅವರನ್ನು ಭೇಟಿಯಾಗಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ವಿಶೇಷ ತನಿಖಾ ತಂಡವು ಆರೋಪಿಗಳ ಕರೆಗಳ ಮಾಹಿತಿ ಆಧರಿಸಿ ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ಕಡೆಗಳಿಗೆ ತೆರಳಿದ್ದು, ವಂಚಕರ ಬೆನ್ನು ಬಿದ್ದಿದೆ. ಸ್ವಾಮಿ ಸುಪ್ರದೀಪ್ತಾನಂದ ಅವರು 2014ರಿಂದಲೂ ಗ್ವಾಲಿಯರ್ ನಲ್ಲಿರುವ ರಾಮಕೃಷ್ಣ ಆಶ್ರಮದಲ್ಲಿ ಕಾರ್ಯದರ್ಶಿಯಾಗಿದ್ದಾರೆ.

Cybercriminals, impersonating Enforcement Directo te (ED) officials, ve duped Swami Supradiptananda, secretary of Ramakrishna Mission Ashram in Gwalior, of Rs 2.5 crore after keeping him under 'digital arrest' for 26 days, police said Wednesday.