2,000 ರೂ. ಆಸೆಗೆ ಬಿದ್ದು ಬ್ಯಾಂಕ್ ಅಕೌಂಟ್ ಹಸ್ತಾಂತರ ; ದೇಶಾದ್ಯಂತ ಕೋಟಿ ಕೋಟಿ ಸೈಬರ್ ವಂಚನೆಗೆ ಖಾತೆ ಬಳಸಿದ ಸುರತ್ಕಲ್ ಮೂಲದ ಸ್ನೇಹಿತ 

21-07-26 11:02 pm       HK News Desk   ಕರಾವಳಿ

ಕಮಿಷನ್ ಹಾಗೂ ಕೇವಲ 2,000 ರೂ. ಆಸೆಗೆ ಪರಿಚಯಸ್ಥರಿಗೆ ಬ್ಯಾಂಕ್ ಖಾತೆ, ಸಿಮ್ ಕಾರ್ಡ್ ನೀಡಿದ ಯುವಕನೊಬ್ಬ ಸೈಬರ್ ನೆಟ್‌ವರ್ಕ್ ಜಾಲಕ್ಕೆ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮಂಗಳೂರು, ಜುಲೈ 21: ಕಮಿಷನ್ ಹಾಗೂ ಕೇವಲ 2,000 ರೂ. ಆಸೆಗೆ ಪರಿಚಯಸ್ಥರಿಗೆ ಬ್ಯಾಂಕ್ ಖಾತೆ, ಸಿಮ್ ಕಾರ್ಡ್ ನೀಡಿದ ಯುವಕನೊಬ್ಬ ಸೈಬರ್ ನೆಟ್‌ವರ್ಕ್ ಜಾಲಕ್ಕೆ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಯುವಕನ ಕೆವೈಸಿ ದಾಖಲೆಗಳನ್ನು ಬಳಸಿ ಸೌತ್ ಇಂಡಿಯನ್ ಬ್ಯಾಂಕ್‌ನಲ್ಲಿ ಖಾತೆ ತೆಗೆಸಿ, ಅದನ್ನು ದೇಶಾದ್ಯಂತ ನಡೆದ ಆನ್‌ಲೈನ್ ವಂಚನೆಯ ಅಕ್ರಮ ಹಣ ವರ್ಗಾವಣೆಗೆ ಬಳಸಿಕೊಂಡಿರುವ ಕುರಿತು ಮಂಗಳೂರು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಲೇಜು ದಿನಗಳಲ್ಲಿ ಶುರುವಾದ ಜಾಲ: 

ಮಂಗಳೂರಿನ ಬಲ್ಮಠದ ಹೆಬಿಕ್ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ 2022ರಲ್ಲಿ ಐಟಿಐ ಕಲಿಯುತ್ತಿದ್ದ ಯುವಕನಿಗೆ (23) ಮಂಥನ್ ಎಂಬಾತನ ಪರಿಚಯವಾಗಿತ್ತು. 2023ರ ಅಕ್ಟೋಬರ್‌ನಲ್ಲಿ ಮಂಥನ್, ತನ್ನ ಸ್ನೇಹಿತನಾದ ಮೊಹಮ್ಮದ್ ಹಮ್ರಾಜ್ ಹಾಗೂ ಮೊಹಮ್ಮದ್ ನಿಜಾಮುದ್ದೀನ್ ಎಂಬವರನ್ನು ಕಾಲೇಜಿನ ಬಳಿ ಕರೆತಂದು ಯುವಕನಿಗೆ ಪರಿಚಯಿಸಿದ್ದ. ಈ ವೇಳೆ ಹಮ್ರಾಜ್, "ನನಗೆ ವಿದೇಶದಿಂದ ಹಣ ಬರಲಿದ್ದು, ಅದನ್ನು ವರ್ಗಾಯಿಸಲು ತುರ್ತಾಗಿ ಒಂದು ಬ್ಯಾಂಕ್ ಖಾತೆಯ ಅಗತ್ಯವಿದೆ" ಎಂದು ನಂಬಿಸಿ ಯುವಕನ ನೆರವು ಕೋರಿದ್ದ.

2,000 ರೂ. ನೀಡಿ ಪಾಸ್‌ಬುಕ್, ಎಟಿಎಂ, ಸಿಮ್ ಲೂಟಿ:

ಹಮ್ರಾಜ್‌ನ ಮಾತುಗಳನ್ನು ನಿಜವೆಂದು ನಂಬಿದ ಯುವಕ, ಅಕ್ಟೋಬರ್ ಮೊದಲ ವಾರದಲ್ಲಿ ತನ್ನ ಆಧಾರ್ - ಪ್ಯಾನ್ ದಾಖಲೆಗಳನ್ನು ನೀಡಿ ಮಂಗಳೂರಿನ ಸೌತ್ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ನೂತನ ಖಾತೆ ತೆರೆದಿದ್ದ. ಖಾತೆಗೆ ಹೊಸ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಸಿದ ಬಳಿಕ, ಬ್ಯಾಂಕ್‌ನಿಂದ ಸಿಕ್ಕ ಪಾಸ್‌ಬುಕ್, ಸಹಿ ಮಾಡಿದ ಚೆಕ್‌ಬುಕ್, ಎಟಿಎಂ ಕಾರ್ಡ್ ಹಾಗೂ ಲಿಂಕ್ ಆಗಿದ್ದ ಸಿಮ್ ಕಾರ್ಡ್‌, ಬ್ಯಾಂಕ್ ಹೊರಭಾಗದಲ್ಲೇ ಹಮ್ರಾಜ್‌ಗೆ ಹಸ್ತಾಂತರಿಸಿದ್ದ. ಪ್ರತಿಯಾಗಿ ಹಮ್ರಾಜ್ ಯುವಕನಿಗೆ 2,000 ರೂಪಾಯಿ ನಗದು ನೀಡಿದ್ದ. ಕೋರ್ಸ್ ಮುಗಿದ ನಂತರ ಯುವಕ ಆ ತಂಡದೊಂದಿಗೆ ಸಂಪರ್ಕ ಕಳೆದುಕೊಂಡಿದ್ದ.

ವಿವಿಧ ರಾಜ್ಯಗಳಲ್ಲಿ ದೂರು - ಬ್ಯಾಂಕ್ ಅಕೌಂಟ್ ಫ್ರೀಜ್:

ಇತ್ತೀಚೆಗೆ ತಮ್ಮ ಖಾತೆಯಲ್ಲಿ ಏನೋ ಸಮಸ್ಯೆಯಾಗಿದೆ ಎಂಬುದನ್ನು ಅರಿತ ಯುವಕ ಬ್ಯಾಂಕಿಗೆ ತೆರಳಿ ಪರಿಶೀಲಿಸಿದಾಗ ಭೀಕರ ಸೈಬರ್ ವಂಚನೆ ಬೆಳಕಿಗೆ ಬಂದಿದೆ. ಈ ಬ್ಯಾಂಕ್ ಖಾತೆಯನ್ನು ದೇಶದ ವಿವಿಧ ಭಾಗಗಳಲ್ಲಿ ನಡೆದ ಆನ್‌ಲೈನ್ ಸೈಬರ್ ಕ್ರೈಂ ಹಣ ವರ್ಗಾವಣೆಗೆ ಬಳಸಿರುವುದು ಹಾಗೂ ಚೆಕ್ ಮೂಲಕ ಹಣ ಡ್ರಾ ಮಾಡಿರುವುದು ತಿಳಿದು ಬಂದಿದೆ. ಪರಿಣಾಮವಾಗಿ ದೇಶದ ವಿವಿಧ ರಾಜ್ಯಗಳ ಪೊಲೀಸ್ ಠಾಣೆಗಳಲ್ಲಿ ಈ ಖಾತೆಯ ವಿರುದ್ಧ ದೂರುಗಳು ದಾಖಲಾಗಿ, ಬ್ಯಾಂಕ್ ಅಕೌಂಟ್ ಫ್ರೀಜ್ ಆಗಿರುವುದು ಖಚಿತವಾಗಿದೆ.

ತನ್ನ ಹೆಸರಿನಲ್ಲಿದ್ದ ಖಾತೆಯನ್ನು ಅಕ್ರಮ ಸೈಬರ್ ವಂಚನೆ ಜಾಲಕ್ಕೆ ದುರ್ಬಳಕೆ ಮಾಡಿಕೊಂಡ ಸುರತ್ಕಲ್‌ನ 7ನೇ ಬ್ಲಾಕ್ ಕೃಷ್ಣಾಪುರ ನಿವಾಸಿ ಮೊಹಮ್ಮದ್ ಹಮ್ರಾಜ್ ಹಾಗೂ ಈ ಜಾಲದಲ್ಲಿ ಭಾಗಿಯಾಗಿರುವ ಇತರ ಶಂಕಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಯುವಕ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಮಂಗಳೂರು ಸಿಇಎನ್ (CEN) ಸೈಬರ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ