ಉಡುಪಿಯಲ್ಲಿ ಜಾಮಿಯಾ ಮಸೀದಿ ಮಾತ್ರ ಅಕ್ರಮವೇ ? ರಘುಪತಿ ಭಟ್ಟರಿಂದ ಸದನಕ್ಕೆ ತಪ್ಪು ಮಾಹಿತಿ, ಶಾಸಕರು ಧೈರ್ಯ ಇದ್ದರೆ ಶ್ವೇತಪತ್ರ ಹೊರಡಿಸಿ ! 

28-03-22 08:32 pm       Udupi Correspondent   ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರು ದ್ವೇಷ ರಾಜಕಾರಣ ನಡೆಸುತ್ತಿದ್ದಾರೆ. ಅಕ್ರಮ ಕಟ್ಟಡದ ಹೆಸರಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷರ ಕಟ್ಟಡ ತೆರವು ಮಾಡಿದ್ದಾರೆ. ಇದು ಜಾಮಿಯಾ ಮಸೀದಿಯ ಕಟ್ಟಡ.

ಉಡುಪಿ, ಮಾ.28 : ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರು ದ್ವೇಷ ರಾಜಕಾರಣ ನಡೆಸುತ್ತಿದ್ದಾರೆ. ಅಕ್ರಮ ಕಟ್ಟಡದ ಹೆಸರಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷರ ಕಟ್ಟಡ ತೆರವು ಮಾಡಿದ್ದಾರೆ. ಇದು ಜಾಮಿಯಾ ಮಸೀದಿಯ ಕಟ್ಟಡ. ನಗರದಲ್ಲಿ‌ ಜಾಮಿಯಾ ಮಸೀದಿಯ ಕಟ್ಟಡ ಮಾತ್ರ ಅನಧಿಕೃತವೇ.. ನಿಮಗೆ ಧೈರ್ಯ ಇದ್ರೆ, ನೈಜ ಎಂಎಲ್ ಎ ಆಗಿದ್ರೆ ಈ ಬಗ್ಗೆ ಶ್ವೇತಪತ್ರ ಹೊರಡಿಸಿ. ಈ‌ ಕಟ್ಟಡಕ್ಕೆ ಪರವಾನಗಿ ಕೊಟ್ಟಿದ್ದೀರಿ, ತೆರಿಗೆ ಪಡೆದಿದ್ದೀರಿ.‌ ಅಕ್ರಮ ಅಂತ ಹೇಗೆ ಹೇಳ್ತೀರಿ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಶ್ನೆ ಮಾಡಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೊಟೇಲ್ ವಿಸ್ತರಣೆ ಮಾಡಿದ್ದಾರೆ ನಿಜ. ಅದಕ್ಕೆ ಹೆಚ್ಚುವರಿ ದಂಡ ಕಟ್ಟಿ ಸಕ್ರಮ‌ ಕಟ್ಟಡ ಮಾಡಬಹುದಿತ್ತು. ಇವರ ದ್ವೇಷದ ರಾಜಕಾರಣಕ್ಕೆ ಮಸೀದಿ ಕಟ್ಟಡ ಬಲಿಯಾಗಿದೆ.‌  ಈ‌ ಮೂಲಕ ನಿಮ್ಮ ವಿರುದ್ದದ ಸೈದ್ದಾಂತಿಕ ಹೋರಾಟದ ಧ್ವನಿ ಅಡಗಿಸಲು ಸಾಧ್ಯವಿಲ್ಲ.‌ ಕ್ಷುಲ್ಲಕ ರಾಜಕೀಯ ಮಾಡಬೇಡಿ.‌ ನೈಜ ವಿಚಾರ ಮುಂದಿಟ್ಟು ನಮ್ಮನ್ನು ಎದುರಿಸುವ ಧೈರ್ಯ ನಿಮಗೆ ಇಲ್ಲ. 

ಬಿಜೆಪಿ ಅಕ್ರಮವಾಗಿ ರಾಜ್ಯಾಡಳಿತ ಮಾಡುತ್ತಿದ್ದಾರೆ. ನಿಮ್ಮದು ಅಕ್ರಮ ಸರ್ಕಾರ, ನಿಮಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಮುಸ್ಲೀಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವುದನ್ನು ಸರಕಾರ ನಡೆಸುವ ಮಂದಿ ಬೆಂಬಲಿಸುತ್ತಿದ್ದಾರೆ.‌ ಇದು ಧರ್ಮಗಳ ನಡುವಿನ ಯುದ್ದ ಅಲ್ಲ, ಇದು ಒಳ್ಳೆಯ ಬೆಳವಣಿಗೆ ಅಂತೂ ಅಲ್ಲ. ಇದು ಹಿಂದು ಮುಸ್ಲಿಂ ವಿವಾದವೂ ಅಲ್ಲ.‌ ಇದು ಸಂಘ ಪರಿವಾರದ ಹೋರಾಟ ಅಷ್ಟೇ. 

ಶತಮಾನಗಳಿಂದ ಇಲ್ಲಿನ ಜನರು ಸರ್ವ ಜನಾಂಗದ ಶಾಂತಿಯ ತೋಟದಂತೆ ಜೀವಿಸಿದ್ದಾರೆ. ರಾಜ್ಯ ಸರ್ಕಾರ ಕೂಡ ವ್ಯಾಪಾರ ಬಹಿಷ್ಕಾರಕ್ಕೆ ಇದಕ್ಕೆ ಕುಮ್ಮಕ್ಕು ಕೊಡ್ತಾ ಇರೋದು ನೋಡಿದರೆ ಇದರ ಹಿಂದೆ ಕಂದಕ ಸೃಷ್ಟಿಸುವ ಅಜೆಂಡಾ ಇರುವುದು ಸ್ಪಷ್ಟವಾಗುತ್ತಿದೆ. ಗಲ್ಪ್ ದೇಶದಲ್ಲಿ ಕರಾವಳಿಯ ಅನೇಕ‌ ಜನ ಉದ್ಯೋಗ, ದೊಡ್ಡ ಹುದ್ದೆ ಪಡೆದಿದ್ದಾರೆ. ಮುಸ್ಲಿಂ ರಾಷ್ಟ್ರದಲ್ಲಿ ಸೌಹಾರ್ದ ಇದೆ, ಆದರೆ ಜಾತ್ಯಾತೀತ ರಾಷ್ಟ್ರದಲ್ಲಿ ಈ ರೀತಿ ಮಾಡುವುದು ಶೋಭೆ ತರುವುದಿಲ್ಲ.‌ ರಾಜ್ಯ ಸರ್ಕಾರ ತಕ್ಷಣ ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಮಜೀದ್ ಆಗ್ರಹಿಸಿದರು.‌

ಶಾಸಕ ರಘುಪತಿ ಭಟ್ ಸದನದಲ್ಲಿ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಯತ್ನ ಮಾಡಿದ್ದಾರೆ. ಕೋರ್ಟ್ ತೀರ್ಪು ವಿರೋಧಿಸಿ ಕರಾವಳಿ ಮುಸ್ಲಿಮರು ಶಾಂತಿಯುತ ಬಂದ್ ಆಚರಿಸಿದ್ದಾರೆ. ಆದರೆ ರಘುಪತಿ ಭಟ್, ಬಲವಂತವಾಗಿ ಹಿಂದೂ ಅಂಗಡಿಗಳನ್ನು ಮುಚ್ಚಿಸಿದ್ದಾರೆ ಎಂದು ಹೇಳಿದ್ದಾರೆ.‌ ಸದನದಲ್ಲಿ ಈ ರೀತಿಯ ಹೇಳಿಕೆ ನೀಡಿರುವುದು ಅಕ್ಷಮ್ಯ, ಅವರ ವಿರುದ್ದ ಕ್ರಮ ಕೈಗೊಳ್ಳಬೇಕು.‌ ಇಡೀ ರಾಜ್ಯದಲ್ಲಿ ಅಂತಹ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಇದು ನಿಮಗೆ ಸವಾಲು. ಎಲ್ಲಾದರೂ ಅಂತಹ ನಿದರ್ಶನ ಆಗಿದ್ದರೆ ತೋರಿಸಿ.‌

ನಿಮ್ಮದೇ ಕ್ಷೇತ್ರದ ಜಾಮಿಯಾ ಮಸೀದಿ‌ ಕಟ್ಟಡದಲ್ಲಿ ಹಿಂದೂಗಳು ಅಂದು ವ್ಯಾಪಾರ ಮಾಡಿದ್ದಾರೆ.‌ ಅವರನ್ನು ಯಾರೂ ಬಂದ್ ಮಾಡಿಸಿಲ್ಲ.‌ ಹಲವು ಮುಸಲ್ಮಾನರ ಅಂಗಡಿಗಳನ್ನು ಕೂಡ.ಬಂದ್ ಮಾಡಿಸಿಲ್ಲ. ತಪ್ಪು ಮಾಹಿತಿ ನೀಡಿದ ರಘುಪತಿ ಭಟ್ ಸದನದಲ್ಲಿ‌ಯೇ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ತಮ್ಮ ಹೇಳಿಕೆ ಸತ್ಯವೆಂದು ಸಾಬೀತು ಮಾಡಬೇಕು ಎಂದು ಮಜೀದ್ ಹೇಳಿದರು. 

ಮುಸ್ಲಿಮರು ಕೋರ್ಟ್ ತೀರ್ಪು ಮಾನ್ಯ ಮಾಡುವುದಿಲ್ಲ ಎಂದು ದೂರುತ್ತಾರಲ್ಲಾ.. ಶಬರಿಮಲೆಯ ಸ್ತ್ರೀಯರ ಪ್ರವೇಶ ಕುರಿತ ಪಂಚ ಪೀಠದ ತೀರ್ಪಿನ ವಿರುದ್ದ ವರ್ಷಗಳ‌ ಕಾಲ ಸಂಘ ಪರಿವಾರದ ಕಾರ್ಯಕರ್ತರು ಕೇರಳದಲ್ಲಿ ಪ್ರತಿಭಟನೆ, ದಾಂಧಲೆ ನಡೆಸಿದ್ದರು.‌ ಬಿಜೆಪಿಯವರು ಪೊಲೀಸ್ ಠಾಣೆಗೆ ಬಾಂಬ್ ಎಸೆದಿದ್ದೂ ನಡೆದಿತ್ತು.‌ ಬಸ್ ಗೆ ಬೆಂಕಿ ಹಾಕಿ ಅಕ್ಷರಶಃ ಬಂದ್ ಮಾಡಿ ಅಲ್ಲಿನ ಜನಜೀವನಕ್ಕೆ ತೊಂದರೆ ಮಾಡಿದ್ದರು. ಆಗ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ರಂಪ ಮಾಡಿಲ್ಲವೇ ನೀವು.. ಹಿಜಾಬ್ ವಿಚಾರದಲ್ಲಿ ಪಾಠ ಹೇಳುವ ಗೃಹ ಸಚಿವರೇ ನಿಮಗೆ ನೈತಿಕತೆ ಇದೆಯಾ? 

ಇಷ್ಟೆಲ್ಲ ನಡೆಯುತ್ತಿದ್ದರೂ ನಾಚಿಗೆ ಗೆಟ್ಟ ವಿರೋಧ ಪಕ್ಷಗಳು ಸದನದಲ್ಲಿ ಬಾಯಿ ಮುಚ್ಚಿ ಕುಳಿತಿವೆ. ಏನ್ ಮಾಡ್ತಾ ಇದೀರಿ ಸಿದ್ದರಾಮಯ್ಯ? ಕುಮಾರಸ್ವಾಮಿ? ನೀವೆಲ್ಲ ಯಾಕೆ ಸುಮ್ಮನೆ ಕುಳಿತಿದ್ದೀರಿ..  ಬಾಬ್ರಿ ತೀರ್ಪು ಬಂದಾಗಲೂ ರಾಜ್ಯದಲ್ಲಿ ಸಣ್ಣ ಗಲಾಟೆ ನಡೆದಿಲ್ಲ. ಹೈಕೋರ್ಟ್ ತೀರ್ಪು ಬಂದಾಗಲೂ ಯಾರೂ ಗಲಾಟೆ ಮಾಡಿಲ್ಲ. ನೀವು ಕೋರ್ಟ್ ತೀರ್ಪು ವಿರೋಧಿಸಿ ಗಲಾಟೆ ಮಾಡಿದರೆ ಸರಿ, ಬೇರೆಯವರು ಮಾಡಿದರೆ ತಪ್ಪು ಆಗುತ್ತದೆಯಾ ಎಂದು ಮಜೀದ್ ಪ್ರಶ್ನೆ ಮಾಡಿದ್ದಾರೆ. ‌

It is despicable that even after being one of the biggest political parties of the nation, the BJP is still using Hindu - Muslim card for vote bank politics", said Majid Ali, SDPI Karnataka President.