ಅಯೋಧ್ಯೆ ರಾಮ ಮಂದಿರ ಬೆನ್ನಲ್ಲೇ ಬದರಿನಾಥ ಕ್ಷೇತ್ರದಲ್ಲೂ ಕಾಣಿಕೆ ಹಣ ಕಳವು ಆರೋಪ ; ತನಿಖೆಗೆ ಆದೇಶ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ

04-07-26 09:47 pm       HK News Staffer   ಕ್ರೈಂ

ಅಯೋಧ್ಯೆಯ ರಾಮ ಮಂದಿರದಲ್ಲಿ ಹುಂಡಿ ಹಣ ಕಳವು ವಿವಾದ ಸೃಷ್ಟಿಸಿರುವಾಗಲೇ ಮತ್ತೊಂದು ಪುಣ್ಯಕ್ಷೇತ್ರ ಬದರಿ- ಕೇದಾರನಾಥ ಧಾಮದಲ್ಲಿಯೂ ಕಾಣಿಕೆ ಹಣದ ದುರುಪಯೋಗ ನಡೆದಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಬದರಿನಾಥ–ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ತನಿಖೆಗೆ ಆದೇಶಿಸಿದೆ. ತನಿಖಾ ವರದಿಯನ್ನು ಸಾರ್ವಜನಿಕಗೊಳಿಸಲಾಗುವುದು ಮತ್ತು ಆರೋಪಗಳು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ ತಿಳಿಸಿದ್ದಾರೆ.

ನವದೆಹಲಿ, ಜುಲೈ 4: ಅಯೋಧ್ಯೆಯ ರಾಮ ಮಂದಿರದಲ್ಲಿ ಹುಂಡಿ ಹಣ ಕಳವು ವಿವಾದ ಸೃಷ್ಟಿಸಿರುವಾಗಲೇ ಮತ್ತೊಂದು ಪುಣ್ಯಕ್ಷೇತ್ರ ಬದರಿ- ಕೇದಾರನಾಥ ಧಾಮದಲ್ಲಿಯೂ ಕಾಣಿಕೆ ಹಣದ ದುರುಪಯೋಗ ನಡೆದಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಬದರಿನಾಥ–ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ತನಿಖೆಗೆ ಆದೇಶಿಸಿದೆ. ತನಿಖಾ ವರದಿಯನ್ನು ಸಾರ್ವಜನಿಕಗೊಳಿಸಲಾಗುವುದು ಮತ್ತು ಆರೋಪಗಳು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ ತಿಳಿಸಿದ್ದಾರೆ.

ಶ್ರೀ ಬದರಿನಾಥ ಧಾಮದ ಉದ್ಯೋಗಿಯೊಬ್ಬರು ದೇಣಿಗೆ ಹಣ ಮತ್ತು ಕಾಣಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಡೆಹ್ರಾಡೂನ್ ಮೂಲದ ಭೈರವ ಸೇನಾ ಸಂಘಟನೆ ಆರೋಪಿಸಿದೆ ಎಂದು ಬಿಕೆಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಗಳಿಗೆ ಸಂಬಂಧಿಸಿದಂತೆ ಸಂಘಟನೆಯು ಯಾವುದೇ ಪುರಾವೆಗಳನ್ನು ಸಲ್ಲಿಸಿಲ್ಲವಾದರೂ, ವಿಷಯದ ಗಂಭೀರತೆಯನ್ನು ಪರಿಗಣಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

ದೇಣಿಗೆ ಎಣಿಕೆ ಕಾರ್ಯದ ಉಸ್ತುವಾರಿ ಹೊಂದಿರುವ ಸಿಬ್ಬಂದಿಯಿಂದಲೂ ಬಿಕೆಟಿಸಿ ಸ್ಪಷ್ಟನೆ ಕೋರಿದೆ. "ಈ ಆರೋಪಗಳನ್ನು ಬಿಕೆಟಿಸಿ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಇದು ಕೋಟ್ಯಂತರ ಭಕ್ತರ ಭಾವನೆ ಮತ್ತು ನಂಬಿಕೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ವಿಷಯವಾಗಿರುವುದರಿಂದ, ಆರೋಪಗಳ ತನಿಖೆಗೆ ಸಮಿತಿಯನ್ನು ರಚಿಸಲು ಆದೇಶಿಸಲಾಗಿದೆ" ಎಂದು ದ್ವಿವೇದಿ ಹೇಳಿದ್ದಾರೆ. 

ಸಾಮಾಜಿಕ ಮಾಧ್ಯಮಗಳಲ್ಲಿ ಬಿಕೆಟಿಸಿ ಅಧ್ಯಕ್ಷರ 'ವೈಯಕ್ತಿಕ ಸಹಾಯಕ' ಎಂದು ಹೇಳಲಾಗುತ್ತಿರುವ ವ್ಯಕ್ತಿಯೊಬ್ಬರು ಈ ಆಪಾದಿತ ದುರುಪಯೋಗದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿದೆ. ಆದರೆ, "ನನಗೆ ಯಾವುದೇ ವೈಯಕ್ತಿಕ ಕಾರ್ಯದರ್ಶಿ ಇಲ್ಲ. ಆರೋಪಕ್ಕೆ ಒಳಗಾಗಿರುವ ವ್ಯಕ್ತಿ ಬಿಕೆಟಿಸಿ ಉದ್ಯೋಗಿಯಾಗಿದ್ದು, ಈ ಹಿಂದೆ ಮೂವರು ಅಧ್ಯಕ್ಷರೊಂದಿಗೆ ವೈಯಕ್ತಿಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ವಿರುದ್ಧದ ಆರೋಪಗಳು ತನಿಖೆಯಲ್ಲಿ ಸಾಬೀತಾದರೆ, ಕ್ರಮ ಕೈಗೊಳ್ಳಲಾಗುವುದು" ಎಂದು ದ್ವಿವೇದಿ ಸ್ಪಷ್ಟಪಡಿಸಿದ್ದಾರೆ.

ಬಿಕೆಟಿಸಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸೋಹನ್ ಸಿಂಗ್ ರಂಗರ್ ಅವರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, "ತನಿಖೆಯಲ್ಲಿ ಯಾವುದೇ ಅಕ್ರಮ ಕಂಡುಬಂದರೆ, ಶ್ರೀ ಬದರಿನಾಥ–ಕೇದಾರನಾಥ ದೇವಾಲಯ ಸಮಿತಿ ಕಾಯ್ದೆ–1939 ಮತ್ತು ನೌಕರರ ನಡವಳಿಕೆ ನಿಯಮಗಳ ಅನ್ವಯ ತಪ್ಪಿತಸ್ಥರ ವಿರುದ್ಧ ಕಾನೂನು ಮತ್ತು ಇಲಾಖಾ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ. ದೇಣಿಗೆ ಹಣ ಎಣಿಕೆ ನಡೆಯುವ ಕೊಠಡಿಯಲ್ಲಿ ಐದು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.