ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್‌ಮೆನ್ ಜಮೀರ್ ಮನೆಗೆ ಸಚಿವ ಖಾದರ್ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ, 1 ಕೋಟಿ 32 ಲಕ್ಷ ರೂ. ವಿಮೆ ಹಾಗೂ ಪರಿಹಾರದ ಆದೇಶ ಪತ್ರ ಹಸ್ತಾಂತರ

07-08-26 09:26 pm       HK News Staffer   ಕರಾವಳಿ

ಕರ್ತವ್ಯದಲ್ಲಿದ್ದಾಗಲೇ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದ ಸೋಮೇಶ್ವರ ಮೆಸ್ಕಾಂ ಶಾಖೆಯ ಲೈನ್ ಮೆನ್ ಶೇಖ್ ಜಮೀರ್ ಅವರ ಮನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಭೇಟಿ ನೀಡಿ ಸರಕಾರ ಮತ್ತು ಮೆಸ್ಕಾಂ ಇಲಾಖೆಯಿಂದ ಸಿಗುವ ವಿಮೆ ಹಾಗೂ ಪರಿಹಾರದ ಆದೇಶ ಪತ್ರವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

ಉಳ್ಳಾಲ, ಆ.7: ಕರ್ತವ್ಯದಲ್ಲಿದ್ದಾಗಲೇ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದ ಸೋಮೇಶ್ವರ ಮೆಸ್ಕಾಂ ಶಾಖೆಯ ಲೈನ್ ಮೆನ್ ಶೇಖ್ ಜಮೀರ್ ಅವರ ಮನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಭೇಟಿ ನೀಡಿ ಸರಕಾರ ಮತ್ತು ಮೆಸ್ಕಾಂ ಇಲಾಖೆಯಿಂದ ಸಿಗುವ ವಿಮೆ ಹಾಗೂ ಪರಿಹಾರದ ಆದೇಶ ಪತ್ರವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. 

ಕಳೆದ ಸೋಮವಾರ ಬೆಳಗ್ಗೆ ಉಚ್ಚಿಲ ನಯಾಪಟ್ಣದ ಟ್ರಾನ್ಸ್ ಫಾರ್ಮರ್ ದುರಸ್ತಿ ವೇಳೆ ಜಿಒಎಸ್ ಆಫ್ ಆಗಿದೆಯೆಂದು ಗ್ರಹಿಸಿ ಟ್ರಾನ್ಸ್ ಫಾರ್ಮರ್ ಏರಿದ ಜಮೀರ್ ವಿದ್ಯುತ್ ಆಘಾತಕ್ಕೊಳಗಾಗಿ ಕೆಳಗೆಸೆಯಲ್ಪಟ್ಟು ಸಾವನ್ನಪ್ಪಿದ್ದರು. ಅಂಬಿಕಾ ರೋಡ್ ಪಿಲಾರಿನ ಮೃತ ಶೇಖ್ ಜಮೀರ್ ಮನೆಗೆ ಭೇಟಿ ನೀಡಿದ ಸಚಿವ ಖಾದರ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸರಕಾರ ಹಾಗೂ ಮೆಸ್ಕಾಂನಿಂದ ಸಿಗಬೇಕಾದ ಒಂದು ಕೋಟಿ ರೂಪಾಯಿ ವಿಮೆ ಹಾಗೂ ಮೂವತ್ತೆರಡು ಲಕ್ಷ ರೂಪಾಯಿ ಪರಿಹಾರ, ತಿಂಗಳ ಪೆನ್ಷನ್, ಮಡದಿ ಅಥವಾ ಮಗಳಿಗೆ ಉದ್ಯೋಗ ಭದ್ರತೆ ಸೇರಿದಂತೆ ಏನೆಲ್ಲಾ ಸವಲತ್ತುಗಳು ಸಿಗಲಿವೆಯೋ ಅದನ್ನ ಮೃತರ ಕುಟುಂಬಸ್ಥರ ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು. ಜಮೀರ್ ಅವರ ಅಕಾಲಿಕ ಅಗಲಿಕೆಯು ಮೆಸ್ಕಾಂ ಇಲಾಖೆ ಹಾಗೂ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ. ನಾವು ಎಷ್ಟೇ ಸಂತಾಪ ಪರಿಹಾರ ನೀಡಿದರೂ ಜಮೀರನ್ನ ಕಳಕೊಂಡ ದುಃಖವನ್ನು ಸಹಿಸುವ ಶಕ್ತಿಯನ್ನು ಮಾತ್ರ ದೇವರೇ ಸಂತ್ರಸ್ತ ಕುಟುಂಬಕ್ಕೆ ಕರುಣಿಸಬೇಕೆಂದರು.

ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ದಯಾನಂದ್, ಸೋಮೇಶ್ವರ ಶಾಖೆ ಶಾಖಾಧಿಕಾರಿ ನಿತೇಶ್ ಹೊಸಗದ್ದೆ, ಮಂಗಳೂರು ವಿಭಾಗ ಕಾರ್ಯ ನಿರ್ವಾಹಕ ಇಂಜಿನಿಯರ್ ಲೋಹಿತ್‌ ಮೊದಲಾದವರು ಉಪಸ್ಥಿತರಿದ್ದರು.