ಬಿಜೆಪಿಯವರು ಹಿಂದುತ್ವ ವಿರೋಧಿಗಳು, ಹಿಂದು ನಾಯಕರ ಬಾಯಿ ಮುಚ್ಚಿಸಲು ಸುಳ್ಳು ಕೇಸು ಹಾಕುತ್ತಿದ್ದಾರೆ ; ಹಿಂದು ಮಹಾಸಭಾ

25-09-21 06:37 pm       Mangaluru Correspondent   ಕರಾವಳಿ

ಹಿಂದು ಮಹಾಸಭಾ ಮುಖಂಡರು ಹೊರಬರುತ್ತಲೇ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

ಮಂಗಳೂರು, ಸೆ.25: ಮೈಸೂರಿನಲ್ಲಿ ದೇವಸ್ಥಾನ ಕೆಡವಿದ ನೆಪದಲ್ಲಿ ಗಾಂಧೀಜಿಯನ್ನೇ ಬಿಟ್ಟಿಲ್ಲ, ನಿಮ್ಮನ್ನು ಬಿಡುತ್ತೇವಾ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಆಕ್ರೋಶ ಹೊರಹಾಕಿದ್ದು ಆನಂತರ ಪೊಲೀಸು ಕೇಸು ಆಗಿ ಬಂಧನವೂ ಆಗಿತ್ತು. ಇದೀಗ ಹಿಂದು ಮಹಾಸಭಾ ಮುಖಂಡರು ಹೊರಬರುತ್ತಲೇ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರು ಹಿಂದು ಮಹಾಸಭಾ ವಿರುದ್ಧ ಸುಳ್ಳು ಕೇಸು ಹಾಕಿ, ನಮ್ಮ ನಾಯಕರನ್ನು ಬಾಯಿ ಮುಚ್ಚಿಸಲು ಯತ್ನಿಸುತ್ತಿದ್ದಾರೆ. ಈ ಮೂಲಕ ಬಿಜೆಪಿಯವರು ಹಿಂದುತ್ವ ವಿರೋಧಿ ನಡೆಯನ್ನು ತೋರಿಸುತ್ತಿದ್ದಾರೆ ಎಂದು ಹಿಂದು ಮಹಾಸಭಾ (ಯೂತ್) ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದ್ದಾರೆ.

ಇಂದು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜೇಶ್ ಪವಿತ್ರನ್, ಇತ್ತೀಚೆಗೆ ಮೈಸೂರಿನಲ್ಲಿ ದೇವಸ್ಥಾನ ಕೆಡವಿದ ವಿಚಾರದಲ್ಲಿ ಆಕ್ರೋಶ ವ್ಯಕ್ತಪಡಿಸಿದ ನೆಪದಲ್ಲಿ ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ವಿರುದ್ಧ ಪೋರ್ಜರಿ, ಚೀಟಿಂಗ್ ಪ್ರಕರಣ ದಾಖಲಿಸಿದ್ದರು. ಅದರ ನೆಪದಲ್ಲಿ ಬಂಧನವನ್ನೂ ಮಾಡಿದ್ದರು. ವಿಚಿತ್ರ ಅಂದ್ರೆ, ಆ ಸುದ್ದಿಗೋಷ್ಠಿಯಲ್ಲಿ ಇಲ್ಲದೇ ಇದ್ದ ಹಿಂದು ಮಹಾಸಭಾ ಸಂಘಟನೆಯ ನಾಯಕರ ವಿರುದ್ಧ ಕೇಸು ದಾಖಲಿಸಲಾಗಿತ್ತು. ಸುಳ್ಳು ಕೇಸು ಹಾಕಿ, ಹಿಂದು ನಾಯಕರನ್ನು ಜೈಲಿಗೆ ತಳ್ಳುವ ಪ್ರವೃತ್ತಿ ಬಿಜೆಪಿಯವರ ಹಿಂದುತ್ವ ವಿರೋಧಿ ನಡೆಯಾಗಿದೆ.

ಬಿಜೆಪಿ ಕೂಡ ಕಾಂಗ್ರೆಸ್ ಪಕ್ಷದ ಇನ್ನೊಂದು ಮುಖ. ಬಿಜೆಪಿಯವರು ಕೂಡ ಈಗ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ಇವರಿಗೆ ಹಿಂದುತ್ವದ ಅಗತ್ಯ ಇಲ್ಲ. ಚುನಾವಣೆಗೆ ಮಾತ್ರ ಹಿಂದುತ್ವ ಬೇಕು. ಹಿಂದುಗಳ ಹೆಸರು ಹೇಳಿ ಚುನಾವಣೆ ಎದುರಿಸಿದ್ದ ಬಿಜೆಪಿಯವರು ಅಧಿಕಾರಕ್ಕೆ ಬಂದರೂ, ಗೋಹತ್ಯೆಯನ್ನು ಸಂಪೂರ್ಣ ನಿಲ್ಲಿಸಲು ಸಾಧ್ಯವಾಗಿಲ್ಲ. ನೀವು ಗೋಹತ್ಯೆಯನ್ನು ಸಂಪೂರ್ಣ ಬ್ಯಾನ್ ಮಾಡಿದಲ್ಲಿ ಕಸಾಯಿಖಾನೆಗಳ ಅಗತ್ಯ ಏಕಿದೆ ಎಂದು ರಾಜೇಶ್ ಪವಿತ್ರನ್ ಪ್ರಶ್ನೆ ಮಾಡಿದರು.

ಹಿಂದು ನಾಯಕರ ವಿರುದ್ಧ ಕೇಸು ಹಾಕುವುದು, ಲವ್ ಜಿಹಾದ್ ರೀತಿಯ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಾಗದೇ ಇರುವುದು ಬಿಜೆಪಿ ನಾಯಕರ ಆಡಳಿತ ವೈಫಲ್ಯಕ್ಕೆ ಸಾಕ್ಷಿ. ಇವರು ಕಾಂಗ್ರೆಸಿನವರ ರೀತಿಯಲ್ಲೇ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದ್ದಾರೆ. ಇದರ ನಡುವಲ್ಲೇ ಹಿಂದು ನಾಯಕರ ಮೇಲೆ ಸುಳ್ಳು ಕೇಸು ಹಾಕುತ್ತಿದ್ದಾರೆ. ಮೈಸೂರಿನಲ್ಲಿ ದೇವಸ್ಥಾನ ಕೆಡವಿದ ಕೃತ್ಯವನ್ನು ದೇಶಾದ್ಯಂತ ಜನರು ಗಮನಿಸಿದ್ದಾರೆ. ಹಿಂದುಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ನಡೆದುಕೊಂಡ ರೀತಿ, ಹಿಂದುತ್ವ ವಿರೋಧಿ ನಡೆಯನ್ನು ನೋಡುತ್ತಿದ್ದಾರೆ. ಜನರ ಗಮನ ಬೇರೆಡೆ ಸೆಳೆಯಲು ಹಿಂದು ನಾಯಕರ ವಿರುದ್ಧ ಪೋರ್ಜರಿ, ಚೀಟಿಂಗ್ ಕೇಸು ಹಾಕಿ ಶಿಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದು ಮಹಾಸಭಾ ಅಸ್ತಿತ್ವದ ಕುರಿತ ಪ್ರಶ್ನೆಗೆ, ಹಿಂದು ಮಹಾಸಭಾ ನಕಲಿಯಾಗಿದ್ದರೆ ಮೊದಲು ಪೊಲೀಸರು ನಮಗೆ ನೋಟೀಸ್ ಕೊಡಲಿ. ತನಿಖೆ ಮಾಡಿಸಲಿ ಎಂದು ಹೇಳಿದ ರಾಜೇಶ್ ಪವಿತ್ರನ್, ಹಿಂದು ಮಹಾಸಭಾ ಕಾನೂನು ರೀತ್ಯಾ ಚುನಾವಣಾ ಆಯೋಗದಲ್ಲಿ ರಿಜಿಸ್ಟರ್ ಆಗಿದೆ. ನಕಲಿ ವ್ಯಕ್ತಿಯೊಬ್ಬ ಹಿಂದು ಮಹಾಸಭಾ ನಾಯಕರ ವಿರುದ್ಧ ದೂರು ಕೊಟ್ಟ ಕೂಡಲೇ ಪೊಲೀಸರು ಕೇಸು ರಿಜಿಸ್ಟರ್ ಮಾಡುತ್ತಾರೆ. ನಾವು ಆತನನ್ನು 2019ರಿಂದಲೇ ಹಿಂದು ಮಹಾಸಭಾದಿಂದ ತೆಗೆದು ಹಾಕಿದ್ದೇವೆ. ಆತ ಆನಂತರ, ತಾನೇ ಹಿಂದು ಮಹಾಸಭಾದ ಅಧ್ಯಕ್ಷ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾನೆ. ಇದರ ಬಗ್ಗೆ ನಾವು ಪೊಲೀಸರಿಗೆ ದೂರನ್ನೂ ಕೊಟ್ಟಿದ್ದೇವೆ. ನಮ್ಮ ಮೇಲಿನ ದ್ವೇಷದಿಂದ ಲೋಹಿತ್ ಸುವರ್ಣ ಬಿಜೆಪಿ ನಾಯಕರ ಜೊತೆಗೆ ಕೈಜೋಡಿಸಿ ದೂರು ಕೊಟ್ಟಿದ್ದಾನೆ ಎಂದು ಹೇಳಿದರು. 

Amid the tussle between the BJP-ruled Karnataka government and Hindutve groups over the demolition of a temple in Mysuru and the subsequent arrest of Hindu Maha Sabha leaders for threatening the chief minister, the Karnataka state (youth) president of Akhil Bharathiya Hindu Maha Sabha Rajesh Pavitran on Saturday September 25 alleged that the ruling BJP has been making all types of efforts to 'finish' Hindu Maha Sabha by booking 'false' cases against Hindu leaders.