ಮಂಗಳೂರಿನಲ್ಲಿ ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ ; ಕಪ್ಪು ಬಾವುಟ ಹಿಡಿದು ಧಿಕ್ಕಾರ, ಪೊಲೀಸರ ತಳ್ಳಾಟ, ಜಟಾಪಟಿ !

12-04-22 05:48 pm       Mangalore Correspondent   ಕರಾವಳಿ

ಗುತ್ತಿಗೆದಾರ ಸಂತೋಷ್ ಪಾಟೀಲ್ ಸಚಿವ ಈಶ್ವರಪ್ಪ ವಿರುದ್ಧ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿದ್ದ ಹೊಟೇಲಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ.

ಮಂಗಳೂರು, ಎ.12: ಗುತ್ತಿಗೆದಾರ ಸಂತೋಷ್ ಪಾಟೀಲ್ ಸಚಿವ ಈಶ್ವರಪ್ಪ ವಿರುದ್ಧ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿದ್ದ ಹೊಟೇಲಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ.

ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಹೊಟೇಲ್ ಮುಂದೆ ಮುಖ್ಯಮಂತ್ರಿ ಮತ್ತು ಈಶ್ವರಪ್ಪ ವಿರುದ್ಧ ಧಿಕ್ಕಾರ ಕೂಗುತ್ತಾ ಕಾರ್ಯಕರ್ತರು ಬಂದಿದ್ದು ಹೊಟೇಲ್ ಒಳನುಗ್ಗಲು ಯತ್ನಿಸಿದ್ದಾರೆ. ಹೊಟೇಲ್ ಮುಂಭಾಗದಲ್ಲಿ ಒಳನುಗ್ಗಲು ಯತ್ನಿಸುತ್ತಿದ್ದಂತೆ ಪೊಲೀಸರು ತಡೆದಿದ್ದು ತೀವ್ರ ತಳ್ಳಾಟ ನಡೆದಿದೆ. ಪೊಲೀಸ್ ಕಮಿಷನರ್ ಶಶಿಕುಮಾರ್ ಸೇರಿದಂತೆ ಪೊಲೀಸರು ಕಾರ್ಯಕರ್ತರನ್ನು ತಡೆದು ಹೊರಕ್ಕೆ ತಳ್ಳಿಕೊಂಡು ಹೋಗಿದ್ದಾರೆ.

ಹೊಟೇಲ್ ಆವರಣದಲ್ಲಿ ಕಪ್ಪು ಬಾವುಟ ಹಿಡಿದು ಕಾರ್ಯಕರ್ತರು ಕೆಲಹೊತ್ತು ಧಿಕ್ಕಾರ ಕೂಗುತ್ತಾ ಹೈಡ್ರಾಮಾ ನಡೆಸಿದ್ದಾರೆ. ಪೊಲೀಸರು ಮತ್ತು ಕಾರ್ಯಕರ್ತರು ತಳ್ಳಾಟ ನಡೆಸಿದ್ದಾರೆ. ಕೊನೆಗೆ ಕಾರ್ಯಕರ್ತರನ್ನು ಪೊಲೀಸ್ ಬಸ್ಸಿನಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಹೊಟೇಲಿಗೆ ನುಗ್ಗುವ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಒಮ್ಮಿಂದೊಮ್ಮೆಲೇ ಸಿಎಂ ಬೊಮ್ಮಾಯಿ ಇದ್ದ ಹೊಟೇಲಿಗೆ ಕಾರ್ಯಕರ್ತರು ನುಗ್ಗಲು ಯತ್ನಿಸಿದ್ದಾರೆ. ಪೊಲೀಸರ ಬಿಗಿ ಬಂದೋಬಸ್ತ್ ನಡುವೆಯೇ ಕಾರ್ಯಕರ್ತರು ಧಿಕ್ಕಾರ ಕೂಗುತ್ತಾ ಒಳನುಗ್ಗಲು ಯತ್ನಿಸಿದ್ದು ಪೊಲೀಸರನ್ನು ತಬ್ಬಿಬ್ಬಾಗಿಸಿತ್ತು.

ಮಂಗಳೂರಿನ ನವಭಾರತ್ ವೃತ್ತದಲ್ಲಿರುವ ಓಶ್ಯನ್ ಪರ್ಲ್ ಹೊಟೇಲ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಪ್ರಮುಖರ ಸಮಾವೇಶ ನಡೆಯುತ್ತಿದ್ದು, ಕರಾವಳಿ ಭಾಗದ ಶಾಸಕರು, ಸಚಿವರು, ಪ್ರಮುಖ ನಾಯಕರು ಪಾಲ್ಗೊಂಡಿದ್ದಾರೆ. ಪೊಲೀಸರ ಬಿಗಿ ಕಾವಲಿನಲ್ಲಿ ಬೆಳಗ್ಗಿನಿಂದ ಸಭೆ ನಡೆಯುತ್ತಿದ್ದು, ಇದರ ಮಧ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನುಗ್ಗಿ ಮುತ್ತಿಗೆ ಹಾಕಿದ್ದು ಬಿಜೆಪಿ ಪಾಲಿಗೆ ಮುಜುಗರದ ಸನ್ನಿವೇಶ ಉಂಟಾಗಿದೆ.

 

Mangalore Youth Congress along with Mithun Rai gherao CM Bommai at ocean pearl hotel. A contractor involved in government projects, who recently accused a minister in the BJP government in Karnataka of harassing him for “commissions”, was found dead in a hotel in the state’s Udupi on Tuesday morning.