ಮಂಗಳೂರಿನಲ್ಲಿ ಸಂಪುಟ ಸಭೆ ; ಪುತ್ತೂರಿನಲ್ಲಿ ಆಯುರ್ವೇದ ಆಸ್ಪತ್ರೆಗೆ ಮಂಜೂರಾತಿ ಸಿಗುತ್ತಾ? ಆಸ್ಪತ್ರೆಯಾದ್ರೆ ಕಾಲೇಜಿಗೆ ಕೇಂದ್ರದಿಂದ ಅನುದಾನ ! ಐದು ಎಕರೆ ಜಮೀನು ರೆಡಿ

09-09-26 02:03 pm       HK News Staffer   ಕರಾವಳಿ

ಬೆಂಗಳೂರು ಹೊರತುಪಡಿಸಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಏರ್ಪಡಿಸಿದ್ದು ಕರಾವಳಿ ಜಿಲ್ಲೆಗಳ ಅನೇಕ ಬೇಡಿಕೆಗಳಿಗೆ ವೇದಿಕೆ ಸಿಗುವ ನಿರೀಕ್ಷೆಯಿದೆ. ಕರಾವಳಿಗರ ಹಲವು ಬೇಡಿಕೆಗಳ ಪೈಕಿ ಪುತ್ತೂರಿನಲ್ಲಿ ಆಯುರ್ವೇದ ಕಾಲೇಜು ಆಗಬೇಕೆಂಬ ಕನಸು ಕೂಡ ಗರಿಗೆದರಿದೆ.

ಪುತ್ತೂರು, ಸೆ.9 : ಬೆಂಗಳೂರು ಹೊರತುಪಡಿಸಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಏರ್ಪಡಿಸಿದ್ದು ಕರಾವಳಿ ಜಿಲ್ಲೆಗಳ ಅನೇಕ ಬೇಡಿಕೆಗಳಿಗೆ ವೇದಿಕೆ ಸಿಗುವ ನಿರೀಕ್ಷೆಯಿದೆ. ಕರಾವಳಿಗರ ಹಲವು ಬೇಡಿಕೆಗಳ ಪೈಕಿ ಪುತ್ತೂರಿನಲ್ಲಿ ಆಯುರ್ವೇದ ಕಾಲೇಜು ಆಗಬೇಕೆಂಬ ಕನಸು ಕೂಡ ಗರಿಗೆದರಿದೆ. 

ಸರಕಾರ ಆರೋಗ್ಯ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಪುತ್ತೂರಿನಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು 100 ಹಾಸಿಗೆಗಳ ಆಯುಷ್ ಆಸ್ಪತ್ರೆಯನ್ನು ನಿರ್ಮಿಸಬೇಕೆಂಬ ಬಹುಕಾಲದ ಬೇಡಿಕೆ ಅನುಷ್ಠಾನಗೊಳ್ಳಲು ಕಾಲ ಸನ್ನಿಹಿತವಾಗಿದೆ. ರಾಜ್ಯದ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ದ.ಕ. ಜಿಲ್ಲೆಯವರೇ ಆಗಿರುವುದರಿಂದ ಪುತ್ತೂರಿನಲ್ಲಿ ಆಯುಷ್ ಆಸ್ಪತ್ರೆಯ ಕನಸು ನನಸಾಗುವ ನಿರೀಕ್ಷೆಯಿದೆ. ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ಆಯುಷ್ ಆಸ್ಪತ್ರೆಗೆ ಮಂಜೂರಾತಿ ದೊರಕಿದರೆ ಆಯುರ್ವೇದ ವೈದ್ಯಕೀಯ ಕಾಲೇಜು ಕನಸು ನನಸಾಗಲಿದೆ.

ಇಲಾಖೆ ಹೆಸರಲ್ಲಿ ಐದು ಎಕರೆ ಜಮೀನು 

ಪುತ್ತೂರು ತಾಲೂಕಿನ ಬನ್ನೂರು ಗ್ರಾಮ ಕುಂಟ್ಯಾನ ಎಂಬಲ್ಲಿ ಸರ್ವೆ ನಂ.84ರಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ 5 ಎಕರೆ ಜಮೀನನ್ನು ಆಯುಷ್ ಆಸ್ಪತ್ರೆ ನಿರ್ಮಾಣ ಮಾಡುವ ಉದ್ದೇಶ ಇದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಪುತ್ತೂರು ತಹಶೀಲ್ದಾರರು ಬನ್ನೂರು ಗ್ರಾಮದಲ್ಲಿ 5 ಎಕರೆ ಜಮೀನನ್ನು ದ.ಕ. ಜಿಲ್ಲಾ ಆಯುಷ್ ಇಲಾಖೆಯ ಹೆಸರಿಗೆ ಕಾಯ್ದಿರಿಸಿದ್ದಾರೆ. ಇದರಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರ ಪ್ರಯತ್ನ ಸಾಕಷ್ಟಿದೆ. 2ನೇ ಹಂತದಲ್ಲಿ ಆಯುಷ್ ಆಸ್ಪತ್ರೆಗೆ ರಾಜ್ಯ ಸಚಿವ ಸಂಪುಟದ ಮಂಜೂರಾತಿ ಅತ್ಯಗತ್ಯ. ಆಯುರ್ವೇದ ಆಸ್ಪತ್ರೆ ನಿರ್ಮಾಣವಾದರೆ ಕೇಂದ್ರ ಸರಕಾರ ಆಯುರ್ವೇದ ಕಾಲೇಜು ನಿರ್ಮಾಣಕ್ಕೆ ಪೂರ್ಣ ಸಹಕಾರ ನೀಡುವ ಸಾಧ್ಯತೆ ಇದೆ. 

ಕಾಲೇಜು ಆಗಲು ಆಸ್ಪತ್ರೆ ಅಗತ್ಯ

ಪುತ್ತೂರಿನಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣದ ಉದ್ದೇಶಕ್ಕೆ 5 ಎಕ್ರೆ ಜಮೀನು ಮಂಜೂರಾಗಿದೆ ಎಂದಾಕ್ಷಣ ಕಾಲೇಜು, ಆಸ್ಪತ್ರೆ ಆಗಿಬಿಡುತ್ತೆ ಎಂದರ್ಥವಲ್ಲ. ಇದೊಂದು ಪ್ರಥಮ ಹೆಜ್ಜೆಯಷ್ಟೇ. ಆಯುರ್ವೇದ ಕಾಲೇಜು ಆಗಬೇಕಾದರೆ ಅಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇರಲೇಬೇಕು. ದ.ಕ. ಜಿಲ್ಲೆಯ ಕೇಂದ್ರ ಸ್ಥಾನವಾದ ಮಂಗಳೂರಿನಲ್ಲಿ (ವೆನ್ಲಾಕ್) ಇರುವುದೇ 50 ಹಾಸಿಗೆಗಳ ಆಯುಷ್ ಆಸ್ಪತ್ರೆ. ಆದರೆ, ಮೆಡಿಕಲ್ ಕಾಲೇಜು ಆಗಬೇಕಂದ್ರೆ 100 ಹಾಸಿಗೆಗಳ ಆಸ್ಪತ್ರೆ ಇರಲೇಬೇಕೆಂಬುದು ಮಾನದಂಡ. ಹೀಗಾಗಿ ಆಸ್ಪತ್ರೆ ಮಂಜೂರಾತಿ ಆದರೆ ಮೆಡಿಕಲ್ ಕಾಲೇಜಿಗೆ ಪೂರಕವಾಗುತ್ತದೆ ಎಂದಷ್ಟೇ.  

ರೂ.70 ಕೋಟಿ ಅನುದಾನ ಸಿಗುತ್ತೆ ! 

ಪುತ್ತೂರಿನಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಆರಂಭಗೊಂಡರೆ ಆಯುರ್ವೇದ ಕಾಲೇಜ್ ಆರಂಭಿಸಲು ಹಾದಿ ಸುಗಮವಾದಂತಾಗುತ್ತದೆ. ಆಯುರ್ವೇದ ಶಿಕ್ಷಣ ಮತ್ತು ಚಿಕಿತ್ಸೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಕೇಂದ್ರ ಸರಕಾರ 2021ರಲ್ಲಿ ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್(ಎನ್‍ಸಿಐಎಸ್‍ಎಂ) ಎಂಬ ಸಂಸ್ಥೆಯನ್ನು ಅನುಷ್ಠಾನಕ್ಕೆ ತಂದಿತ್ತು. ಆಸ್ಪತ್ರೆ ಆರಂಭಗೊಂಡ 2 ವರ್ಷಗಳ ಬಳಿಕ ಯೋಜನಾ ವರದಿಯನ್ನು ಈ ಸಂಸ್ಥೆಗೆ ಸಲ್ಲಿಸಬೇಕು. ಅಲ್ಲಿ `ಓಕೆ' ಆದರೆ ಪುತ್ತೂರಿನಲ್ಲಿ ಆಯುರ್ವೇದ ಕಾಲೇಜು ಆರಂಭಿಸಲು ಹಸಿರು ನಿಶಾನೆ ಸಿಕ್ಕಂತಾಗುವುದಲ್ಲದೆ ಕೇಂದ್ರ ಸರಕಾರ ಕಾಲೇಜು ಆರಂಭಿಸಲು ರೂ.70 ಕೋಟಿ ಅನುದಾನವನ್ನೂ ನೀಡುತ್ತದೆ. 

2022ರಿಂದಲೇ ಪುತ್ತೂರಿನಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜ್ ಮತ್ತು ಆಯುಷ್ ಆಸ್ಪತ್ರೆ ಪ್ರಾರಂಭಿಸಬೇಕೆಂಬ ಕೂಗು ಕೇಳಿ ಬರಲಾರಂಭಿಸಿತ್ತು. ಇದಕ್ಕೆ ಪೂರಕವೆಂಬಂತೆ ಡಾ. ನವೀನ್ ಕುಳಮರ್ವ ಅವರು ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದರಲ್ಲದೆ ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸೇರಿದಂತೆ ಸುಮಾರು 30 ಸಂಘ ಸಂಸ್ಥೆಗಳು ಸರಕಾರಕ್ಕೆ ಪತ್ರವನ್ನು ಬರೆದು ಒತ್ತಾಯಿಸಿದ್ದರು. ಸದ್ಯಕ್ಕೆ ರಾಜ್ಯದ ಬೆಂಗಳೂರು, ಮೈಸೂರು, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಲ್ಲಷ್ಟೇ ಸರಕಾರಿ ಆಯುರ್ವೇದ ಕಾಲೇಜುಗಳಿವೆ. ಪ್ರದೇಶವಾರು ನೆಲೆಯಲ್ಲಿ ಕರಾವಳಿ ಭಾಗದಲ್ಲೂ ಸರಕಾರಿ ಆಯುರ್ವೇದ ಕಾಲೇಜು ಆಗಬೇಕು ಎನ್ನುವ ಬೇಡಿಕೆ ಹಿಂದಿನಿಂದಲೂ ಇದೆ. 

ಈ ಬಗ್ಗೆ ದ.ಕ. ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುರಲೀಧರ್ ಪ್ರತಿಕ್ರಿಯಿಸಿ, ಪುತ್ತೂರಿನಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಯುಷ್ ಆಸ್ಪತ್ರೆ ನಿರ್ಮಾಣ ಮಾಡುವ ಸ್ಥಳೀಯ ಶಾಸಕರ, ಇತರರ ಪ್ರಯತ್ನಕ್ಕೆ ಜಿಲ್ಲಾ ಆಯುಷ್ ಇಲಾಖೆ ಕೈಜೋಡಿಸಿದೆ. ಇದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ದಾಖಲೆಗಳ ತಯಾರಿ, ಪತ್ರ ವ್ಯವಹಾರಗಳನ್ನು ನಡೆಸಲಾಗುತ್ತಿದೆ. ರಾಜ್ಯ, ಕೇಂದ್ರ ಸರಕಾರಗಳ ಮಾರ್ಗಸೂಚಿಯ ಪ್ರಕಾರ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ವ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದಿದ್ದಾರೆ.