ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬರ್ ಪ್ರತ್ಯಕ್ಷ ; ಕ್ಯಾಮರಾ ಹಿಡಿದು ಶೋಧಕ್ಕಿಳಿದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು, ಮಹೇಶ್ ಶೆಟ್ಟಿ ಎಂಟ್ರಿ ಬೆನ್ನಲ್ಲೇ ತಂಡ ಸಕ್ರಿಯ

20-09-26 07:13 pm       HK News Staffer   ಕರ್ನಾಟಕ

ಧರ್ಮಸ್ಥಳದ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ವಿಡಿಯೋ ಚಿತ್ರೀಕರಣಕ್ಕೆ ಮುಂದಾದ ಇಬ್ಬರು ಯೂಟ್ಯೂಬರ್ ಗಳನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಗ್ಲೆಗುಡ್ಡೆ ಪ್ರದೇಶ ರಕ್ಷಿತಾರಣ್ಯ ವಲಯಕ್ಕೆ ಸೇರಿದ್ದು ಅಕ್ರಮ ಪ್ರವೇಶ ಮಾಡಿದ್ದಾರೆಂದು ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಮಂಗಳೂರು, ಸೆ.20: ಧರ್ಮಸ್ಥಳದ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ವಿಡಿಯೋ ಚಿತ್ರೀಕರಣಕ್ಕೆ ಮುಂದಾದ ಇಬ್ಬರು ಯೂಟ್ಯೂಬರ್ ಗಳನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಗ್ಲೆಗುಡ್ಡೆ ಪ್ರದೇಶ ರಕ್ಷಿತಾರಣ್ಯ ವಲಯಕ್ಕೆ ಸೇರಿದ್ದು ಅಕ್ರಮ ಪ್ರವೇಶ ಮಾಡಿದ್ದಾರೆಂದು ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. 

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆ ಕಳೆದ ಬಾರಿ ಎಸ್ಐಟಿ ತನಿಖೆ ಸಂದರ್ಭದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾದ ಪ್ರದೇಶವಾಗಿತ್ತು. ಹಲವು ದಿನಗಳ ಕಾಲ ಇಲ್ಲಿನ ಗುಡ್ಡದಲ್ಲಿ ಉತ್ಖನನ ನಡೆದು ಅಲ್ಲಿ ಸಿಕ್ಕಿದ್ದ ಕಳೇಬರ, ಇನ್ನಿತರ ಎಲುಬುಗಳನ್ನು ತನಿಖೆಗೆ ಒಳಪಡಿಸಲಾಗಿತ್ತು. ಆನಂತರ, ಎಸ್ಐಟಿ ತನಿಖೆ ಮುಗಿಸಿ ವರದಿಯನ್ನು ನ್ಯಾಯಾಲಯಕ್ಕೆ ನೀಡಿ ಕೈತೊಳೆದುಕೊಂಡಿತ್ತು. ಶವ ಹೂತಿಡಲಾಗಿದೆ ಎಂಬ ಆರೋಪದ ಪ್ರಕರಣ ತನಿಖೆಯ ಬಳಿಕ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಹೆಣೆಯಲಾದ ಪ್ರಕರಣವೆಂದು ಬದಲಾಗಿತ್ತು. 

ಇದೀಗ ಒಂದು ವರ್ಷದ ಬಳಿಕ ಷಡ್ಯಂತ್ರ ಪ್ರಕರಣದಲ್ಲಿ ಆರೋಪಿಯೆಂದು ಹೆಸರಿಸಲಾಗಿದ್ದ ಯೂಟ್ಯೂಬರ್ ಅಭಿಷೇಕ್ ಮತ್ತು ಬೆಂಗಳೂರಿನ ವೆಬ್ ಪತ್ರಕರ್ತ ಶ್ರೇಯಸ್ ಎಂಬವರು ಬಂಗ್ಲೆಗುಡ್ಡೆ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ವಿಡಿಯೋ ಚಿತ್ರೀಕರಣಕ್ಕೆ ಮುಂದಾಗಿದ್ದರು.‌ ಈ ವೇಳೆ, ಸ್ಥಳೀಯರು ಧರ್ಮಸ್ಥಳ ಪೊಲೀಸರನ್ನು ಕರೆಸಿ ಹೆಚ್ಚುವರಿ ವಿಚಾರಣೆಗೆ ಒಳಪಡಿಸಿದ್ದಾರೆ. 

ಮೂರು ದಿನಗಳ ಹಿಂದಷ್ಟೇ ಸೌಜನ್ಯ ಪರ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿ ಆರು ತಿಂಗಳ ನಾಪತ್ತೆ ಪ್ರಹಸನದ ಬಳಿಕ ಊರಿಗೆ ಹಿಂತಿರುಗಿದ್ದು ಬಹಿರಂಗವಾಗಿತ್ತು. ಪುತ್ತೂರು ವಿಭಾಗಾಧಿಕಾರಿ ಎರಡೆರಡು ಬಾರಿ ಗಡೀಪಾರು ನೋಟಿಸ್ ಕೊಟ್ಟರೂ, ಅವರನ್ನು ಗಡೀಪಾರು ಮಾಡಲು ಸಾಧ್ಯವಾಗಿರಲಿಲ್ಲ. ಮೊದಲಿಗೆ ಹೈಕೋರ್ಟ್ ತಡೆ ಕಾರಣವಾದರೆ, ಆಬಳಿಕ ಮಹೇಶ್ ಶೆಟ್ಟಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದರು. ಊರಿಗೆ ಹಿಂತಿರುಗಿದ ಬೆನ್ನಲ್ಲೇ ಮಹೇಶ್ ಶೆಟ್ಟಿಯನ್ನು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡು ರಾತ್ರಿ ವೇಳೆ ಸಭೆಯನ್ನೂ ನಡೆಸಿದ್ದರು. ಇದರ ಬೆನ್ನಲ್ಲೇ ಯೂಟ್ಯೂಬರ್ ಗ್ಯಾಂಗ್ ಸಕ್ರಿಯವಾಗಿದೆ ಎನ್ನಲಾಗುತ್ತಿದ್ದು ಅಭಿಷೇಕ್ ತನ್ನ ಕ್ಯಾಮರಾ ಜೊತೆಗೆ ಬಂಗ್ಲೆಗುಡ್ಡಕ್ಕೆ ತೆರಳಿ ಅಸ್ಥಿಪಂಜರದ ಶೋಧಕ್ಕೆ ಮುಂದಾಗಿರುವಂತೆ ತೋರಿಸಿದೆ. 

ಎಸ್ಐಟಿ ತನಿಖೆ ಸಂದರ್ಭದಲ್ಲಿ ಬಂಗ್ಲೆಗುಡ್ಡೆ ನಿಷೇಧಿತ ಪ್ರದೇಶವಾಗಿತ್ತು. ಈಗ ಮೀಸಲು ಅರಣ್ಯ ಪ್ರದೇಶವಾಗಿದ್ದು ಅಲ್ಲಿನ ವಾಸ್ತವ ತಿಳಿಯಲು ಹೋಗುವುದಿದ್ದರೂ, ಅರಣ್ಯ ಇಲಾಖೆಯ ಪರವಾನಗಿ ಬೇಕಾಗುತ್ತದೆ. ಅದರ ಕಾರಣಕ್ಕೆ ಪೊಲೀಸರು ವಿಚಾರಣೆ ನಡೆಸಿ ವಿಚಾರವನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆಂದು ತಿಳಿದುಬಂದಿದೆ.