ಕಡಬ ; ಪೇರಳೆ ಹಣ್ಣು ಕೊಯ್ಯಲು ಹೋದ ಮೂರನೇ ತರಗತಿ ಬಾಲಕ ಮರದಿಂದ ಬಿದ್ದು ಸಾವು 

18-03-22 12:43 pm       Mangalore Correspondent   ಕರಾವಳಿ

ಪೇರಳೆ ಹಣ್ಣು ಕೊಯ್ಯಲು ಹೋಗಿ ಮರದಿಂದ ಬಿದ್ದು ತಲೆಯ ಭಾಗಕ್ಕೆ ತೀವ್ರ ಗಾಯಗೊಂಡು ಮೂರನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಘಟನೆ ಕಡಬ ತಾಲೂಕಿನ ದೋಳ್ಪಾಡಿ ಎಂಬಲ್ಲಿ ನಡೆದಿದೆ.

ಪುತ್ತೂರು, ಮಾ.18: ಪೇರಳೆ ಹಣ್ಣು ಕೊಯ್ಯಲು ಹೋಗಿ ಮರದಿಂದ ಬಿದ್ದು ತಲೆಯ ಭಾಗಕ್ಕೆ ತೀವ್ರ ಗಾಯಗೊಂಡು ಮೂರನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಘಟನೆ ಕಡಬ ತಾಲೂಕಿನ ದೋಳ್ಪಾಡಿ ಎಂಬಲ್ಲಿ ನಡೆದಿದೆ. 

ದೋಳ್ಪಾಡಿ ನಿವಾಸಿ ದಿವಾಕರ ಗೌಡ ಎಂಬವರ ಪುತ್ರ ಉಲ್ಲಾಸ್ (9) ಮೃತ ವಿದ್ಯಾರ್ಥಿ. ದೋಳ್ಪಾಡಿ ಸರಕಾರಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದ ಬಾಲಕ ಸಂಜೆ ಶಾಲೆಯಿಂದ ಮರಳಿದ ಬಳಿಕ ಮನೆಯ ಬಳಿ ಇತರ ಮಕ್ಕಳ ಜೊತೆಗೆ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ಪೇರಳೆ ಮರಕ್ಕೇರಿದ್ದ ಉಲ್ಲಾಸ್ ಕಾಲು ಜಾರಿ ನೆಲಕ್ಕೆ ಬಿದ್ದಿದ್ದಾನೆ. ತಲೆಯ ಹಿಂಭಾಗಕ್ಕೆ ಏಟು ಬಿದ್ದು ಮೂಗಿನಲ್ಲಿ ರಕ್ತ ಬರುತ್ತಿದ್ದುದನ್ನು ಗಮನಿಸಿ ಮನೆಯವರು ಕಡಬ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. 

ವೈದ್ಯರು ಪರೀಕ್ಷಿಸಿದಾಗ, ಬಾಲಕ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ‌ಈ ಬಗ್ಗೆ ಬಾಲಕನ ತಂದೆ ದಿವಾಕರ ಅವರು ಕಡಬ ಠಾಣೆಗೆ ಮಾಹಿತಿ ನೀಡಿದ್ದು ಮರದಿಂದ ಬಿದ್ದು ಮೃತಪಟ್ಟಿದ್ದು ಇದರಲ್ಲಿ ಬೇರೆ ಯಾವುದೇ ಸಂಶಯ ಇಲ್ಲವೆಂದು ತಿಳಿಸಿದ್ದಾರೆ.

Kadaba 9 year old boy dies after falling from tree in Mangalore. The deceased has been identified as Ullas.