ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗುರುಗಳ ಅನುಯಾಯಿಗಳಿಂದ ಬೃಹತ್ ಸಮಾವೇಶ ; ಮಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮಕ್ಕೆ ಸಿದ್ಧತೆ 

07-11-25 07:23 pm       Mangalore Correspondent   ಕರಾವಳಿ

ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳು 1912ರ ಫೆ.21ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ  ಸಾಮಾಜಿಕ, ಧಾರ್ಮಿಕ ಕ್ರಾಂತಿಗೆ ನಾಂದಿ ಹಾಡಿದ್ದರು. ಈ ಐತಿಹಾಸಿಕ ದಿನದ ಅಂಗವಾಗಿ 2026ರ ಫೆ.21ರಂದು ಮಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅನುಯಾಯಿಗಳಿಂದ ಬೃಹತ್ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ತಿಳಿಸಿದರು.

ಮಂಗಳೂರು, ನ‌.7 : ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳು 1912ರ ಫೆ.21ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ  ಸಾಮಾಜಿಕ, ಧಾರ್ಮಿಕ ಕ್ರಾಂತಿಗೆ ನಾಂದಿ ಹಾಡಿದ್ದರು. ಈ ಐತಿಹಾಸಿಕ ದಿನದ ಅಂಗವಾಗಿ 2026ರ ಫೆ.21ರಂದು ಮಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅನುಯಾಯಿಗಳಿಂದ ಬೃಹತ್ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ತಿಳಿಸಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದುಳಿದ ವರ್ಗಕ್ಕೆ ಬದುಕಿನ ಹೊಸತನದ ಹಾದಿಯನ್ನು ತೋರಿಸಿಕೊಟ್ಟವರು. ಗುರುಗಳ ಕ್ರಾಂತಿಕಾರಿ ನಿರ್ಧಾರದಿಂದ ಇಂದು ಹಿಂದುಳಿದ ವರ್ಗದ ಜನರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಇದರ ನೆನಪು ಮಾಡುವುದರೊಂದಿಗೆ ಫೆಬ್ರವರಿಯಲ್ಲಿ ನಡೆಯುವ ಸಮಾವೇಶ ಐತಿಹಾಸಿಕ ಕಾರ್ಯಕ್ರಮವಾಗಲಿದೆ. ದೇಶ- ವಿದೇಶದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳು, ಹಿಂದುಳಿದ ವರ್ಗದ ಗಣ್ಯರು, ನಾಯಕರು, ಸಂಘಟನೆಗಳು, ಪ್ರಮುಖರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಗುರುಗಳ ಅನುಯಾಯಿಗಳು ಸೇರುವ ನಿರೀಕ್ಷೆಯಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಗೆಜ್ಜೆಗಿರಿ ಕ್ಷೇತ್ರ, ಕಟಪಾಡಿ ವಿಶ್ವನಾಥ ದೇವಸ್ಥಾನ, ಕಂಕನಾಡಿ ಗರಡಿ ಕ್ಷೇತ್ರ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ, ಅಖಿಲ ಭಾರತ ಬಿಲ್ಲವರ ಯೂನಿಯನ್, ಗೋಕರ್ಣನಾಥ ಬ್ಯಾಂಕ್, ಭಾರತ್ ಬ್ಯಾಂಕ್, ಗುರುದೇವ ಬ್ಯಾಂಕ್, ಆತ್ಮಶಕ್ತಿ ಬ್ಯಾಂಕ್, ಮೂರ್ತೆದಾರರ ಸಹಕಾರಿ ಸಂಘ, ಯುವವಾಹಿನಿ, ನಾರಾಯಣ ಗುರು ಯುವವೇದಿಕೆ ಮಂಗಳೂರು, ಯುವವೇದಿಕೆ ಉಡುಪಿ, ನಾರಾಯಣ ಗುರು ವಿಚಾರ ವೇದಿಕೆ, ಬಿರುವೆರ್ ಕುಡ್ಲ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಕೇರಳ ಸೇರಿ ದೇಶ ಮತ್ತು ವಿದೇಶಗಳ ಶ್ರೀ ನಾರಾಯಣ ಗುರು ಸಂಘ, ಬಿಲ್ಲವ ಸಂಘಗಳು, ಬಿಲ್ಲವ ಮಹಿಳಾ ಸಂಘಟನೆಗಳು ಸೇರಿದಂತೆ 277 ಬಿಲ್ಲವ ಸಂಘ ಸಂಸ್ಥೆಗಳು ಸಮಾವೇಶದ ಮುಂದಾಳತ್ವ ವಹಿಸಲಿವೆ ಎಂದರು.

ಸಮಾಜದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಚಿಂತನೆ, ಸಂಘಟನೆ, ಗುರುಗಳ ಮೂಲತತ್ವದ ಅನುಷ್ಠಾನದ ಜಾಗೃತಿ ಈ ಕಾರ್ಯಕ್ರಮದ ಹಿಂದಿನ ಆಶಯವಾಗಿದೆ. ಸಮಾವೇಶದ ಸ್ಥಳ ಇನ್ನಷ್ಟೇ ನಿಗದಿಯಾಗಬೇಕಿದೆ. ಒಂದು ಜಾತಿಗೆ ಸೀಮಿತವಾಗದೇ ನಾರಾಯಣಗುರುಗಳ ಎಲ್ಲ ಅನುಯಾಯಿಗಳನ್ನು ಸೇರಿಸಿಕೊಂಡು ಸಮಾವೇಶ ನಡೆಸಲಾಗುವುದು ಎಂದು ಹೇಳಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಟ್ರಸ್ಟಿ ಸಂತೋಷ್ ಜೆ. ಪೂಜಾರಿ, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಉಪಾಧ್ಯಕ್ಷ ಶಂಕರ ಪೂಜಾರಿ ಬಿ.ಎನ್., ನಾರಾಯಣಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಂಜುನಾಥ ಪೂಜಾರಿ, ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಗರೋಡಿ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ಅಶೋಕ್ ಪೂಜಾರಿ ಬೀಜಾಡಿ, ರವಿ ಪೂಜಾರಿ ಚಿಲಿಂಬಿ, ಲೋಕೇಶ್ ಕೋಟ್ಯಾನ್, ಉದಯ ಪೂಜಾರಿ ಬಳ್ಳಾಲ್‌ಭಾಗ್, ಸತೀಶ್ ಕುಮಾರ್ ಕೆಡೆಂಜಿ, ಭುವನೇಶ್ ಪಚ್ಚಿನಡ್ಕ, ಪದ್ಮನಾಭ ಕೋಟ್ಯಾನ್, ಚಂದ್ರಶೇಖರ್ ಕಾವೂರು, ಚಿತ್ತರಂಜನ್ ಬೋಳಾರ್, ಲೀಲಾಕ್ಷ ಕರ್ಕೇರ, ಯೋಗೀಶ್ ಕೋಟ್ಯಾನ್, ನೀಲಯ್ಯ, ರಾಜೇಂದ್ರ ಚಿಲಿಂಬಿ, ರತ್ನಾಕರ ಪೂಜಾರಿ ಉಪಸ್ಥಿತರಿದ್ದರು.

A mega convention of followers of Brahmashree Narayana Guru will be organized in Mangaluru on February 21, 2026, commemorating the day when Narayana Guru consecrated the idol at Kudroli Sri Gokarnanatha Temple in 1912 — an event that marked the beginning of a major social and religious reform movement.