ಬಾರ್ಕೂರಿನಲ್ಲಿ ಅಪರೂಪದ ಸಿಡಿತಲೆ ವೀರಗಲ್ಲು ಪತ್ತೆ ; ಕಾಳಿಕಾ ದೇವಿಗೆ ಆತ್ಮಬಲಿ ಕೊಟ್ಟ ಸಂಕೇತ, ಈ ವೀರಗಲ್ಲು !

09-09-26 03:29 pm       HK News Staffer   ಕರಾವಳಿ

ಅಳುಪ ಮತ್ತು ವಿಜಯನಗರ ಅರಸರ ಕಾಲದ ತುಳುನಾಡಿನ ಚಾರಿತ್ರಿಕ ರಾಜಧಾನಿ ಬಾರಕೂರಿನಲ್ಲಿ ಅತ್ಯಂತ ಅಪರೂಪದ ಸಿಡಿತಲೆ ವೀರಗಲ್ಲು ಪತ್ತೆಯಾಗಿದೆ ಎಂದು ಪುರಾತತ್ತ್ವ ವಿದ್ವಾಂಸ, ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿ ತಿಳಿಸಿದ್ದಾರೆ.

ಉಡುಪಿ, ಸೆ.9: ಅಳುಪ ಮತ್ತು ವಿಜಯನಗರ ಅರಸರ ಕಾಲದ ತುಳುನಾಡಿನ ಚಾರಿತ್ರಿಕ ರಾಜಧಾನಿ ಬಾರಕೂರಿನಲ್ಲಿ ಅತ್ಯಂತ ಅಪರೂಪದ ಸಿಡಿತಲೆ ವೀರಗಲ್ಲು ಪತ್ತೆಯಾಗಿದೆ ಎಂದು ಪುರಾತತ್ತ್ವ ವಿದ್ವಾಂಸ, ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿ ತಿಳಿಸಿದ್ದಾರೆ.

ಬಾರಕೂರಿನ ಐತಿಹಾಸಿಕ ಪಂಚಲಿಂಗೇಶ್ವರ ದೇವಾಲಯದ ಜೀರ್ಣೋದ್ದಾರ ಕಾರ್ಯ ಪ್ರಗತಿಯಲ್ಲಿದ್ದು, ದೇವಾಲಯದಲ್ಲಿರುವ ಶಾಸನಗಳ ಸಮೀಕ್ಷೆಯನ್ನು ಗುಳ್ಳಾಡಿಯ ರಾಣಿ ಚಿಕ್ಕಾಯಿ ತಾಯಿ ಟ್ರಸ್ಟ್ ಮತ್ತು ಉಡುಪಿಯ ಆದಿಮ ಕಲಾ ಟ್ರಸ್ಟ್ ವತಿಯಿಂದ ಜಂಟಿಯಾಗಿ ನಡೆಸಲಾಗುತ್ತಿದೆ. ಆ ಸಂದರ್ಭದಲ್ಲಿ ದೇವಾಲಯದ ಹೊರ ಆವರಣದಲ್ಲಿ ಈ ವೀರಗಲ್ಲು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಆತ್ಮಾಹುತಿ ಅಥವಾ ಆತ್ಮಬಲಿ ವೀರಗಲ್ಲುಗಳು ದಕ್ಷಿಣ ಭಾರತದಾದ್ಯಂತ ನಮಗೆ ಕಂಡುಬರುತ್ತವೆ. ಸುಮಾರು 9-10ನೇ ಶತಮಾನದಿಂದ 14-15ನೇ ಶತಮಾನದ ವರೆಗೆ ಇಂತಹ ಬಲಿದಾನ ನಡೆದಿರುವುದು ಚಾರಿತ್ರಿಕವಾಗಿ ದಾಖಲಾಗಿವೆ. ಕೊಡಗು ಜಿಲ್ಲೆಯಲ್ಲಿ ಸುಮಾರು 10ನೇ ಶತಮಾನದ ಗಂಗರ ಕಾಲದ 3 ಆತ್ಮಬಲಿ ವೀರಗಲ್ಲುಗಳನ್ನು ಪತ್ತೆಹಚ್ಚಿದ್ದೇನೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಅಧ್ಯಯನಕ್ಕೆ ಒಳಪಟ್ಟಿರುವ ಬಾರಕೂರಿನ ವೀರಗಲ್ಲು, ಆತ್ಮಬಲಿ ವೀರಗಲ್ಲು ಪ್ರಕಾರದ ಅತಿ ವಿಶಿಷ್ಟವಾದ ಸಿಡಿತಲೆ ವೀರಗಲ್ಲಾಗಿದೆ. ಪಂಚಲಿಂಗೇಶ್ವರ ದೇವಸ್ಥಾನದ ಹೊರ ಆವರಣದಲ್ಲಿ ಕಂಡುಬಂದಿರುವ ಆಯತಾಕಾರದ ವೀರಗಲ್ಲಿನ ಕೆಳಗಿನ 2 ಪಟ್ಟಿಕೆಗಳು ದೊಡ್ಡದಾಗಿವೆ. ಮೇಲ್ಬಾಗದ ಪಟ್ಟಿಕೆ ಸ್ವಲ್ಪ ಕಿರಿದಾಗಿದೆ ಮತ್ತು ಕಲ್ಲಿನ ಮೇಲ್ಬಾಗವನ್ನು ಅರೆ ಕೋನಾಕೃತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. 

ಕೆಳಗಿನ ಪಟ್ಟಿಕೆಯಲ್ಲಿ ವೀರನೊಬ್ಬ ಬಲಿದಾನಕ್ಕೆ ಸಿದ್ದನಾಗಿ ಧ್ಯಾನಾಸಕ್ತ ಭಂಗಿಯಲ್ಲಿ ಕುಳಿತಿದ್ದಾನೆ. ಎಡಭಾಗದಲ್ಲಿ ಕಟುಕ ಮತ್ತು ಬಲಭಾಗದಲ್ಲಿ ಬಿದಿರಿನ ಕೆಳಭಾಗವನ್ನು ಹಿಡಿದು ನಿಂತ ವ್ಯಕ್ತಿಯ ಚಿತ್ರಣವಿದೆ. ಕಟುಕ ಒಂದೇ ಏಟಿಗೆ ತಲೆಯನ್ನು ಕಡಿದಿದ್ದಾನೆ, ಬಿದಿರಿನ ತುದಿಗೆ ಕಟ್ಟಲಾಗಿದ್ದ ಆತನ ತಲೆ ಸಿಡಿದು ಬಾನಲ್ಲಿ ನೇತಾಡುತ್ತಿದೆ. ಎರಡನೇ ಪಟ್ಟಿಕೆಯಲ್ಲಿ ಅಪ್ಸರೆಯರು ಮಡಿದ ವೀರನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವಂತೆ ಚಿತ್ರಿಸಲಾಗಿದೆ.

ಮೇಲಿನ ಪಟ್ಟಿಕೆಯಲ್ಲಿ ಶಿವಲಿಂಗ, ಲಿಂಗದ ಎಡಭಾಗದಲ್ಲಿ ವೀರ, ಬಲಭಾಗದಲ್ಲಿ ಶಿವನನ್ನು ಆರಾಧಿಸುತ್ತಿರುವ ಅರ್ಚನೆಯ ಶಿಲ್ಪವಿದೆ. ಮೇಲ್ಬಾಗದಲ್ಲಿ ಸೂರ್ಯ-ಚಂದ್ರರ ಶಿಲ್ಪಗಳಿವೆ. ಈ ವೀರಗಲ್ಲಿನ ಶಿಲ್ಪ ಶೈಲಿಯ ಆಧಾರದ ಮೇಲೆ ಸುಮಾರು 14ನೇ ಶತಮಾನದ ಸಿಡಿತಲೆ ವೀರಗಲ್ಲೆಂದು ನಿರ್ಧರಿಸಬಹುದಾಗಿದೆ ಎಂದು ಮುರುಗೇಶಿ ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಣಿ ಚಿಕ್ಕಾಯಿ ತಾಯಿ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಡಾ. ರಘುರಾಮ್ ಶೆಟ್ಟಿ ಗುಳ್ಳಾಡಿ ಅವರು ಈ ಸಂಶೋಧನೆಗೆ ಅಗತ್ಯ ಆರ್ಥಿಕ ಸೌಲಭ್ಯ ಒದಗಿಸಿದ್ದಾರೆ. ದೇವಾಲಯದ ಆಡಳಿತಾಧಿಕಾರಿ ನಾಗಶಯನ, ಮಾಜಿ ಮೊಕೇಸರ ಮಂಜುನಾಥ್, ಶಿರ್ವದ ಎಂ.ಎಸ್.ಆರ್.ಎಸ್. ಕಾಲೇಜಿನ ಪುರಾತತ್ತ್ವ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಸಿಂಚಿತ್ ಮತ್ತು ಶೋಧನ್ ಈ ಅಧ್ಯಯನಕ್ಕೆ ಸಹಕಾರ ನೀಡಿದ್ದಾರೆ ಎಂದು ಪ್ರೊ.ಮುರುಗೇಶಿ ಹೇಳಿಕೆಯಲ್ಲಿ ತಿಳಿಸಿದಾರೆ.

ಸಿಡಿತಲೆ ವೀರಗಲ್ಲು ಎಂದರೆ....

ಸ್ವಯಂ ಆತ್ಮಬಲಿಗೆ ಸಿದ್ಧವಾದ ವ್ಯಕ್ತಿಯು, ಕಾಳಿಕಾದೇವಿ ಅಥವಾ ಕಾಲಭೈರವ ದೇವಾಲಯದ ಎದುರು ಎತ್ತರವಾದ ಮಣ್ಣಿನ ವೇದಿಕೆಯ ಮೇಲೆ ಪದ್ಮಾಸನದಲ್ಲಿ ಧ್ಯಾನಸ್ತನಾಗಿ ಕುಳಿತುಕೊಳ್ಳುತ್ತಾನೆ. ದೇವಾಲಯದ ಅರ್ಚಕರು ಬಲಿಪೂಜೆಯನ್ನು ನಡೆಸಿದ ನಂತರ, ಕಟುಕನೊಬ್ಬ ಹರಿತವಾದ ಕತ್ತಿಯಿಂದ ಒಂದೇ ಏಟಿಗೆ ತಲೆ ಕತ್ತರಿಸುತ್ತಾನೆ. ಇದು ಆತ್ಮಬಲಿ.

ಆದರೆ, ಸಿಡಿತಲೆ ಬಲಿದಾನದಲ್ಲಿ ಆತ್ಮಬಲಿಗೆ ಸಿದ್ಧವಾಗಿ ಕುಳಿತ ವ್ಯಕ್ತಿಯ ತಲೆ ಜುಟ್ಟನ್ನು ಬಿದಿರಿನ ತುದಿಗೆ ಕಟ್ಟಲಾಗುತ್ತದೆ ಮತ್ತು ಆ ಬಿದಿರನ್ನು ಭೂಮಿಯಲ್ಲಿ ಗಟ್ಟಿಯಾಗಿ ಹೂಳಲಾಗಿರುತ್ತದೆ. ಕಟುಕ ತಲೆಯನ್ನು ಒಂದೇ ಏಟಿಗೆ ಕತ್ತರಿಸುತ್ತಿದ್ದಂತೆ, ತಲೆ ಆಗಸಕ್ಕೆ ಸಿಡಿದು, ಆಗಸದಲ್ಲಿ ತೇಲಾಡುತ್ತದೆ. ಇಂತಹ ಆತ್ಮಬಲಿಯನ್ನು ಸಿಡಿತಲೆ ವೀರಗಲ್ಲು ಎಂದು ಕರೆಯಲಾಗುತ್ತದೆ ಎಂದು ಮುರುಗೇಶಿ ತಿಳಿಸಿದ್ದಾರೆ.