ಧರ್ಮ ಕಾರ್ಯಗಳ ಅನುಷ್ಠಾನದಿಂದ ವ್ಯವಹಾರದಲ್ಲಿ ಯಶಸ್ಸು ; ಕೋಟೆಕಾರಿನಲ್ಲಿ ನೂತನ ಆರ್.ಬಿ ಕಾಂಪ್ಲೆಕ್ಸ್ ಲೋಕಾರ್ಪಣೆ, ಮಾಡೂರು ದುರ್ಗಾನಂದ ಸ್ವಾಮೀಜಿ ಆಶೀರ್ವಚನ

05-07-26 10:15 pm       HK News Desk   ಕರಾವಳಿ

ಉದ್ಯೋಗ, ವ್ಯವಹಾರದಲ್ಲಿ ನಾವು ಎಷ್ಟೇ ಯಶಸ್ಸು ಸಾಧಿಸಿದರೂ ಜೀವನದಲ್ಲಿ ನಿರಂತರವಾಗಿ ಧರ್ಮ ಕಾರ್ಯಗಳನ್ನ ನಡೆಸಬೇಕಿದೆ. ರಾಘವ ಗಟ್ಟಿ ಮತ್ತು ಭಾರತಿ ದಂಪತಿ ವ್ಯವಹಾರದ ಜೊತೆಗೆ ಜೀವನದಲ್ಲಿ ಧರ್ಮ ಕಾರ್ಯಗಳ ಅನುಷ್ಠಾನಗೊಳಿಸಿರುವುದರ ಫಲವಾಗಿ ಅವರಿಂದು ಯಶಸ್ವಿ ಉದ್ಯಮಿಗಳಾಗಿ ಸಮಾಜಕ್ಕೆ ಆದರ್ಶರಾಗಿದ್ದಾರೆಂದು ಮಾಡೂರು ಮರಿಯಣ್ಣ ಪಾಲು ಶಿವದುರ್ಗಾಂಬ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಉಳ್ಳಾಲ, ಜು.05: ಉದ್ಯೋಗ, ವ್ಯವಹಾರದಲ್ಲಿ ನಾವು ಎಷ್ಟೇ ಯಶಸ್ಸು ಸಾಧಿಸಿದರೂ ಜೀವನದಲ್ಲಿ ನಿರಂತರವಾಗಿ ಧರ್ಮ ಕಾರ್ಯಗಳನ್ನ ನಡೆಸಬೇಕಿದೆ. ರಾಘವ ಗಟ್ಟಿ ಮತ್ತು ಭಾರತಿ ದಂಪತಿ ವ್ಯವಹಾರದ ಜೊತೆಗೆ ಜೀವನದಲ್ಲಿ ಧರ್ಮ ಕಾರ್ಯಗಳ ಅನುಷ್ಠಾನಗೊಳಿಸಿರುವುದರ ಫಲವಾಗಿ ಅವರಿಂದು ಯಶಸ್ವಿ ಉದ್ಯಮಿಗಳಾಗಿ ಸಮಾಜಕ್ಕೆ ಆದರ್ಶರಾಗಿದ್ದಾರೆಂದು ಮಾಡೂರು ಮರಿಯಣ್ಣ ಪಾಲು ಶಿವದುರ್ಗಾಂಬ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರಿನಲ್ಲಿ ಕೋಟೆಕಾರು ಪಟ್ಟಣ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಭಾರತಿ ಮತ್ತು ಹಾಲಿ ಪಟ್ಟಣ ಪಂಚಾಯತ್ ಸದಸ್ಯರಾದ ರಾಘವ ಗಟ್ಟಿ ದಂಪತಿ ಮಾಲಕತ್ವದ ಆರ್.ಬಿ ಕಾಂಪ್ಲೆಕ್ಸನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಮಾತನಾಡಿ ಕೋಟೆಕಾರಿನಲ್ಲಿ ತಲೆಯೆತ್ತಿರುವ ಈ ವಾಣಿಜ್ಯ ಕಟ್ಟಡದಿಂದ ನಾಗರಿಕ ಸಮಾಜಕ್ಕೆ ಲಾಭ ದೊರೆಯುವಂತಾಗಲಿ. ನೂತನ ಕಟ್ಟಡದಲ್ಲಿ ನಡೆಯುವ ಎಲ್ಲಾ ವಾಣಿಜ್ಯ ವ್ಯವಹಾರಗಳೂ ಯಶಸ್ವಿಯಾಗಲಿಯೆಂದು ಶುಭ ಹಾರೈಸಿದರು. ತುಳುನಾಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮಾತನಾಡಿ ನೂತನ ವಾಣಿಜ್ಯ ಕಟ್ಟಡ ನಿರ್ಮಾಣದಿಂದ ಪ್ರದೇಶದಲ್ಲಿ ಆರ್ಥಿಕ ಚಲನವಲನ ನಡೆಯುವ ಮೂಲಕ ಕೋಟೆಕಾರು ಪಟ್ಟಣದ ಅಭಿವೃದ್ಧಿಗೂ ಸಹಕಾರಿಯಾಗಲಿದೆಯೆಂದರು.

ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ಗುತ್ತಿಗೆದಾರ ಪುರುಷೋತ್ತಮ‌ ಗಟ್ಟಿ ಪರ್ಯತ್ತೂರು ಹಾಗೂ ಇತರರನ್ನ ಸನ್ಮಾನಿಸಲಾಯಿತು. ಕೋಟೆಕಾರು ಶೃಂಗೇರಿ ಶಾಖಾ ಮಠದ ಧರ್ಮಾಧಿಕಾರಿಗಳಾದ ಸತ್ಯಶಂಕರ ಬೊಳ್ಳಾವ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲು, ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ದಿವ್ಯಾ ಸತೀಶ್ ಶೆಟ್ಟಿ, ಸೋಮೇಶ್ವರ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರು, ಬಿಜೆಪಿ ಹಿರಿಯ ಮುಖಂಡರಾದ ಚಂದ್ರಶೇಖರ ಉಚ್ಚಿಲ್, ಕಟ್ಟಡ ಮಾಲಕರಾದ ರಾಘವ ಗಟ್ಟಿ ಮತ್ತು ಭಾರತಿ ದಂಪತಿ ಮೊದಲಾದವರು ಉಪಸ್ಥಿತರಿದ್ದರು. ರೈಲ್ವೇ ಸಲಹಾ ಸಮಿತಿ ಸದಸ್ಯರಾದ ಗೋಪಿನಾಥ್ ಬಗಂಬಿಲ ಸ್ವಾಗತಿಸಿದರು. ವಿಜೆ ಹರಿಪ್ರಸಾದ್ ನಿರೂಪಿಸಿದರು.