ಮಲ್ಪೆ ವಾಟರ್ ಸ್ಪೋರ್ಟ್ಸ್ ಉದ್ಯಮಿ ಸಂದೀಪ್ ಸಾಲ್ಯಾನ್ ಗೋವಾದಲ್ಲಿ ನಿಗೂಢ ಸಾವು; ಕ್ಯಾಸಿನೋಗಳಿಗೆ ಕರೆಸಿ ದೋಚುತ್ತಿದ್ದ ಮಂಗಳೂರಿನ ಕತರ್ನಾಕ್ ಮಹಿಳೆ ಬಂಧನ

04-07-26 03:12 pm       HK News Staffer   ಕ್ರೈಂ

ಮಲ್ಪೆಯ ಉದ್ಯಮಿ ಸಂದೀಪ್ ಸಾಲಿಯಾನ್ ನಿಗೂಢ ಸಾವಿನ ಪ್ರಕರಣದಲ್ಲಿ ಗೋವಾ ಪೊಲೀಸರು ಮಂಗಳೂರು ಮೂಲದ ಮಹಿಳೆಯನ್ನು ಬಂಧಿಸಿದ್ದಾರೆ. ಕ್ಯಾಸಿನೋಗಳಿಗೆ ಬರುವ ಉದ್ಯಮಿಗಳನ್ನು ದೋಚುವುದನ್ನೇ ಹವ್ಯಾಸ ಮಾಡಿಕೊಂಡಿದ್ದ ಅಕ್ಷತಾ ಅಲಿಯಾಸ್ ಮಮತಾ ಅಲಿಯಾಸ್ ರೂಪಶ್ರೀ(36) ಬಂಧಿತ ಮಹಿಳೆ.

ಉಡುಪಿ, ಜುಲೈ 4: ಮಲ್ಪೆಯ ಉದ್ಯಮಿ ಸಂದೀಪ್ ಸಾಲಿಯಾನ್ ನಿಗೂಢ ಸಾವಿನ ಪ್ರಕರಣದಲ್ಲಿ ಗೋವಾ ಪೊಲೀಸರು ಮಂಗಳೂರು ಮೂಲದ ಮಹಿಳೆಯನ್ನು ಬಂಧಿಸಿದ್ದಾರೆ. ಕ್ಯಾಸಿನೋಗಳಿಗೆ ಬರುವ ಉದ್ಯಮಿಗಳನ್ನು ದೋಚುವುದನ್ನೇ ಹವ್ಯಾಸ ಮಾಡಿಕೊಂಡಿದ್ದ ಅಕ್ಷತಾ ಅಲಿಯಾಸ್ ಮಮತಾ ಅಲಿಯಾಸ್ ರೂಪಶ್ರೀ(36) ಬಂಧಿತ ಮಹಿಳೆ. 

ಮಲ್ಪೆಯಲ್ಲಿ ವಾಟರ್ ಸ್ಪೋರ್ಟ್ಸ್ ಉದ್ಯಮ ನಡೆಸುತ್ತಿದ್ದ ಸಂದೀಪ್‌ ಸಾಲಿಯಾನ್(41) ಜೂನ್ 30ರಂದು ಗೋವಾಕ್ಕೆ ತೆರಳಿದ್ದ ವೇಳೆ ಲಾಡ್ಜ್ ಒಂದರಲ್ಲಿ ತಂಗಿದ್ದಾಗ ನಿಗೂಢ ರೀತಿ ಸಾವನ್ನಪ್ಪಿದ್ದರು. ಮೊದಲಿಗೆ ಹೃದಯಾಘಾತ ಎಂದು ಹೇಳಲಾಗಿದ್ದರೂ ಅವರ ಮೈಮೇಲಿದ್ದ ಚಿನ್ನಾಭರಣ ಕಾಣೆಯಾಗಿದ್ದರಿಂದ ಸಾವಿನ ಬಗ್ಗೆ ಶಂಕೆ ಮೂಡಿತ್ತು. ಗೋವಾ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಮಹಿಳೆಯೊಬ್ಬಳು ಜೊತೆಗಿದ್ದು ಲಾಡ್ಜ್ ನಿಂದ ತೆರಳಿರುವುದು ಪತ್ತೆಯಾಗಿತ್ತು. ಹೀಗಾಗಿ ಗೋವಾ ಪೊಲೀಸರು ಆಕೆಯ ಬೆನ್ನುಬಿದ್ದು ಜುಲೈ  3ರಂದು ಶುಕ್ರವಾರ ರಾತ್ರಿ ಮಂಗಳೂರಿನಲ್ಲಿ ಬಂಧಿಸಿದ್ದಾರೆ. 

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದೇನೆಂದು ಹೇಳುತ್ತಿದ್ದ ಮಮತಾ ತನ್ನ ಹೆಸರನ್ನು ಪ್ರದೇಶಕ್ಕೆ ತಕ್ಕಂತೆ ಬದಲಾಯಿಸುತ್ತಿದ್ದಳು. ಜಾಲತಾಣದಲ್ಲಿ ಶ್ರೀಮಂತರನ್ನು ಬಲೆಗೆ ಹಾಕಿ, ಕ್ಯಾಸಿನೋಗಳಿಗೆ ಕರೆಸಿಕೊಂಡು ದೋಚುತ್ತಿದ್ದಳು. ಗೋವಾ ಪೊಲೀಸರು ಇದೀಗ ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಕ್ಯಾಸಿನೋಗಳಿಗೆ ಬರುವ ಶ್ರೀಮಂತರನ್ನು ಬಲೆಗೆ ಬೀಳಿಸಿ ಹೋಟೆಲ್ಗಳಿಗೆ ಕರೆದುಕೊಂಡು ಹೋಗಿ ದರೋಡೆ ಮಾಡುವುದು ಮತ್ತು ಹನಿ ಟ್ರ್ಯಾಪ್‌ಗಳಲ್ಲಿ ಸಿಲುಕಿಸಿ ಬ್ಲ್ಯಾಕ್‌ಮೇಲ್ ಮಾಡುವುದನ್ನು ರೂಢಿ ಮಾಡಿದ್ದಳು.

ಇದಕ್ಕೂ ಮೊದಲು, ಈ ಮಹಿಳೆ ಗುಜರಾತ್ ಉದ್ಯಮಿ ತೋಮೇಶ್‌ ಯಾದವ್‌ ಎಂಬವರನ್ನು ಹೋಟೆಲ್‌ಗೆ ಕರೆಸಿಕೊಂಡು ಇದೇ ರೀತಿ ಪ್ರಜ್ಞಾಹೀನರನ್ನಾಗಿ ಮಾಡಿ 2.40 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದೋಚಿದ್ದು ಆ ಪ್ರಕರಣದಲ್ಲಿ ಬಂಧನಕ್ಕೀಡಾಗಿ ಬಿಡುಗಡೆಯಾಗಿದ್ದಳು. ಇದೀಗ ಮಲ್ಪೆ ಉದ್ಯಮಿ ಸಂದೀಪ್ ಸಾಲಿಯಾನ್ ಅವರಿಗೆ ಮತ್ತು ಬರುವ ಔಷಧಿ ಕೊಟ್ಟು ಚಿನ್ನ ದೋಚಿರುವ ಶಂಕೆಯಿದೆ. ಸಂದೀಪ್ ಸಾಲಿಯಾನ್ ಈ ಹಿಂದೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜೊತೆಗೆ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಆನಂತರ, ಮಲ್ಪೆಯಲ್ಲಿ ವಾಟರ್ ಸ್ಫೋರ್ಟ್ಸ್ ವ್ಯವಹಾರವನ್ನು ಪ್ರಾರಂಭಿಸಿದ್ದು ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಾಧಿಸಿದ್ದರು.