ಆಕಾಶಭವನ್ ಶರಣ್ ಯಾರೆಂದೇ ಗೊತ್ತಿಲ್ಲ , ಅಮಾಯಕರನ್ನು ಪೊಲೀಸರು ಸಿಕ್ಕಿಸಿದ್ದಾರೆ, ವಿಚಾರಣೆಗೆ ಕರೆದು ನಮ್ಮ ಗಂಡಂದಿರನ್ನು ಬಲಿಪಶು ಮಾಡಿದ್ದಾರೆ !

17-01-22 09:37 pm       Mangaluru Correspondent   ಕರಾವಳಿ

ನಮ್ಮ ಗಂಡಂದಿರು ಅಮಾಯಕರು. ಈವರೆಗೂ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರಲ್ಲ. ನಮ್ಮನ್ನು ಪೊಲೀಸರು ಬಲಿಪಶು ಮಾಡಿದ್ದಾರೆ ಎಂದು ಇತ್ತೀಚೆಗೆ ರಾಬರಿ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ ಪ್ರಸಾದ್ ಮತ್ತು ಚೇತನ್ ಕೊಟ್ಟಾರಿ ಅವರ ಪತ್ನಿಯರು ಆತಂಕ ತೋಡಿಕೊಂಡಿದ್ದಾರೆ.

ಮಂಗಳೂರು, ಜ.17: ತಪ್ಪು ಮಾಡದ ಅಮಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಆಕಾಶಭವನ ಶರಣ್ ಯಾರೆಂದೇ ಗೊತ್ತಿಲ್ಲ. ಸಿಸಿಬಿ ಪೊಲೀಸರು ವಿಚಾರಣೆಗೆಂದು ಕರೆಸಿ, ಬಂಧಿಸಿದ್ದಾರೆ. ನಮ್ಮ ಗಂಡಂದಿರು ಅಮಾಯಕರು. ಈವರೆಗೂ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರಲ್ಲ. ನಮ್ಮನ್ನು ಪೊಲೀಸರು ಬಲಿಪಶು ಮಾಡಿದ್ದಾರೆ ಎಂದು ಇತ್ತೀಚೆಗೆ ರಾಬರಿ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ ಪ್ರಸಾದ್ ಮತ್ತು ಚೇತನ್ ಕೊಟ್ಟಾರಿ ಅವರ ಪತ್ನಿಯರು ಆತಂಕ ತೋಡಿಕೊಂಡಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಚೇತನ್ ಕೊಟ್ಟಾರಿ ಅವರ ಪತ್ನಿ ಭಾಗ್ಯಶ್ರೀ ಮತ್ತು ಪ್ರಸಾದ್ ಫರಂಗಿಪೇಟೆ ಅವರ ಪತ್ನಿ ನಿಶಿತಾ, ಪೊಲೀಸರಿಂದ ತಮಗಾದ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದಾರೆ. ಜನವರಿ 13ರಂದು ಅನಿಲ್ ಪಂಪ್ವೆಲ್ ಜೊತೆಗಿದ್ದರೆಂದು ಪೊಲೀಸರು ಕರೆದೊಯ್ದಿದ್ದಾರೆ. ಇವರಿಗೆ ಕೇಸ್ ವಿಚಾರ ಏನೆಂದೇ ಗೊತ್ತಿಲ್ಲ. ವಿಚಾರಣೆ ಎಂದು ಹೇಳಿ ಕರೆದೊಯ್ದು ರಾತ್ರಿ ಅಲ್ಲಿಯೇ ನಿಲ್ಲಿಸಿದ್ದಾರೆ. ಫೋನ್ ಮಾಡಿದಾಗ, ಏನೋ ವಿಚಾರಣೆ ಅಂತ ಪೊಲೀಸರಲ್ಲಿದ್ದೇವೆ. ಬೆಳಗ್ಗೆ ಬರುತ್ತೇನೆ ಎಂದಿದ್ದರು. ಆದರೆ ಮರುದಿನ ಪೊಲೀಸ್ ಕಮಿಷನರ್ ಪ್ರೆಸ್ ಕರೆದು, ಬಂಧಿಸಿದ್ದಾಗಿ ತಿಳಿಸಿದ್ದರು. ಮಧ್ಯಾಹ್ನ ಈ ರೀತಿ ಸುದ್ದಿ ಬಂದಾಗ ನಮಗೆ ಬಂಧನ ವಿಚಾರ ತಿಳಿದು ತುಂಬ ಆತಂಕವಾಯ್ತು ಎಂದು ಹೇಳಿದ್ದಾರೆ.

ಪ್ರಸಾದ್ ಅವರ ತಂಗಿ ಗಾಯತ್ರಿ ಮಾತನಾಡಿ, ಮರುದಿನ ಬೆಳಗ್ಗೆ ನಾವು ಸುರತ್ಕಲ್ ಠಾಣೆಗೆ ಹೋದಾಗ, ನಾವು ಬಂಧಿಸಿಲ್ಲ, ಸಿಸಿಬಿಯವರು ಬಂಧಿಸಿದ್ದಾಗಿ ಹೇಳಿದರು. ಆನಂತರ ಸಿಸಿಬಿಗೆ ತೆರಳಿದಾಗ ನಾವು ಅರೆಸ್ಟ್ ಮಾಡಿಲ್ಲ ಎಂದರು. ನಮ್ಮನ್ನು ಬೆಳಗ್ಗಿನಿಂದ ಮಧ್ಯಾಹ್ನ ಮೂರು ಗಂಟೆ ವರೆಗೆ ಅಲೆದಾಡಿಸಿದ್ದಾರೆ. ಕೊನೆಗೆ ಕಮಿಷನರ್, ಬಂಧಿಸಿದ್ದಾಗಿ ತಿಳಿಸಿದ್ದು ಸುದ್ದಿ ಬಂದಿದೆ. ನಾವು ಕೂಡಲೇ ಕಮಿಷನರ್ ಭೇಟಿಗೆ ಪ್ರಯತ್ನ ಮಾಡಿದೆವು. ಆದರೆ ಅವಕಾಶ ಕೊಡಲಿಲ್ಲ. ಕೆಲವು ಪ್ರೆಸ್ ನವರಿಗೆ ಫೋನ್ ಮಾಡಿ, ಪ್ರೆಸ್ ಮೀಟ್ ಮಾಡುವ ಬಗ್ಗೆ ಕೇಳಿಕೊಂಡೆವು. ಸಂಜೆಗೆ ಪ್ರೆಸ್ ಮೀಟ್ ಮಾಡಲು ಆಗೋದಿಲ್ಲ ಎಂದು ಸತಾಯಿಸಿದರು. ಶನಿವಾರ, ಭಾನುವಾರ ಕರ್ಫ್ಯೂ ಅಂತ ಹೇಳಿ ನಿರಾಕರಣೆ ಮಾಡಿದರು. ನನ್ನ ಅಣ್ಣ ಯಾವತ್ತೂ ಅಂತ ಕೆಲಸಕ್ಕೆ ಹೋದವನಲ್ಲ. ಮೂರು ಸಾವಿರ ರೂ. ಮತ್ತು ಮೊಬೈಲ್ ಕದಿಯಲು ಸುರತ್ಕಲ್ ಹೋಗಬೇಕಾ. ಅಣ್ಣ ಅಲ್ಲಿಗೆ ಹೋಗಿದ್ದಾನೆ ಅನ್ನುವುದಕ್ಕೆ ಪೊಲೀಸರಲ್ಲಿ ಸಾಕ್ಷ್ಯ ಇದೆಯೇ..? ನಾವು ಪೊಲೀಸರು ಕರೆದಲ್ಲಿಗೆ ಬಂದು ಆಣೆ ಮಾಡುತ್ತೇವೆ. ಪ್ರಸಾದ್, ಡಿಸೆಂಬರ್ 8ರಂದು ಮನೆಯಲ್ಲೇ ಇದ್ದ. ಇವರು ರಾತ್ರಿ ಚೇಳಾರಿಗೆ ಹೋಗಿ ರಾಬರಿ ಮಾಡಿದ್ದಾರೆಂದು ಫಿಕ್ಸ್ ಮಾಡಿದ್ದಾರಲ್ಲಾ.. ಪೊಲೀಸರು ಜನಸಾಮಾನ್ಯರಿಗೆ ನ್ಯಾಯ ಕೊಡೋದು ಹೀಗೆನಾ ಎಂದು ಪ್ರಶ್ನೆ ಮಾಡಿದ್ದಾರೆ.

ಅಣ್ಣ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ಆದರೆ, ಅಮಾಯಕ, ನಿರಪರಾಧಿ ಒಬ್ಬನಿಗೆ ಶಿಕ್ಷೆ ಕೊಡುವುದು, ಜೈಲಿಗೆ ಹಾಕಿದರೆ ಏನು ಗತಿ. ಇದರಿಂದ ಅವರನ್ನು ಬೇಕಂತಲೇ ಅಪರಾಧ ಕೃತ್ಯಕ್ಕೆ ಇಳಿಸಿದಂತಾಗಿಲ್ಲವೇ..? ಇದರಿಂದ ನಮ್ಮ ಕುಟುಂಬದ ಮರ್ಯಾದೆ ಹೋಗಿದೆ. ಹೋದ ಮರ್ಯಾದೆಯನ್ನು ಇವರಿಗೆ ತಂದು ಕೊಡಲಾಗುವುದೇ ಎಂದು ಗಾಯತ್ರಿ ಪ್ರಶ್ನಿಸಿದ್ದಾರೆ. ಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ ಬಳಿಕ, ಅವರ ತಾಯಿ ಹಾಸಿಗೆ ಹಿಡಿದಿದ್ದಾರೆ. ಒಂದು ಸಣ್ಣ ಮಗುವನ್ನು ಹಿಡಿದು ಪತ್ನಿಯೂ ಚಿಂತೆಗೆ ಬಿದ್ದಿದ್ದಾರೆ. ಇದರಿಂದ ಅವರಿಗೇನಾದ್ರೂ ಆದರೆ ಪೊಲೀಸರು ಹೊಣೆ ವಹಿಸಿಕೊಳ್ಳುತ್ತಾರೆಯೇ ಎಂದು ಕೇಳಿದರು. ಪ್ರಸಾದ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದು ಮನೆಗೆ ಏಕೈಕ ಆಧಾರವಾಗಿದ್ದರು. ಅವರ ದುಡಿಮೆಯಿಂದಲೇ ಮನೆ ನಡೆಯುತ್ತಿತ್ತು. ಅನಿಲ್ ಬಾಲ್ಯದಿಂದಲೇ ಪರಿಚಯ ಇದ್ದುದರಿಂದ ಮೊನ್ನೆ ಕಾರಿನ ಕೆಲಸ ಇದೆಯೆಂದು ಕರೆದಿದ್ದರು. ಅದಕ್ಕೆಂದು ಹೋಗಿದ್ದಾಗ ಪೊಲೀಸರು ಕರೆದೊಯ್ದಿದ್ದಾರೆ ಎಂದು ಪ್ರಸಾದ್ ಪತ್ನಿ ನಿಶಿತಾ ಹೇಳಿದರು.

ಜಪ್ಪಿನಮೊಗರು ನಿವಾಸಿ ಚೇತನ್ ಕೊಟ್ಟಾರಿ ಜಾಗದ ವಹಿವಾಟು ಮಾಡುವ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ, ನೇರವಾಗಿ ಮನೆಗೇ ಬರುತ್ತಿದ್ದರು. ಆದರೆ ಮೊನ್ನೆ ಹೊರಗೆ ಹೋಗಿದ್ದವರನ್ನು ಪೊಲೀಸರು ಕೊಂಡೊಯ್ದಿದ್ದಾರೆ. ಫೋನ್ ಮಾಡಿದಾಗ, ಏನೋ ವಿಚಾರಣೆ ಇದೆಯಂತೆ, ಪೊಲೀಸ್ ಸ್ಟೇಶನ್ನಿಗೆ ಹೋಗಿದ್ದೇನೆ. ಸಂಜೆ ಬರುತ್ತೇನೆ ಎಂದಿದ್ದರು. ಆಬಳಿಕ ಫೋನ್ ಮಾಡಿದರೆ, ರಿಸೀವ್ ಮಾಡುತ್ತಿರಲಿಲ್ಲ. ರಾತ್ರಿ ಫೋನ್ ಮಾಡಿ, ಏನು ವಿಷಯ ಎಂದು ಗೊತ್ತಿಲ್ಲ. ಸ್ಟೇಶನಲ್ಲಿ ಕೂರಿಸಿದ್ದಾರೆ, ಬೆಳಗ್ಗೆ ಬಿಟ್ಟು ಕಳಿಸುತ್ತೀವಿ ಎನ್ನುತ್ತಿದ್ದಾರೆ ಎಂದು ಹೇಳಿದ್ದರು. ಬೆಳಗ್ಗೆ ಫೋನ್ ಮಾಡಿದರೆ, ರಿಸೀವ್ ಮಾಡುತ್ತಿರಲಿಲ್ಲ. ಮಧ್ಯಾಹ್ನ ನೋಡಿದಾಗ, ಮೊಬೈಲಿನಲ್ಲಿ ಗಂಡನನ್ನು ಅರೆಸ್ಟ್ ಮಾಡಿದ ಸುದ್ದಿ ಬಂದಿತ್ತು. ಸಂಬಂಧಿಕರೆಲ್ಲ ಫೋನ್ ಮಾಡಿ ಕೇಳುತ್ತಿದ್ದಾರೆ. ಚೇತನ್ ಯಾವತ್ತೂ ಅಂಥ ಕೆಲಸ ಮಾಡಿಲ್ಲ. ಡಿಸೆಂಬರ್ 8ರಂದು ರಾತ್ರಿ ಸುರತ್ಕಲ್ ನಲ್ಲಿ ರಾಬರಿ ಮಾಡಿದ್ದಾಗಿ ಕೇಸು ಮಾಡಿದ್ದಾರೆ. ನಾವು ಮನೆಯಲ್ಲಿ ಪತಿ- ಪತ್ನಿ, ಮಗು ಮಾತ್ರ ಇರುವುದು. ಯಾವಾಗಲೂ ಸಂಜೆಯೇ ಚೇತನ್ ಮನೆಗೆ ಬರುತ್ತಾರೆ. ಇವರು ಆ ಕೃತ್ಯ ಮಾಡಿದ್ದಾರೆ ಅನ್ನೋದಕ್ಕೆ ಪೊಲೀಸರಲ್ಲಿ ಏನು ಪ್ರೂಫ್ ಇದೆ. ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ಅಮಾಯಕರಿಗೆ ಶಿಕ್ಷೆ ಕೊಡಬಾರದು, ಅವರನ್ನು ಜೈಲಿಗೆ ಹಾಕಿದವರಿಗೆ ದೇವರು ಶಿಕ್ಷೆ ಕೊಡುತ್ತಾನೆ ಎಂದು ಬಿಕ್ಕಳಿಸಿದರು ಚೇತನ್ ಪತ್ನಿ ಭಾಗ್ಯಶ್ರೀ.

ಪೊಲೀಸ್ ಕಮಿಷನರ್ ಜನವರಿ 14ರಂದು ಸುದ್ದಿಗೋಷ್ಠಿ ಕರೆದು, ರೌಡಿ ಆಕಾಶಭವನ್ ಶರಣ್ ಜೊತೆಗೆ ನಾಲ್ವರನ್ನು ಬಂಧಿಸಿರುವ ಸುದ್ದಿ ವಿವರ ಕೊಟ್ಟಿದ್ದರು. ಡಿಸೆಂಬರ್ 8ರಂದು ರಾತ್ರಿ 11.20ಕ್ಕೆ ಸುರತ್ಕಲ್ ಬಳಿಯ ಚೇಳಾರಿನಲ್ಲಿ ವ್ಯಕ್ತಿಯೊಬ್ಬರು ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿ ಮೂರು ಸಾವಿರ ರೂ. ಮತ್ತು ಮೊಬೈಲ್ ಕಿತ್ತು ರಾಬರಿ ಮಾಡಿದ್ದರು. ಪ್ರಕರಣದಲ್ಲಿ ತನಿಖೆ ನಡೆಸಿದಾಗ, ರೌಡಿ ಆಕಾಶಭವನ್ ಶರಣ್ ಜೊತೆ ನಾಲ್ವರು ಕಾರಿನಲ್ಲಿ ಅಡ್ಡಗಟ್ಟಿ ಈ ಕೃತ್ಯ ಮಾಡಿದ್ದರೆಂದು ವಿವರಿಸಿದ್ದರು. ಘಟನೆಯಲ್ಲಿ ಅನಿಲ್ ಸಾಲ್ಯಾನ್, ಸೈನಲ್ ಡಿಸೋಜ, ಪ್ರಸಾದ್ ಪರಂಗಿಪೇಟೆ ಮತ್ತು ಚೇತನ್ ಕೊಟ್ಟಾರಿ ಬಂಧಿತರೆಂದು ತಿಳಿಸಿದ್ದರು. ಆದರೆ, ಈ ಪೈಕಿ ಪ್ರಸಾದ್ ಮತ್ತು ಚೇತನ್ ಕೊಟ್ಟಾರಿಗೆ ಕೇಸ್ ಬಗ್ಗೆ ಸಂಬಂಧ ಇಲ್ಲ. ಪೊಲೀಸರು ಫಿಕ್ಸ್ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 

ಜೈಲಿನಿಂದ ಹೊರಬಂದ ಒಂದೇ ತಿಂಗಳಲ್ಲಿ ಅಪರಾಧ ಕೃತ್ಯ ; ಕುಖ್ಯಾತ  ರೌಡಿ ಆಕಾಶಭವನ ಶರಣ್, ಸಹಚರರ ಬಂಧನ, ಮತ್ತೊಂದು ಕೊಲೆಗೆ ಸಂಚು

Bhagyashree, wife of Chetan Kottary and Nikshitha, wife of Prasad, two among the accused held on the allegation of plotting robbery and murder, have asserted that their husbands are innocent. Chetan Kottary, working as a real estate broker, has been accused in the said case along with Akashbhavan Sharan and others. They said that the police of the city crime branch took away their husbands. Later, they were given to understand that their husbands were taken into custody, having been named as accused in a case registered in Surathkal police station.