UT Khader, Mangalore, Ullal: ಉಳ್ಳಾಲ ಕ್ಷೇತ್ರದಲ್ಲಿ ರಸ್ತೆ ಗುಂಡಿ ದುರಸ್ತಿಗೆ 90 ಕೋಟಿ ಅನುದಾನ ; ಮಳೆ ನಿಂತ ತಕ್ಷಣ ದುರಸ್ತಿ, ಮತ್ತೆ ಹೊಂಡ ಬಿದ್ದರೆ ಅಧಿಕಾರಿಗಳ ಮೇಲೆ ಕೇಸು, ಜಾತಿ ಗಣತಿಗೆ ಜನರ ಸಪೋರ್ಟ್ ಬೇಕು 

16-09-25 06:06 pm       Mangalore Correspondent   ಕರಾವಳಿ

ಮಂಗಳೂರು ವಿಧಾನಸಭೆ ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆಗಳನ್ನು ಮಳೆ ನಿಂತ ತಕ್ಷಣ ದುರಸ್ತಿ ಪಡಿಸಲು ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದಕ್ಕಾಗಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ 90 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕ್ಷೇತ್ರದ ಶಾಸಕ, ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ. 

ಮಂಗಳೂರು, ಸೆ.16 : ಮಂಗಳೂರು ವಿಧಾನಸಭೆ ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆಗಳನ್ನು ಮಳೆ ನಿಂತ ತಕ್ಷಣ ದುರಸ್ತಿ ಪಡಿಸಲು ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದಕ್ಕಾಗಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ 90 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕ್ಷೇತ್ರದ ಶಾಸಕ, ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ. 

ತೊಕ್ಕೊಟ್ಟು - ಕೋಟೆಕಾರು, ತೊಕ್ಕೊಟ್ಟು- ದೇರಳಕಟ್ಟೆ, ಮುದುಂಗಾರುಕಟ್ಟೆ- ಅಸೈಗೋಳಿ ಹೀಗೆ ಕ್ಷೇತ್ರದ ಎಲ್ಲ ರಸ್ತೆಗಳನ್ನು ಸರಿಪಡಿಸಲು ಸೂಚಿಸಿದ್ದೇನೆ. ರಸ್ತೆಯಲ್ಲಿ ಹೊಂಡ ಬಿದ್ದರೆ ಸರಿಪಡಿಸುವ ಜವಾಬ್ದಾರಿ ಅಧಿಕಾರಿಗಳದ್ದು. ತಮ್ಮ ಜವಾಬ್ದಾರಿ ನಿರ್ವಹಣೆ ಮಾಡದೇ ಇದ್ದರೆ, ಮತ್ತೆ ಮತ್ತೆ ಹೊಂಡ ಬಿದ್ದರೆ ನಿಮ್ಮ ಮೇಲೆ ಕೇಸು ದಾಖಲಿಸಲಾಗುವುದು ಎಂದೂ ತಿಳಿಸಿದ್ದೇನೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಬೇರೆ ಕ್ಷೇತ್ರಗಳಿಗೆ 15 ಕೋಟಿ ಅನುದಾನವೂ ಬಂದಿಲ್ವಂತೆ, ನಿಮ್ಮ ಕ್ಷೇತ್ರಕ್ಕೆ 90 ಕೋಟಿ ಯಾಕೆಂಬ ಪ್ರಶ್ನೆಗೆ, ನಮ್ಮ ಕ್ಷೇತ್ರದ ಹಲವು ಕಡೆ ರಸ್ತೆ ಗುಂಡಿ ಬಿದ್ದಿರುವುದರ ಬಗ್ಗೆ ಸಮೀಕ್ಷೆ ಮಾಡಿ ಅನುದಾನ ಕೇಳಿದ್ದೇನೆ. ಕ್ಷೇತ್ರದ ಎಲ್ಲ ಕಡೆಯ ರಸ್ತೆಯೂ ಇದರಲ್ಲಿ ಬರುತ್ತದೆ. ಸ್ಪೀಕರ್ ಆಗಿರುವುದರಿಂದ ಎಲ್ಲ ಇಲಾಖೆಯಿಂದಲು ಅನುದಾನ ಬಂದಿದೆ ಎಂದರು. ಕುತ್ತಾರ್, ದೇರಳಕಟ್ಟೆಯಲ್ಲಿ ರಸ್ತೆ ಡಾಮರೀಕರಣದ ಒಂದು ತಿಂಗಳಲ್ಲಿ ಹೊಂಡ ಬಿದ್ದರೂ ಗುತ್ತಿಗೆದಾರರನ್ನು ಹೊಣೆ ಮಾಡಿಲ್ಲ ಯಾಕೆಂಬ ಪ್ರಶ್ನೆಗೆ ಖಾದರ್ ಉತ್ತರ ನೀಡಲಿಲ್ಲ.  

ಜಾತಿ ಗಣತಿಗೆ ಎಲ್ಲರ ಸಹಕಾರ ಬೇಕು 

ರಾಜ್ಯದಾದ್ಯಂತ ಜನಸಾಮಾನ್ಯರ ಸ್ಥಿತಿಗತಿ ಅರಿಯಲು ಜಾತಿ ಗಣತಿ ಮಾಡುತ್ತಿದ್ದು ಜನರು ಎಲ್ಲರೂ ಸ್ವ ಹಿತಾಸಕ್ತಿಯಿಂದ ಇದರ ಯಶಸ್ಸಿಗೆ ಕೈಜೋಡಿಸಬೇಕು. 15 ದಿನದಲ್ಲಿ ಸಮೀಕ್ಷೆ ಪೂರ್ತಿಗೊಳಿಸಬೇಕೆಂದು ಸರ್ಕಾರಿ ಶಿಕ್ಷಕರನ್ನು ದಸರಾ ರಜೆಯ ಅವಧಿಯಲ್ಲಿ ನೇಮಿಸಲಾಗಿದೆ. ಈ ಅವಧಿಯಲ್ಲಿ ಮುಗಿಸಲು ಟಾರ್ಗೆಟ್ ನೀಡಿದ್ದಾರೆ. ಒಂದು ಮನೆಯಲ್ಲಿ ಒಂದು ಗಂಟೆ ಸಮಯ ಬೇಕಾಗುತ್ತದೆ. ಹೀಗಾಗಿ ಇವರೊಂದಿಗೆ ಸ್ಥಳೀಯ ಸಂಘ ಸಂಸ್ಥೆಗಳು ಕೂಡ ಸಹಕಾರ ಕೊಡಬೇಕು. ಮೊದಲೇ ಆಶಾ ಕಾರ್ಯಕರ್ತರು ಮನೆ ಮನೆಗೆ ಅರ್ಜಿಗಳನ್ನು ಮೊದಲೇ ತಲುಪಿಸುತ್ತಾರೆ. ಮನೆಮಂದಿ ಅರ್ಜಿಯನ್ನು ಮೊದಲೇ ಫಿಲ್ ಮಾಡಿಟ್ಟರೆ ಸಮೀಕ್ಷೆ ಸಂದರ್ಭದಲ್ಲಿ ಮೊಬೈಲ್ ಏಪ್ ನಲ್ಲಿ ಅಪ್ಡೇಟ್ ಮಾಡುವುದು ಸುಲಭವಾಗುತ್ತದೆ. 

ರೇಶನ್ ಕಾರ್ಡ್ ನಲ್ಲಿ ಮನೆಯರೆಲ್ಲರ ಹೆಸರಿದ್ದರೆ ತೊಂದರೆ ಇಲ್ಲ. ರೇಶನ್ ಇಲ್ಲದ ಅಥವಾ ಹೆಸರು ಸೇರ್ಪಡೆಯಾಗಿಲ್ಲದ ಮನೆಗಳಿದ್ದರೆ ಅಂತಹ ಮನೆಯ ಒಬ್ಬ ಸದಸ್ಯನ ಮೊಬೈಲ್ ನಂಬರನ್ನು ಆಧಾರ್ ಜೊತೆಗೆ ಲಿಂಕ್ ಮಾಡಬೇಕು. ಇದರಿಂದ ಸಮೀಕ್ಷೆ ಸುಲಭವಾಗುತ್ತದೆ. ಸೆ.17ರಂದು ಜಾತಿ ಗಣತಿ ವಿಚಾರಕ್ಕೆ ಉನ್ನತ ಮಟ್ಟದ ಅಧಿಕಾರಿಗಳು ಮಂಗಳೂರಿಗೆ ಬರಲಿದ್ದು ಸಮೀಕ್ಷೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ ಎಂದು ಖಾದರ್ ಹೇಳಿದರು.‌

Karnataka Assembly Speaker and Ullal MLA UT Khader has announced that ₹90 crore has been sanctioned for repairing damaged roads across the Ullal constituency. He stated that instructions have already been given to the Public Works Department (PWD) to begin repair work immediately after the monsoon ends.