ಆರ್‌ಎಸ್‌ಎಸ್‌ಗೆ ಬರುವ ಪ್ರತಿ ರೂಪಾಯಿಗೂ ಲೆಕ್ಕವಿದೆ, ಗುರು ದಕ್ಷಿಣೆಯೇ ಸಂಘದ ಆದಾಯ ಮೂಲ, ಪ್ರತ್ಯೇಕ ನೋಂದಣಿ ಅಗತ್ಯವಿಲ್ಲ ; ಸಚಿವ ಪ್ರಿಯಾಂಕ ಖರ್ಗೆಗೆ ಆರೆಸ್ಸೆಸ್ ತಿರುಗೇಟು

02-07-26 09:18 pm       HK News Staffer   ಕರ್ನಾಟಕ

ಆರ್‌ಎಸ್‌ಎಸ್‌ಗೆ ಬರುವ ಪ್ರತಿಯೊಂದು ರೂಪಾಯಿಗೂ ಲೆಕ್ಕವಿದೆ. ಸಂಘದ ಸ್ವಯಂಸೇವಕರು ಸ್ವಯಂ ಪ್ರೇರಿತರಾಗಿ ನೀಡುವ ದಕ್ಷಿಣೆಯೇ ಸಂಘದ ಅದಾಯ ಮೂಲ. ಸರ್ಕಾರ ಎಲ್ಲ ಸಂಘಟನೆಗಳಿಗೆ ನೋಂದಣಿಯನ್ನು ಕಡ್ಡಾಯಗೊಳಿಸುವ ಕಾನೂನು ತಂದರೆ, ನಾವು ಅದನ್ನು ಪಾಲಿಸುತ್ತೇವೆ" ಎಂದು ನೋಂದಣಿ ಹಾಗೂ ಹಣಕಾಸು ಪಾರದರ್ಶಕತೆ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎತ್ತಿರುವ ಪ್ರಶ್ನೆಗಳಿಗೆ ಆರ್‌ಎಸ್‌ಎಸ್ ತಿರುಗೇಟು ನೀಡಿದೆ.

ಬೆಳಗಾವಿ, ಜುಲೈ 2: ಆರ್‌ಎಸ್‌ಎಸ್‌ಗೆ ಬರುವ ಪ್ರತಿಯೊಂದು ರೂಪಾಯಿಗೂ ಲೆಕ್ಕವಿದೆ. ಸಂಘದ ಸ್ವಯಂಸೇವಕರು ಸ್ವಯಂ ಪ್ರೇರಿತರಾಗಿ ನೀಡುವ ದಕ್ಷಿಣೆಯೇ ಸಂಘದ ಅದಾಯ ಮೂಲ. ಸರ್ಕಾರ ಎಲ್ಲ ಸಂಘಟನೆಗಳಿಗೆ ನೋಂದಣಿಯನ್ನು ಕಡ್ಡಾಯಗೊಳಿಸುವ ಕಾನೂನು ತಂದರೆ, ನಾವು ಅದನ್ನು ಪಾಲಿಸುತ್ತೇವೆ" ಎಂದು ನೋಂದಣಿ ಹಾಗೂ ಹಣಕಾಸು ಪಾರದರ್ಶಕತೆ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎತ್ತಿರುವ ಪ್ರಶ್ನೆಗಳಿಗೆ ಆರ್‌ಎಸ್‌ಎಸ್ ತಿರುಗೇಟು ನೀಡಿದೆ.

ಬೆಳಗಾವಿಯಲ್ಲಿ ನಡೆದ ಆರ್‌ಎಸ್‌ಎಸ್ ಚಿಂತನ-ಮಂಥನ ಸಭೆಯಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಪ್ರಚಾರಕ ಭರತ್‌ಕುಮಾರ್, "ಆರ್‌ಎಸ್‌ಎಸ್‌ಗೆ ಬರುವ ಪ್ರತಿಯೊಂದು ರೂಪಾಯಿಗೂ ಲೆಕ್ಕವಿದೆ. ಸರ್ಕಾರ ಎಲ್ಲ ಸಂಘಟನೆಗಳಿಗೆ ನೋಂದಣಿಯನ್ನು ಕಡ್ಡಾಯಗೊಳಿಸಿದರೆ, ನಾವು ಅದನ್ನು ಪಾಲಿಸುತ್ತೇವೆ. ಪ್ರಸ್ತುತ ಇರುವ ಕಾನೂನು ವ್ಯವಸ್ಥೆಯ ಪ್ರಕಾರ ಆರ್‌ಎಸ್‌ಎಸ್ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಕುಟುಂಬದ ಉದಾಹರಣೆ ನೀಡಿದ ಅವರು, "ಒಂದು ಕುಟುಂಬವನ್ನು ಸಂಸ್ಥೆಯಾಗಿ ನೋಂದಾಯಿಸದೇ ಅದರ ಸದಸ್ಯರು ಒಟ್ಟಾಗಿ ಕುಟುಂಬದ ಖರ್ಚು-ವೆಚ್ಚಗಳನ್ನು ನಿರ್ವಹಿಸುವಂತೆ, ಆರ್‌ಎಸ್‌ಎಸ್ ಕೂಡ ಈಗಿನ ಕಾನೂನು ವ್ಯಾಪ್ತಿಯಲ್ಲೇ ಒಂದು ಕುಟುಂಬವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಆರ್‌ಎಸ್‌ಎಸ್ ಯಾವುದೇ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು ಅಥವಾ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದಿಲ್ಲ ಎಂದು ಹೇಳಿದ ಅವರು, ಸಂಘದ ಸ್ವಯಂಸೇವಕರು ವರ್ಷಕ್ಕೊಮ್ಮೆ 'ಗುರುದಕ್ಷಿಣೆ' ರೂಪದಲ್ಲಿ ಸ್ವಯಂಪ್ರೇರಿತರಾಗಿ ನೀಡುವ ಕೊಡುಗೆಯೇ ಸಂಘದ ಪ್ರಮುಖ ಆರ್ಥಿಕ ಮೂಲ ಎಂದು ತಿಳಿಸಿದರು. ಸಂಘಕ್ಕೆ ಬರುವ ಪ್ರತಿ ರೂಪಾಯಿಗೂ ಸರಿಯಾದ ಲೆಕ್ಕ ಇರುತ್ತದೆ. ಸ್ವೀಕರಿಸಿದ ಹಣವನ್ನು ಮರುದಿನವೇ ಸಂಘದ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಒಂದು ರೂಪಾಯಿಯನ್ನೂ ನಗದು ರೂಪದಲ್ಲಿ ಉಳಿಸಿಕೊಳ್ಳುವುದಿಲ್ಲ. ಯಾವುದೇ ಕಾರ್ಯಕ್ರಮಕ್ಕೆ ಎಷ್ಟು ಹಣ ಅಗತ್ಯವಿದೆಯೋ ಅಷ್ಟನ್ನೇ ಸಂಗ್ರಹಿಸಲಾಗುತ್ತದೆ. ಪ್ರತಿಯೊಂದು ಖರ್ಚಿನ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತದೆ" ಎಂದು ಹೇಳಿದರು.

ಇದೇ ವೇಳೆ, ಬೆಳಗಾವಿಯಲ್ಲಿ ಜುಲೈ 10ರಿಂದ 12ರ ವರೆಗೆ ಆರ್‌ಎಸ್‌ಎಸ್‌ನ ವಾರ್ಷಿಕ 'ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್' ನಡೆಯಲಿದ್ದು, ದೇಶದ ವಿವಿಧ ರಾಜ್ಯಗಳ ಹಿರಿಯ ಪ್ರಚಾರಕರು ಹಾಗೂ ಸಂಘದ ಉನ್ನತ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಜುಲೈ 6ರಂದು ಬೆಳಗಾವಿಗೆ ಆಗಮಿಸಲಿದ್ದು, ಸುಮಾರು 8 ದಿನಗಳ ಕಾಲ ನಗರದಲ್ಲೇ ತಂಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.