ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿದ್ದ ದೈತ್ಯ ಮರ, ಚಾಲಕ ಸ್ಥಳದಲ್ಲೇ ಸಾವು

07-08-26 10:13 pm       HK News Desk   ಕರಾವಳಿ

ಹೆಬ್ರಿ ಸಮೀಪ ಶುಕ್ರವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ದೈತ್ಯ ಮರ ಮುರಿದು ಬಿದ್ದ ಪರಿಣಾಮ, ಕಾರು ಚಾಲಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಸಂಭವಿಸಿದೆ.

ಕಾರ್ಕಳ, ಆ.7: ಹೆಬ್ರಿ ಸಮೀಪ ಶುಕ್ರವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ದೈತ್ಯ ಮರ ಮುರಿದು ಬಿದ್ದ ಪರಿಣಾಮ, ಕಾರು ಚಾಲಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಸಂಭವಿಸಿದೆ. ಹೆಬ್ರಿ ಸಂತೆಕಟ್ಟೆ ನಿವಾಸಿ ಸದಾನಂದ ನಾಯಕ್ ಮೃತರು.‌

ಹೆಬ್ರಿಯಿಂದ ಬ್ರಹ್ಮಾವರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಹುರ್ತುಕೆ ಎಂಬಲ್ಲಿ ಸದಾನಂದ ನಾಯಕ್ ಅವರು ತಮ್ಮ ಕಾರಿನಲ್ಲಿ ಚಲಿಸುತ್ತಿದ್ದಾಗ ಹಠಾತ್ತಾಗಿ ಮರ ಮುರಿದು ಬಿದ್ದು ದುರಂತ ಸಂಭವಿಸಿದೆ. ಭಾರೀ ಗಾಳಿ ಮಳೆಗೆ ರಸ್ತೆ ಬದಿಯಿದ್ದ ಬೃಹತ್ ಮರ ಏಕಾಏಕಿ ಕಾರಿನ ಮೇಲೆ ಉರುಳಿದೆ. ಮರ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಸದಾನಂದ ನಾಯಕ್ ತೀವ್ರ ಗಾಯಗೊಂಡು ಅದರೆಡೆಯಲ್ಲಿ ಸಿಲುಕಿ ಕಾರಿನಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಪಘಾತದ ತೀವ್ರತೆಗೆ ನಜ್ಜುಗುಜ್ಜಾಗಿದ್ದ ಕಾರಿನ ಮೇಲೆ ಬಿದ್ದಿದ್ದ ದೈತ್ಯ ಮರವನ್ನು ತೆರವುಗೊಳಿಸಲು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಕ್ರೇನ್ ಬಳಸಿ ಹರಸಾಹಸ ಪಟ್ಟರು. ಸುದೀರ್ಘ ಕಾರ್ಯಾಚರಣೆ ಬಳಿಕ ಮೃತದೇಹವನ್ನು ಹೊರ ತೆಗೆಯಲಾಯಿತು. ಘಟನಾ ಸ್ಥಳಕ್ಕೆ ಹೆಬ್ರಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.