ಯುದ್ಧಗ್ರಸ್ತ ಉಕ್ರೇನಿಂದ ಪಾರಾಗಿ ಬಂದ ಮಂಗಳೂರಿನ ವಿದ್ಯಾರ್ಥಿನಿ ; ನಾವಿದ್ದ ಜಾಗದಲ್ಲಿ ಸಮಸ್ಯೆ ಇರಲಿಲ್ಲ, ನಡೆದುಕೊಂಡೇ ಬಂದು ರೊಮೇನಿಯಾ ಗಡಿ ದಾಟಿದೆವು !

03-03-22 04:44 pm       Mangalore Correspondent   ಕರಾವಳಿ

ಯುದ್ಧಪೀಡಿತ ಉಕ್ರೇನಲ್ಲಿ ಸಿಕ್ಕಿಬಿದ್ದು ಆತಂಕದಲ್ಲಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ, ಮಂಗಳೂರಿನ ಬಿಜೈ ನಿವಾಸಿ ಅನುಷಾ ಭಟ್ ಇಂದು ತಾಯ್ನಾಡು ಮಂಗಳೂರಿಗೆ ತಲುಪಿದ್ದಾರೆ.

ಮಂಗಳೂರು, ಮಾ.3: ಯುದ್ಧಪೀಡಿತ ಉಕ್ರೇನಲ್ಲಿ ಸಿಕ್ಕಿಬಿದ್ದು ಆತಂಕದಲ್ಲಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ, ಮಂಗಳೂರಿನ ಬಿಜೈ ನಿವಾಸಿ ಅನುಷಾ ಭಟ್ ಇಂದು ತಾಯ್ನಾಡು ಮಂಗಳೂರಿಗೆ ತಲುಪಿದ್ದಾರೆ. ಮುಂಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅನುಷಾ ಭಟ್ ಅವರನ್ನು ಸಂಸದ ನಳಿನ್ ಕುಮಾರ್ ಹಾಗೂ ಶಾಸಕ ವೇದವ್ಯಾಸ ಕಾಮತ್ ಸ್ವಾಗತಿಸಿದರು. ಮಗಳ ಬರುವಿಕೆಗಾಗಿ ಕಾದು ಕುಳಿತಿದ್ದ ಹೆತ್ತವರು ಮಗಳನ್ನು ಕಾಣುತ್ತಲೇ ಅಪ್ಪಿಕೊಂಡು ಕಣ್ಣೀರು ಹಾಕಿದರು.

ಉಕ್ರೇನಿನ ವಿನ್ನೆಸ್ಟಿಯಾ ನಗರದ ನ್ಯಾಶನಲ್ ಕಾಲೇಜಿನಲ್ಲಿ ಮೂರನೇ ವರ್ಷದ ಎಂಬಿಬಿಎಸ್ ಓದುತ್ತಿದ್ದ ಅನುಷಾ ಜೊತೆಗೆ 18 ಮಂದಿ ಭಾರತೀಯರು ಇದ್ದರು. ತಾವು ಅಲ್ಲಿಂದ ಪಾರಾಗಿ ಬಂದ ಬಗೆಯನ್ನು ವಿವರಿಸಿದ ಅನುಷಾ, ನಾವಿದ್ದ ಸ್ಥಳದಿಂದ ರೊಮೇನಿಯಾ ಗಡಿ ತಲುಪಲು ಫೆ.26ರಂದು ಏಜಂಟರ ಮೂಲಕ ಪಾಸ್ ಗಳನ್ನು ಮಾಡಿದ್ದೆವು. ಅವರಲ್ಲಿಯೇ ಬಸ್ ಬುಕ್ ಮಾಡಿಕೊಂಡು ಅಲ್ಲಿಂದ ರೊಮೇನಿಯಾ ಗಡಿಭಾಗದಲ್ಲಿರುವ ಚೆರ್ನಿವಿಸ್ಟ್ ನಗರವನ್ನು ತಲುಪಿದ್ದೆವು. ಅಲ್ಲಿಂದ ಎರಡು ಕಿಮೀ ದೂರಕ್ಕೆ ನಡೆದುಕೊಂಡು ರೊಮೇನಿಯಾಕ್ಕೆ ಬಂದು ಅಲ್ಲಿನ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದೆವು.

ಅಲ್ಲಿ ಯಾವುದೇ ಸರಕಾರಿ ಅಧಿಕಾರಿಗಳನ್ನು ನಿಯೋಜನೆ ಮಾಡಿರಲಿಲ್ಲ. ಉಕ್ರೇನ್ ಸೇನೆಯ ಯೋಧರು ಮಾತ್ರ ಗಡಿಯಲ್ಲಿದ್ದರು. ರೊಮೇನಿಯಾದಲ್ಲಿ ಎರಡು ದಿನಗಳ ಕಾಲ ಇದ್ದು ಅಲ್ಲಿಂದ ಭಾರತದ ವಿಮಾನದಲ್ಲಿ ಮುಂಬೈಗೆ ಶಿಫ್ಟ್ ಮಾಡಿದರು. ಅಲ್ಲಿಂದ ನೇರವಾಗಿ ಮಂಗಳೂರಿಗೆ ಬಂದಿದ್ದೇವೆ. ನಮ್ಮ ಜೊತೆಗಿದ್ದ 18 ಮಂದಿಯೂ ಮುಂಬೈಗೆ ಆಗಮಿಸಿದ್ದಾರೆ. ಏರ್ ಲಿಫ್ಟ್ ಮಾಡಲು ಯಾವುದೇ ಸಮಸ್ಯೆ ಆಗಿಲ್ಲ ಎಂದು ಅನುಷಾ ಹೇಳಿದರು.

ನಾವು ಇದ್ದ ಸ್ಥಳದಲ್ಲಿ ಯುದ್ಧದ ಪರಿಸ್ಥಿತಿ ಇರಲಿಲ್ಲ. ಮನೆಯವರ ಜೊತೆ ನಿರಂತರ ಸಂಪರ್ಕದಲ್ಲಿದ್ದೆವು. ಪರೀಕ್ಷೆ ಇದ್ದುದರಿಂದ ಅಲ್ಲಿಂದ ಮೊದಲೇ ಹೊರಡುವ ಬಗ್ಗೆ ಪ್ಲಾನ್ ಮಾಡಿರಲಿಲ್ಲ. ನಮ್ಮ ಜೊತೆಗಿದ್ದ ಎಲ್ಲರೂ ಸುರಕ್ಷಿತವಾಗಿ ಬಂದಿದ್ದೇವೆ ಎಂದು ಹೇಳಿದರು.

ಯುದ್ಧ ಪೀಡಿತ ಖಾರ್ಕೀವ್ ನಗರದಿಂದ ವಿನ್ನಿಸ್ಟಿಯಾ 200 ಕಿಮೀ ದೂರದಲ್ಲಿದ್ದು ಅಲ್ಲಿಗೆ ರಷ್ಯಾ ಬಾಂಬ್ ದಾಳಿ ಮಾಡಿರಲಿಲ್ಲ. ಹೀಗಾಗಿ ಅಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆ ಆಗಿರಲಿಲ್ಲ. ಆದರೆ, ಭಾರತ ಸರಕಾರ ಉಕ್ರೇನಲ್ಲಿರುವ ಎಲ್ಲರೂ ಮರಳಿ ಬರಬೇಕೆಂದು ಸೂಚನೆ ನೀಡಿದ್ದರಿಂದ ಮತ್ತು ರಷ್ಯಾ ದಾಳಿಯ ಆತಂಕ ಇದ್ದುದರಿಂದ ಅಲ್ಲಿನ ವಿದ್ಯಾರ್ಥಿಗಳು ಮರಳುತ್ತಿದ್ದಾರೆ. ಅನುಷಾ ಹೆತ್ತವರಾದ ವಿದ್ಯಾ ಮತ್ತು ಹರಿಶ್ಚಂದ್ರ ಭಟ್, ಮಂಗಳೂರಿನ ಬಿಜೈ ನ್ಯೂರೋಡ್ ನಿವಾಸಿಗಳಾಗಿದ್ದು, ಮಗಳನ್ನು ಕರೆಸಿಕೊಳ್ಳಲು ನೆರವು ನೀಡಿದ ಜಿಲ್ಲಾಧಿಕಾರಿ, ಶಾಸಕರು, ಸಂಸದರಿಗೆ ಕೃತಜ್ಞತೆ ಹೇಳಿದ್ದಾರೆ. ಅಂದಹಾಗೆ, ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ 18 ಮಂದಿ ಉಕ್ರೇನಲ್ಲಿ ಇದ್ದಾರೆ ಎನ್ನಲಾಗುತ್ತಿದ್ದು, ಅವರ ಪೈಕಿ ಅನುಷಾ ಭಟ್ ಮೊದಲ ಬಾರಿಗೆ ತಾಯ್ನಾಡಿಗೆ ಬಂದಿದ್ದಾರೆ.

Student from the city, Anusha Bhat, arrived at the international airport here from Ukraine on Thursday March 3. Anusha’s family, the MP Nlain Kumar Kateel and MLA Vedavyasa Kamath, welcomed her at the airport. Anusha hails from Bejai and was pursuing her third year MBBS. She was one among the 18 students stranded in Ukraine after Russia declared war on it. She said, “We took a bus from Vinnytsia to Chernivtsi, a border town in Ukraine. From there we reached the Romanian border. We had to walk for about 2 km towards the border post and then cross it by road. There were no government officials at the spot. Only Ukrainian army officers were deployed.