ಡಿಜಿಟಲ್ ವೇದಿಕೆಯಲ್ಲಿ ಹಿಂದು ಸಮಾವೇಶ ; ಜಗತ್ತಿನಾದ್ಯಂತ ಇರುವ ಆಸಕ್ತರಿಗೆ ಅವಕಾಶ

30-08-21 04:35 pm       Mangaluru Correspondent   ಕರಾವಳಿ

ಮೊಟ್ಟಮೊದಲ ಬಾರಿಗೆ ಆಗಸ್ಟ್ 30ರಂದು ಹೊಸ ರೀತಿಯಲ್ಲಿ ಹಿಂದು ಸಮಾವೇಶ ಆಯೋಜನೆಗೊಂಡಿದ್ದು, ಪ್ರಖರ ಭಾಷಣಕಾರ ಎಂದು ಹೆಸರು ಪಡೆದಿರುವ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಮಂಗಳೂರು, ಆಗಸ್ಟ್ 30: ಕೊರೊನಾ ಕಾರಣಕ್ಕೆ ಹೆಚ್ಚು ಜನರು ಒಂದೇ ಕಡೆ ಸೇರುವುದಕ್ಕೆ ಅವಕಾಶವಿಲ್ಲ. ಆದರೆ, ಒಂದು ಜಾಗದಲ್ಲಿ ಸೇರುವ ಬದಲು ಏಕಕಾಲದಲ್ಲಿ ಜಗತ್ತಿನಾದ್ಯಂತ ಇರುವ ಸಾವಿರಾರು ಆಸಕ್ತರನ್ನು ಒಂದೇ ಕಡೆ ಸೇರಿಸಿ ಸಂವಾದಿಸಬಲ್ಲ ಡಿಜಿಟಲ್ ವೇದಿಕೆಗಳು ಅಸ್ತಿತ್ವಕ್ಕೆ ಬಂದಿವೆ. ಅಂಥವುಗಳಲ್ಲಿ ವಾಟ್ಸಪ್, ಫೇಸ್ಬುಕ್ ಬಳಿಕ ಜನರನ್ನು ಹೆಚ್ಚು ಆಕರ್ಷಿಸಿದ್ದು ಕ್ಲಬ್ ಹೌಸ್.

ಹೊಸ ವಿಷ್ಯ ಏನಪ್ಪಾಂದ್ರೆ, ಕರಾವಳಿಯಲ್ಲಿ ಆಗಿಂದಾಗ್ಗೆ ಆಗುತ್ತಿದ್ದ ಹಿಂದು ಸಮಾವೇಶಗಳೂ ಈಗ ಈ ರೀತಿಯ ಡಿಜಿಟಲ್ ಪರದೆಗಳಲ್ಲಿ ಆರಂಭಗೊಂಡಿದೆ. ಮೊಟ್ಟಮೊದಲ ಬಾರಿಗೆ ಆಗಸ್ಟ್ 30ರಂದು ಹೊಸ ರೀತಿಯಲ್ಲಿ ಹಿಂದು ಸಮಾವೇಶ ಆಯೋಜನೆಗೊಂಡಿದ್ದು, ಪ್ರಖರ ಭಾಷಣಕಾರ ಎಂದು ಹೆಸರು ಪಡೆದಿರುವ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಇಂದು ಸಂಜೆ 7.30ಕ್ಕೆ ಕ್ಲಬ್ ಹೌಸ್ ನ ಹಿಂದುತ್ವ ಎನ್ನುವ ಪೇಜ್ ನಲ್ಲಿ ಹಿಂದು ಸಮಾವೇಶ ನಡೆಯಲಿದ್ದು, ಐದು ಸಾವಿರಕ್ಕೂ ಹೆಚ್ಚು ಜನ ಒಂದೆಡೆ ಸೇರಲಿದ್ದಾರೆ. ಮೊದಲ ಬಾರಿಗೆ ಈ ರೀತಿಯ ವೇದಿಕೆಯಲ್ಲಿ ಹಿಂದು ಸಮಾವೇಶ ನಡೆಯುತ್ತಿದ್ದು, ಕಲ್ಲಡ್ಕ ಪ್ರಭಾಕರ ಭಟ್ಟರ ಜೊತೆಗೆ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತಿ ಇರಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಲೇಖಕ ರೋಹಿತ್ ಚಕ್ರತೀರ್ಥ ನಡೆಸಲಿದ್ದಾರೆ. ಖ್ಯಾತ ಗಾಯಕಿ ರಮ್ಯ ವಸಿಷ್ಠ ಪ್ರಾರ್ಥನೆ ಮತ್ತು ವಂದೇ ಮಾತರಂ ಹಾಡಲಿದ್ದಾರೆ.

ಅಂದಹಾಗೆ, ಹಿಂದುತ್ವ ಪರ ಘೋಷಣೆಗಳು, ಯುವಜನರ ಹಾರಾಟ ಇಲ್ಲದೆ ತಣ್ಣಗಿನ ರೂಪದಲ್ಲಿ ಕೇಳುಗರಲ್ಲಿ ಹಿಂದುತ್ವದ ಪರ ಅಲೆ ಎಬ್ಬಿಸುವ ಸಮಾವೇಶ ನಡೆಯುತ್ತಿರೋದು ಇದೇ ಮೊದಲು. 

Mangalore Hindu Samavesha to be organised in Club house app for the first time where members around the world will be able to watch live.