ವಿದ್ಯುತ್ ಸಮಸ್ಯೆ ವಿಚಾರದಲ್ಲಿ ವಾಗ್ವಾದ ; ಮಾಜಿ ಇಂಧನ ಸಚಿವ ಡಿಕೆಶಿಗೆ ಕೋರ್ಟ್ ವಾರಂಟ್

14-09-21 07:25 pm       Headline Karnataka News Network   ಕರಾವಳಿ

ವಿದ್ಯುತ್‌ ಸಮಸ್ಯೆ ಬಗ್ಗೆ ಖಾಸಗಿ ವ್ಯಕ್ತಿಯೊಬ್ಬರು ಫೋನ್ ಮಾಡಿ ತರಾಟೆಗೆತ್ತಿಕೊಂಡು ಕೇಸು ಹಾಕಿಸಿಕೊಂಡ ಪ್ರಕರಣದಲ್ಲಿ ಇದೀಗ ಮಾಜಿ ಇಂಧನ ಖಾತೆ ಸಚಿವ ಡಿ.ಕೆ. ಶಿವಕುಮಾರ್‌ ಗೆ ಸುಳ್ಯ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ. 

ಸುಳ್ಯ, ಸೆ.14 : ವಿದ್ಯುತ್‌ ಸಮಸ್ಯೆ ಬಗ್ಗೆ ಖಾಸಗಿ ವ್ಯಕ್ತಿಯೊಬ್ಬರು ಫೋನ್ ಮಾಡಿ ತರಾಟೆಗೆತ್ತಿಕೊಂಡು ಕೇಸು ಹಾಕಿಸಿಕೊಂಡ ಪ್ರಕರಣದಲ್ಲಿ ಇದೀಗ ಮಾಜಿ ಇಂಧನ ಖಾತೆ ಸಚಿವ ಡಿ.ಕೆ. ಶಿವಕುಮಾರ್‌ ಗೆ ಸುಳ್ಯ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ. 

ಪ್ರಾಸಿಕ್ಯುಶನ್ ಪರವಾಗಿ ಸಾಕ್ಷ್ಯ ಹೇಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಜರಾಗದ ಹಿನ್ನೆಲೆಯಲ್ಲಿ ಎರಡು ಬಾರಿ ಸಮನ್ಸ್ ಜಾರಿ ಮಾಡಿ, ಇದೀಗ ವಾರಂಟ್‌ ಜಾರಿ ಮಾಡಿದೆ. ಸೆಪ್ಟೆಂಬರ್‌ 29ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. 

ಸ್ಥಳೀಯವಾಗಿ ನಿರಂತರ ವಿದ್ಯುತ್‌ ಸಮಸ್ಯೆ ಆಗುತ್ತಿದ್ದ ಬಗ್ಗೆ ಬೆಳ್ಳಾರೆಯ ವರ್ತಕರ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ ರೈ 2016ರ ಫೆಬ್ರವರಿ 28ರಂದು ಅಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ತಿಳಿಸಿದ್ದರು. ಈ ವೇಳೆ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.
ಇದೇ ನೆಪದಲ್ಲಿ ಸಚಿವ ಡಿಕೆ ಶಿವಕುಮಾರ್‌ ಅಂದಿನ ಸುಳ್ಯ ಮೆಸ್ಕಾಂ ಪ್ರಭಾರ ಎಇಇ ಹರೀಶ್‌ ನಾೖಕ್‌ ಮೂಲಕ ಸಾಯಿ ಗಿರಿಧರ ರೈ ವಿರುದ್ಧ ಪೊಲೀಸರಿಗೆ ದೂರು ಕೊಡಿಸಿದ್ದರು. ಕೇಸು ದಾಖಲಿಸಿಕೊಂಡಿದ್ದ ಪೊಲೀಸರು ರಾತ್ರಿಯೇ ಬೆಳ್ಳಾರೆಗೆ ಹೋಗಿ ಗಿರಿಧರ ರೈ ಅವರನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಚಾರ್ಜ್ ಶೀಟ್ ಆಗಿ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರನಾಗಿದ್ದ ಡಿಕೆಶಿ ಕೋರ್ಟ್ ವಿಚಾರಣೆಗೆ ಹಾಜರಾಗಿರಲಿಲ್ಲ.

Warrant issued against DK Shivakumar for Abusing customer for lodging complaint over current issue in Sullia. The court has sent a warrant against DK Shivakumar who was then a power minister. The plaintiff is said to be Giridhar Rai from Sullia.