ಎಡಕುಮೇರಿ - ಸಿರಿಬಾಗಿಲು ನಡುವೆ ರೈಲ್ವೇ ಹಳಿಗೆ ಭೂಕುಸಿತ ; ಮಂಗಳೂರು- ಬೆಂಗಳೂರು ಸಂಚಾರಕ್ಕೆ ಅಡ್ಡಿ, ಏಳು ರೈಲು ಹಾಸನ, ಸುಬ್ರಹ್ಮಣ್ಯ ಬಳಿ ಸ್ಥಗಿತ, ಸಾವಿರಾರು ಪ್ರಯಾಣಿಕರಿಗೆ ಸಂಕಷ್ಟ !

02-08-26 11:42 am       HK News Desk   ಕರಾವಳಿ

ಎಡಕುಮೇರಿ- ಸಿರಿಬಾಗಿಲು ನಡುವಿನ ಏರು ಹಾದಿಯಲ್ಲಿ ರೈಲು ಹಳಿಯ ಮೇಲೆ ನಿನ್ನೆ ರಾತ್ರಿ ಗುಡ್ಡ ಕುಸಿದು ಬಿದ್ದಿದ್ದು ಈ ಹಾದಿಯಲ್ಲಿ ಪೂರ್ತಿಯಾಗಿ ರೈಲುಗಳ ಸಂಚಾರವನ್ನು ನಿಲುಗಡೆ ಮಾಡಲಾಗಿದೆ.

ಮಂಗಳೂರು, ಆ.2: ಘಟ್ಟ ಪ್ರದೇಶ ಮತ್ತು ಕರಾವಳಿ ಭಾಗದಲ್ಲಿ ಭಾರಿ ಮಳೆಯಿಂದಾಗಿ ಸಕಲೇಶಪುರ ಬಳಿಯ ಎಡಕುಮೇರಿ - ಸಿರಿಬಾಗಿಲು ನಡುವೆ ರೈಲ್ವೇ ಹಳಿಗೆ ಭೂಕುಸಿತ ಸಂಭವಿಸಿದ್ದು ಮಂಗಳೂರು- ಬೆಂಗಳೂರು ಸಂಚರಿಸುವ ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹಾಗಾಗಿ ಮಂಗಳೂರು- ಬೆಂಗಳೂರು ಸಂಪರ್ಕಿಸುವ ಏಳು ರೈಲುಗಳನ್ನು ಆಂಶಿಕವಾಗಿ ರದ್ದು ಪಡಿಸಲಾಗಿದೆ. 

ಎಡಕುಮೇರಿ- ಸಿರಿಬಾಗಿಲು ನಡುವಿನ ಏರು ಹಾದಿಯಲ್ಲಿ ರೈಲು ಹಳಿಯ ಮೇಲೆ ನಿನ್ನೆ ರಾತ್ರಿ ಗುಡ್ಡ ಕುಸಿದು ಬಿದ್ದಿದ್ದು ಈ ಹಾದಿಯಲ್ಲಿ ಪೂರ್ತಿಯಾಗಿ ರೈಲುಗಳ ಸಂಚಾರವನ್ನು ನಿಲುಗಡೆ ಮಾಡಲಾಗಿದೆ. ಇದರ ಕಾರಣ ಬೆಂಗಳೂರಿನಿಂದ ಮುರುಡೇಶ್ವರ ಸಂಚರಿಸುತ್ತಿದ್ದ ರೈಲನ್ನು ಹಾಸನದಲ್ಲಿ ನಿಲ್ಲಿಸಲಾಗಿದ್ದು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ನಿನ್ನೆ ರಾತ್ರಿ ಬೆಂಗಳೂರಿನಿಂದ ಕೇರಳದ ಕೋಜಿಕೋಡ್ ಹೊರಟಿದ್ದ ರೈಲನ್ನು ಹಾಸನದಲ್ಲಿ ಸ್ಥಗಿತಗೊಳಿಸಲಾಗಿದೆ. 

ಇದೇ ಹಾದಿಯಲ್ಲಿ ವಿಜಯಪುರದಿಂದ ಮಂಗಳೂರಿಗೆ ಬರುತ್ತಿದ್ದ ರೈಲನ್ನು ಹಾಸನದಲ್ಲಿ ನಿಲ್ಲಿಸಲಾಗಿದ್ದು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಆಗಸ್ಟ್ ಒಂದರಂದು ಬೆಂಗಳೂರಿನಿಂದ ಕಾರವಾರ ಹೊರಟಿದ್ದ ಎಕ್ಸ್ಪ್ರೆಸ್ ರೈಲನ್ನು ಸಕಲೇಶಪುರ ಬಳಿ ನಿಲ್ಲಿಸಲಾಗಿದ್ದು ಮುಂದಿನ ಸಂಚಾರವನ್ನು ರದ್ದುಪಡಿಸಲಾಗಿದೆ. ಇದೇ ವೇಳೆ ಮುರುಡೇಶ್ವರದಿಂದ ಬೆಂಗಳೂರಿಗೆ ಹೊರಟಿದ್ದ ರೈಲನ್ನು ಸುಬ್ರಹ್ಮಣ್ಯ ನಿಲ್ದಾಣದ ಬಳಿ ಸ್ಥಗಿತಗೊಳಿಸಿ ಮುಂದಿನ ಸಂಚಾರವನ್ನು ರದ್ದುಪಡಿಸಲಾಗಿದೆ. ಕೇರಳದ ಕೋಜಿಕೋಡ್ ನಿಂದ ಬೆಂಗಳೂರಿಗೆ ಹೊರಟಿದ್ದ ರೈಲನ್ನು ಪುತ್ತೂರು ಬಳಿಯ ಕಬಕದಲ್ಲಿ ನಿಲ್ಲಿಸಲಾಗಿದೆ. ಇದೇ ರೀತಿ ಮಂಗಳೂರು ಸೆಂಟ್ರಲ್ ನಿಂದ ವಿಜಯಪುರ ಹೊರಟಿದ್ದ ಎಕ್ಸ್ಪ್ರೆಸ್ ರೈಲು ಸುಬ್ರಮಣ್ಯ ಬಳಿ ನಿಲುಗಡೆಯಾಗಿದ್ದು ಮುಂದಿನ ಹಾದಿಯನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗಿದೆ.‌

ಭೂಕುಸಿತ ಆಗಿರುವ ಪ್ರದೇಶದಲ್ಲಿ ಹಿಟಾಚಿಗಳನ್ನು ಬಳಸಿ ಮಣ್ಣು ತೆರವು ಕಾರ್ಯ ಮಾಡಲಾಗುತ್ತಿದ್ದು ಮತ್ತಷ್ಟು ಗುಡ್ಡ ಕುಸಿತ ಆಗುತ್ತಿರುವುದರಿಂದ ಕಾಮಗಾರಿಗೆ ತೊಂದರೆ ಆಗಿದೆ. ನಿನ್ನೆ ರಾತ್ರಿ ಇಡೀ ಮಣ್ಣು ತೆರವು ಕಾರ್ಯ ನಡೆಸಿದರೂ ರೈಲು ಸಂಚಾರಕ್ಕೆ ಮುಕ್ತಗೊಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆಗಸ್ಟ್ 2ರಂದು ನಿಗದಿಯಾಗಿದ್ದ ಮಂಗಳೂರು ಜಂಕ್ಷನ್- ಯಶವಂತಪುರ ಎಕ್ಸ್ಪ್ರೆಸ್ ರೈಲು ಮತ್ತು ಯಶವಂತಪುರದಿಂದ ಮಂಗಳೂರು ಜಂಕ್ಷನ್ ಗೆ ಬರುವ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಸ್ಥಳದಲ್ಲಿ ಮಣ್ಣು ತೆರವು ಕಾರ್ಯ ಮಾಡಲಾಗುತ್ತಿದ್ದು ಶೀಘ್ರದಲ್ಲೇ ರೈಲು ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸೌತ್ ವೆಸ್ಟರ್ನ್ ರೈಲ್ವೆ ಹುಬ್ಬಳ್ಳಿ ವಿಭಾಗದ ಪಿ ಆರ್ ಓ ಮಂಜುನಾಥ್ ಕನಮಡಿ ತಿಳಿಸಿದ್ದಾರೆ.