ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಅನ್ಯಧರ್ಮೀಯರು ವಾಹನ ಪಾರ್ಕಿಂಗ್ ಮಾಡುವಂತಿಲ್ಲ !

30-08-21 12:24 pm       Mangaluru Correspondent   ಕರಾವಳಿ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ದೇವಸ್ಥಾನಕ್ಕೆ ಬರುವ ಹಿಂದು ಭಕ್ತರಿಗೆ ಮಾತ್ರ ಪಾರ್ಕಿಂಗ್ ಅವಕಾಶ ಎಂದು ಬೋರ್ಡ್ ಹಾಕಲಾಗಿದ್ದು ವಿವಾದಕ್ಕೆ ಕಾರಣವಾಗಿದೆ. 

ಪುತ್ತೂರು, ಆಗಸ್ಟ್ 30: ಮುಜರಾಯಿ ಇಲಾಖೆಗೆ ಒಳಪಟ್ಟ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ದೇವಸ್ಥಾನಕ್ಕೆ ಬರುವ ಹಿಂದು ಭಕ್ತರಿಗೆ ಮಾತ್ರ ಪಾರ್ಕಿಂಗ್ ಅವಕಾಶ ಎಂದು ಬೋರ್ಡ್ ಹಾಕಲಾಗಿದ್ದು ವಿವಾದಕ್ಕೆ ಕಾರಣವಾಗಿದೆ. 

ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ಮೈದಾನದಲ್ಲಿ ಫ್ಲೆಕ್ಸ್ ಹಾಕಿದ್ದು ದೇವಸ್ಥಾನದ ಮುಂದಿನ ದೇವರಮಾರು ಗದ್ದೆಯಲ್ಲಿ ಮುಂದಿನ ದಿನಗಳಲ್ಲಿ ಹಿಂದು ಭಕ್ತರಿಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. 

ಹಿಂದು ಭಕ್ತಾದಿಗಳ ಹೊರತಾಗಿ ಇತರರು ವಾಹನ ಪಾರ್ಕಿಂಗ್ ಮಾಡಿ ಹೋಗುವಂತಿಲ್ಲ. ಇದನ್ನು ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ. ಒಂದು ವೇಳೆ ಪಾರ್ಕಿಂಗ್ ಮಾಡಿ ಹೋದರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಬರೆಯಲಾಗಿದೆ. ಇದು ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರವೋ, ಕೆಲವು ಸದಸ್ಯರು ಸೇರಿ ಬೋರ್ಡ್ ಹಾಕಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.‌

ದೇವಸ್ಥಾನದ ಮುಂದಿನ ವಿಶಾಲ ಮೈದಾನದಲ್ಲಿ ಇತರ ಧರ್ಮೀಯರು ಕೂಡ ವಾಹನ ಪಾರ್ಕ್ ಮಾಡಿ ಹೋಗುತ್ತಿದ್ದು ಈ ವಿಚಾರ ಕೆಲವೊಮ್ಮೆ ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಫ್ಲೆಕ್ಸ್ ಮೂಲಕ ಎಚ್ಚರಿಕೆ ನೀಡಲಾಗಿದ್ದು ಈ ಬಗ್ಗೆ ಪರ ವಿರೋಧ ಚರ್ಚೆಯೂ ನಡೆಯುತ್ತಿದೆ.

Puttur Mahalingeshwara Temple parking board sparks controversy after it states the parking is only meant for Hindus and not for other religion people.