ಪಕ್ಷ ಸಂಘಟನೆಗೆ ಲಕ್ಷಾಂತರ ಖರ್ಚು ; ಮುಸ್ಲಿಂ ಎಂಬ ಕಾರಣಕ್ಕೆ ನನ್ನನ್ನು ತುಳಿದರೆಂದು ಹೇಳಿ ಬಿಜೆಪಿಗೆ ರಾಜೀನಾಮೆ ನೀಡಿದ ಮುನೀರ್ ಬಾವಾ ! 

12-02-22 08:51 pm       Mangalore Correspondent   ಕರಾವಳಿ

ಮುಸಲ್ಮಾನನೆಂಬ ಏಕೈಕ ಕಾರಣಕ್ಕೆ ತುಳಿದರು ಎಂದು ಆರೋಪಿಸಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎ.ಮುನೀರ್ ಬಾವಾ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಉಳ್ಳಾಲ, ಫೆ.12 : 17 ವರ್ಷಗಳಿಂದ ಪಕ್ಷ ಸಂಘಟನೆಗಾಗಿ ಕೆಲಸ ಮಾಡುತ್ತಾ ಸ್ವಂತದ ಲಕ್ಷಾಂತರ ರೂಪಾಯಿಗಳನ್ನ ಖರ್ಚು ಮಾಡಿದ್ದರೂ ಸಹ ತನ್ನನ್ನು ಮುಸಲ್ಮಾನನೆಂಬ ಏಕೈಕ ಕಾರಣಕ್ಕೆ ತುಳಿದರು ಎಂದು ಆರೋಪಿಸಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎ.ಮುನೀರ್ ಬಾವಾ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಉದ್ಯಮಿಯಾಗಿರುವ ಕೆ.ಎ.ಮುನೀರ್ ಬಾವಾ ಅವರು ಕಳೆದ 17 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದು ಇದೀಗ ದಿಢೀರ್ ಆಗಿ ಪಕ್ಷದ ಪ್ರಮುಖರಿಗೆ ತನ್ನ ರಾಜೀನಾಮೆಯನ್ನ ರವಾನಿಸಿದ್ದಾರೆ. ಪಕ್ಷ ಅಧಿಕಾರದಲ್ಲಿರದ ಸಂದರ್ಭದಲ್ಲಿಯೂ ಯಾವುದೇ ಫಲಾಪೇಕ್ಷೆ ಇಲ್ಲದೆ ದುಡಿದಿದ್ದೇನೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಲು ತಾನು ಸ್ವಂತದ ಲಕ್ಷಾಂತರ ಹಣವನ್ನೂ ವ್ಯಯಿಸಿದ್ದೇನೆ. ಅಲ್ಪಸಂಖ್ಯಾತ ಬಾಹುಳ್ಯದ ಉಳ್ಳಾಲ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಬಿಜೆಪಿಗೆ ಲಭಿಸುವಂತೆ ಮಾಡಿದ್ದೇನೆ. ಪಕ್ಷ ಅಧಿಕಾರಕ್ಕೆ ಬಂದ ನಂತರ ತಾನು ಮುಸಲ್ಮಾನನೆಂಬ ಏಕೈಕ ಕಾರಣಕ್ಕೆ ಉಳ್ಳಾಲದ ಕೆಲ ಬಿಜೆಪಿ ಪ್ರಮುಖರು ತನ್ನನ್ನ ತುಳಿದಿದ್ದಾರೆ ಎಂದು ಆರೋಪಿಸಿದ್ದಾರೆ. 

ಇತರ ಪಕ್ಷದಿಂದ ಬಿಜೆಪಿಗೆ ವಲಸೆ ಬಂದವರು ಪಕ್ಷದಲ್ಲಿ ಅಧಿಕಾರ ಪಡೆದು ವಿಜೃಂಭಿಸುತ್ತಿದ್ದು ಇದನ್ನೆಲ್ಲವನ್ನೂ ಸಹಿಸಿ ತಾನು ಪಕ್ಷ ಸಂಘಟನೆಗಾಗಿ ದುಡಿದಿದ್ದೇನೆ. ಮುಸಲ್ಮಾನನೆಂಬ ಕಾರಣಕ್ಕೆ‌ ಇದೀಗ ತನ್ನನ್ನು ಮೂಲೆಗುಂಪು ಮಾಡಿದ್ದು ಇದರಿಂದ ಬೇಸರಗೊಂಡು ರಾಜಿನಾಮೆ ನೀಡುತ್ತಿದ್ದೇನೆ ಎಂದು ಮುನೀರ್ ಬಾವಾ ತನ್ನ ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ. 

ರಾಜಿನಾಮೆ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ, ಕ್ಷೇತ್ರ ಸಮಿತಿ ಅಧ್ಯಕ್ಷರಿಗೆ ರವಾನಿಸಿದ್ದಾರೆ. ಮುನೀರ್ ಅವರ ರಾಜೀನಾಮೆ ಪತ್ರಕ್ಕೆ ಪಕ್ಷದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದುಬಂದಿದೆ.

DK Bjp Minority Secretary Muneer Bava resigns from BJP party as he finds no support because he is Muslim. He alleged that after spending lakhs of rupees for the party yet leaders considered me only as Muslim and never supported me he said.