ಮಹಾತ್ಮನ ರಂಗ ಮಂದಿರದೆದುರಲ್ಲೇ ತ್ಯಾಜ್ಯ ರಾಶಿ ! ಉಳ್ಳಾಲ ನಗರಸಭೆ ಕಚೇರಿಯೀಗ ನರಕ ! ಖಾದರ್ ಸಾಹೇಬ್ರಲ್ಲಿ ನಗರ ಸದಸ್ಯರ ಪ್ರಶ್ನೆ 

17-04-22 07:15 pm       Mangalore Correspondent   ಕರಾವಳಿ

ಉಳ್ಳಾಲ ನಗರಸಭೆ ಆಡಳಿತಕ್ಕೆ ತ್ಯಾಜ್ಯ ವಿಲೇವಾರಿಗೆ ಸ್ಥಳ ಸಿಗದೆ ಆಡಳಿತ ಸೌಧದೆದುರಿನ ಮಹಾತ್ಮ ಗಾಂಧಿ ರಂಗ ಮಂದಿರದೊಳಗೆ ವಿಲೇವಾರಿ ನಡೆಸುವ ದೌರ್ಭಾಗ್ಯ ಬಂದಿದ್ದು ನರಕಸಭೆಯ ಬಗ್ಗೆ ಕ್ಷೇತ್ರದ ಶಾಸಕ ಖಾದರ್ ಉತ್ತರಿಸಬೇಕೆಂದು ಜೆಡಿಎಸ್ ನಗರಸದಸ್ಯ ಅಬ್ದುಲ್ ಬಶೀರ್ ಆಗ್ರಹಿಸಿದ್ದಾರೆ. 

ಉಳ್ಳಾಲ, ಎ.17 : ಉಳ್ಳಾಲ ನಗರಸಭೆ ಆಡಳಿತಕ್ಕೆ ತ್ಯಾಜ್ಯ ವಿಲೇವಾರಿಗೆ ಸ್ಥಳ ಸಿಗದೆ ಆಡಳಿತ ಸೌಧದೆದುರಿನ ಮಹಾತ್ಮ ಗಾಂಧಿ ರಂಗ ಮಂದಿರದೊಳಗೆ ವಿಲೇವಾರಿ ನಡೆಸುವ ದೌರ್ಭಾಗ್ಯ ಬಂದಿದ್ದು ನರಕಸಭೆಯ ಬಗ್ಗೆ ಕ್ಷೇತ್ರದ ಶಾಸಕ ಖಾದರ್ ಉತ್ತರಿಸಬೇಕೆಂದು ಜೆಡಿಎಸ್ ನಗರಸದಸ್ಯ ಅಬ್ದುಲ್ ಬಶೀರ್ ಆಗ್ರಹಿಸಿದ್ದಾರೆ. 

ಕಳೆದ ಅನೇಕ ವರ್ಷಗಳಿಂದ ಉಳ್ಳಾಲ ನಗರಸಭೆ ವ್ಯಾಪ್ತಿಯ ತ್ಯಾಜ್ಯವನ್ನ ಉಳ್ಳಾಲ ಮೊಗವೀರಪಟ್ಣ ಸಮುದ್ರ ತೀರದ ಪರಿಸರದಲ್ಲಿ ವಿಂಗಡಿಸಿ ವಿಲೇವಾರಿ ಮಾಡಲಾಗುತ್ತಿತ್ತು. ಇದೀಗ ಆ ಪ್ರದೇಶದ ಖಾಸಗಿ ಜಮೀನಿನಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದ್ದು ಉಳ್ಳಾಲ ನಗರಸಭೆ ಆಡಳಿತ ಇದರಿಂದ ದಿಕ್ಕೆಟ್ಟು ಹೋಗಿದೆ. ಬೇರೆ ದಾರಿ ಕಾಣದೆ ಉಳ್ಳಾಲ ನಗರಸಭೆ ಆಡಳಿತ ಕಚೇರಿ ಮುಂದಿರುವ ಮಹಾತ್ಮ ಗಾಂಧಿ ರಂಗಮಂದಿರದ ಮುಂದೆಯೇ ನಗರದ ತ್ಯಾಜ್ಯವನ್ನ ವಿಂಗಡಿಸಿ ವಿಲೇವಾರಿ ನಡೆಸುತ್ತಿದೆ. ನಗರಸಭೆ ಆಡಳಿತ ಸೌಧವು ಉಳ್ಳಾಲದ ಕೇಂದ್ರದಲ್ಲಿದ್ದು ಇದೀಗ ಇಲ್ಲಿ ತ್ಯಾಜ್ಯ ವಿಲೇವಾರಿ ನಡೆಸುವುದರಿಂದ ವಠಾರ ಪೂರ್ತಿ ಗಬ್ಬೆದ್ದು ಹೋಗಿದೆ. 
ರಂಗ ಮಂದಿರದ ಪಕ್ಕದಲ್ಲೇ ಕೇಂದ್ರ ಅಂಚೆ ಕಚೇರಿ ಇದ್ದು ಕಚೇರಿಗೆ ಬರುವವರು ತ್ಯಾಜ್ಯದ ವಾಸನೆ ಸಹಿಸಿಕೊಂಡೇ ಬರಬೇಕಾಗಿದೆ. ನಗರದಾದ್ಯಂತ ತ್ಯಾಜ್ಯ ವಿಲೇವಾರಿ ನಡೆಸುವ ವಾಹನಗಳು ರಾಶಿಗಟ್ಟಲೆ‌ ತ್ಯಾಜ್ಯವನ್ನ ಮಹಾತ್ಮ ಗಾಂಧಿ ರಂಗ ಮಂದಿರದ ಮುಂದೆ ಸುರಿದು ಹೋಗುತ್ತಿವೆ. ತ್ಯಾಜ್ಯ ರಾಶಿಯಲ್ಲಿ ಮಕ್ಕಳು ಬಳಸಿದ ಪ್ಯಾಂಪರ್ ಗಳಲ್ಲಿ ಸೊಳ್ಳೆಗಳು ಕುಳಿತು ಸಮೀಪದ ಹೊಟೇಲ್, ಕಚೇರಿ, ಮನೆಗಳಿಗೆ ದಾಳಿ ಇಡುತ್ತಿವೆ. ತ್ಯಾಜ್ಯ ವಿಲೇವಾರಿಯಲ್ಲಿ ರಾಜ್ಯ , ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನ ಬಾಚಿಕೊಂಡ ರಾಯಪ್ಪರಂತವರು ಉಳ್ಳಾಲ ನಗರಸಭೆಯ ಪೌರಾಯುಕ್ತರಾಗಿದ್ದರೂ ಉಳ್ಳಾಲದಲ್ಲಿ ಇನ್ನೂ ಸಮರ್ಪಕ ತ್ಯಾಜ್ಯ ವಿಲೇವಾರಿ ಘಟಕವನ್ನ ನಿರ್ಮಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಕೇಳಲು ಮಾಧ್ಯಮ ಪ್ರತಿನಿಧಿ ಫೋನ್ ಮಾಡಿದರೆ ಕರೆಯನ್ನೂ ಪೌರಾಯುಕ್ತ ರಾಯಪ್ಪ ಸ್ವೀಕರಿಸೋದಿಲ್ಲ. ನಗರಸಭೆ ಕಚೇರಿಗೆ ಹೋದರೆ ಅಲ್ಲೂ ರಾಯಪ್ಪ ಅಲಭ್ಯ. 

ಉಳ್ಳಾಲ ನಗರಸಭೆ ಜೆಡಿಎಸ್ ಸದಸ್ಯ ಅಬ್ದುಲ್ ಬಶೀರ್ ಅವರು ಈ ಬಗ್ಗೆ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರನ್ನ ಪ್ರಶ್ನಿಸಿದ್ದಾರೆ. ಖಾದರ್ ಪ್ರತಿನಿಧಿಸುವ ಮಂಗಳೂರು ವಿಧಾನಸಭಾ ಕ್ಷೇತ್ರಾದ್ಯಂತ ತ್ಯಾಜ್ಯ ವಿಲೇವಾರಿಗೆ ಅನುಕೂಲಕಾರಿಯಾಗುವ ಬಹಳಷ್ಟು ಸರಕಾರಿ ನಿವೇಶನಗಳಿವೆ. ಶಾಸಕ ಯು.ಟಿ ಖಾದರ್ ಅವರು ಈ ಬಗ್ಗೆ ಗಮನಹರಿಸಿ ಉಳ್ಳಾಲ ನಗರದ ತ್ಯಾಜ್ಯ ವಿಲೇವಾರಿಗೆ ಸಮರ್ಪಕ ಸ್ಥಳ ಒದಗಿಸಿ ಕೊಡಬೇಕು. ಅಸಮರ್ಪಕ ತ್ಯಾಜ್ಯ ವಿಲೇವಾರಿ ಬಗ್ಗೆ ಕ್ಷೇತ್ರದ ಜನರು ನಗರ ಸದಸ್ಯರಲ್ಲಿ ಪ್ರಶ್ನೆ ಮಾಡಿದರೆ ಅವರಿಗೆ ನಾವು ಏನೆಂದು ಉತ್ತರ ಕೊಡುವುದೆಂದು ಪ್ರಶ್ನಿಸಿದ್ದಾರೆ. ಉಳ್ಳಾಲವು ಇದೀಗ ಹೊಸ ತಾಲೂಕಾಗಿ ಬೇರ್ಪಟ್ಟಿದ್ದು ತಹಶೀಲ್ದಾರ್ ಗುರುಪ್ರಸಾದ್ ಈ ಬಗ್ಗೆ ಗಮನಹರಿಸಿ ಸಮಸ್ಯೆಗೆ ಪರಿಹಾರ ನೀಡಲು ಒತ್ತಾಯಿಸಿದ್ದಾರೆ.