ಮಂಡ್ಯದಲ್ಲಿ ಸೆಲ್ಫಿ ಹುಚ್ಚಿಗೆ ಐವರ ಬಲಿ ; ಕಾವೇರಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮಹಿಳೆಯರ ಸಾವು, ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಕಾರು ಚಾಲಕ

25-06-26 01:00 pm       HK News Staffer   ಕ್ರೈಂ

ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ನಡೆದ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಹಾಗೂ ಅವರನ್ನು ರಕ್ಷಿಸಲು ಮುಂದಾದ ಕಾರು ಚಾಲಕ ಸೇರಿ ಐವರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಪ್ರವಾಸಿ ತಾಣದಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ಮಂಡ್ಯ, ಜೂ.26: ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ನಡೆದ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಹಾಗೂ ಅವರನ್ನು ರಕ್ಷಿಸಲು ಮುಂದಾದ ಕಾರು ಚಾಲಕ ಸೇರಿ ಐವರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಪ್ರವಾಸಿ ತಾಣದಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ಮೃತರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಜಗದಪುರ ಗ್ರಾಮದ ವಿಜಯಮ್ಮ (52), ಅವರ ಪುತ್ರಿ ಪ್ರಿಯಾಂಕಾ, ಶ್ವೇತಾ (38), ಶ್ವೇತಾ ಅವರ ಪುತ್ರಿ ಚೈತ್ರಾ (20) ಹಾಗೂ ಕಾರು ಚಾಲಕ ಮಹೇಶ್ (30) ಎಂದು ಗುರುತಿಸಲಾಗಿದೆ.

ಕುಟುಂಬದ ಸದಸ್ಯರು ಕಬ್ಬಾಳು ದೇವಸ್ಥಾನದಲ್ಲಿ ಬೀಗರ ಔತಣಕೂಟದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದ ಬಳಿಕ ಮುತ್ತತ್ತಿ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನದ ನಂತರ ಕಾವೇರಿ ನದಿ ತೀರದಲ್ಲಿ ಫೋಟೋ ಮತ್ತು ಸೆಲ್ಫಿ ತೆಗೆಯಲು ಮುಂದಾಗಿದ್ದ ವೇಳೆ ಈ ದುರಂತ ಸಂಭವಿಸಿದೆ.

ಪೊಲೀಸರ ಮಾಹಿತಿ ಪ್ರಕಾರ, ನದಿಯ ನೀರು ಕಡಿಮೆ ಇದ್ದಂತೆ ಕಾಣಿಸಿದ್ದರಿಂದ ಮಹಿಳೆಯರು ನೀರಿನೊಳಗೆ ಇಳಿದಿದ್ದರು. ಆದರೆ ನೀರಿನ ಆಳ ಮತ್ತು ಪ್ರವಾಹದ ಸೆಳೆತದ ಬಗ್ಗೆ ಅರಿವಿಲ್ಲದೆ ಮುಂದೆ ಸಾಗಿದ ವೇಳೆ ಮೊದಲು ವಿಜಯಮ್ಮ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾರೆ. ಅವರನ್ನು ರಕ್ಷಿಸಲು ಶ್ವೇತಾ, ಚೈತ್ರಾ ಮತ್ತು ಪ್ರಿಯಾಂಕಾ ಮುಂದಾಗಿದ್ದು, ಅವರೂ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಬಳಿಕ ಅವರನ್ನು ಕಾಪಾಡಲು ಧಾವಿಸಿದ ಕಾರು ಚಾಲಕ ಮಹೇಶ್ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ನುರಿತ ಈಜುಗಾರರು ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದರು. ರಾತ್ರಿ ಸುಮಾರು 7 ಗಂಟೆ ವೇಳೆಗೆ ಐವರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಯಿತು.

ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ವಿ.ಜೆ. ಶೋಭಾರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ಮಾತನಾಡಿದ ಎಸ್‌ಪಿ ಶೋಭಾರಾಣಿ, “ನದಿಯೊಳಗಿನ ಕಲ್ಲುಗಳು ಸ್ಪಷ್ಟವಾಗಿ ಕಾಣುತ್ತಿದ್ದ ಕಾರಣ ನೀರು ಆಳವಾಗಿಲ್ಲ ಎಂದು ಅವರು ಭಾವಿಸಿದ್ದರು. ಆದರೆ ನೀರಿನ ಆಳ ಮತ್ತು ಸೆಳೆತದ ಅಂದಾಜು ಸಿಗದೆ ಈ ದುರ್ಘಟನೆ ನಡೆದಿದೆ” ಎಂದು ತಿಳಿಸಿದ್ದಾರೆ.

ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.