ಬ್ರೇಕಿಂಗ್ ನ್ಯೂಸ್

ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋದಿ ಲೋಕಾರ್ಪಣೆ ;  ಕುತುಬ್ ಮಿನಾರ್ ಗಿಂತ ಎತ್ತರದ ಸೇತುವೆ, ದೇಶದಲ್ಲೇ ಅತಿ ಸವಾಲಿನ ರೈಲು ಮಾರ್ಗಕ್ಕೆ ಚಾಲನೆ 

13-09-25 03:25 pm       HK News Desk   ದೇಶ - ವಿದೇಶ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶನಿವಾರ ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗವನ್ನು ಉದ್ಘಾಟಿಸಿದರು.

ನವದೆಹಲಿ, ಸೆ.13: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶನಿವಾರ ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗವನ್ನು ಉದ್ಘಾಟಿಸಿದರು. ಐಜ್ವಾಲ್ ನಗರವನ್ನು ದೆಹಲಿಯೊಂದಿಗೆ ಸಂಪರ್ಕಿಸುವ ರಾಜ್ಯದ ಮೊದಲ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ ತೋರಿಸಿದರು.

ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಅತ್ಯಂತ ಸವಾಲಿನ ಮಾರ್ಗಗಳಲ್ಲಿ ಒಂದೆಂದು ಪರಿಗಣಿಸಲಾದ 8,070 ಕೋಟಿ ರೂ. ವೆಚ್ಚದ ಬೈರಾಬಿ-ಸೈರಾಂಗ್ ರೈಲು ಮಾರ್ಗವನ್ನು 2008-09ರಲ್ಲಿ ಮಂಜೂರು ಮಾಡಲಾಗಿದ್ದು, 2015ರಲ್ಲಿ ರೈಲ್ವೆ ಹಳಿ ನಿರ್ಮಾಣ ಪ್ರಾರಂಭಿಸಲಾಗಿತ್ತು. ಈ ಮಾರ್ಗದಲ್ಲಿ 45 ಸುರಂಗಗಳು, 55 ಪ್ರಮುಖ ಸೇತುವೆಗಳು ಮತ್ತು 87 ಸಣ್ಣ ಸೇತುವೆಗಳು ಸೇರಿವೆ. ಸೈರಾಂಗ್ ಬಳಿಯಿರುವ ಸೇತುವೆ ಸಂಖ್ಯೆ 144, ಕುತುಬ್ ಮಿನಾರ್‌ಗಿಂತ 114 ಮೀಟರ್ ಎತ್ತರವಾಗಿದೆ. ಇದು ದೇಶದ ಅತಿ ಎತ್ತರದ ಪಿಯರ್ ರೈಲ್ವೆ ಸೇತುವೆಯಾಗಿದೆ ಎಂದು ಈಶಾನ್ಯ ಗಡಿನಾಡು ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾರ್ಗವು ಬೈರಾಬಿ ಹೊರತುಪಡಿಸಿ ಐದು ರಸ್ತೆ ಮೇಲ್ಸೇತುವೆಗಳು ಮತ್ತು ಆರು ಅಂಡರ್‌ಪಾಸ್‌ಗಳನ್ನು ಒಳಗೊಂಡಿದ್ದು, ಹೊರ್ಟೋಕಿ, ಕಾನ್‌ಪುಯಿ, ಮುವಾಲ್ಖಾಂಗ್ ಮತ್ತು ಸೈರಾಂಗ್ ಎಂಬ ನಾಲ್ಕು ಪ್ರಮುಖ ನಿಲ್ದಾಣಗಳನ್ನು ಒಳಗೊಂಡಿದೆ. 

ಮಿಜೋರಾಂ ಮತ್ತು ದೇಶದ ಉಳಿದ ಭಾಗಗಳ ನಡುವಿನ ನೇರ ರೈಲು ಸಂಪರ್ಕವು ಈ ಪ್ರದೇಶದ ಜನರಿಗೆ ಸುರಕ್ಷಿತ ಪ್ರಯಾಣದ ಆದ್ಯತೆ ನೀಡಲಿದ್ದು, ಆಹಾರ ಧಾನ್ಯಗಳು, ರಸಗೊಬ್ಬರಗಳು ಮತ್ತು ಇತರ ಅಗತ್ಯ ವಸ್ತುಗಳ ಸಕಾಲಿಕ ಪೂರೈಕೆಗೆ ಕಾರಣವಾಗಲಿದೆ. ಜೊತೆಗೆ ಸಾಗಾಟ ದಟ್ಟಣೆ ನಿಯಂತ್ರಣಕ್ಕೂ ಕಾರಣವಾಗಲಿದೆ. 

ಈ ಸಂದರ್ಭದಲ್ಲಿ ಪ್ರಧಾನಿ ಮೂರು ಹೊಸ ಎಕ್ಸ್‌ಪ್ರೆಸ್ ರೈಲುಗಳಾದ - ಸೈರಾಂಗ್ (ಐಜ್ವಾಲ್)-ದೆಹಲಿ (ಆನಂದ್ ವಿಹಾರ್ ಟರ್ಮಿನಲ್) ರಾಜಧಾನಿ ಎಕ್ಸ್‌ಪ್ರೆಸ್, ಸೈರಾಂಗ್-ಗುವಾಹಟಿ ಎಕ್ಸ್‌ಪ್ರೆಸ್ ಮತ್ತು ಸೈರಾಂಗ್-ಕೋಲ್ಕತ್ತಾ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿಸಿದರು. ಪ್ರಧಾನ ಮಂತ್ರಿಗಳ ಈಶಾನ್ಯ ಪ್ರದೇಶ ಅಭಿವೃದ್ಧಿ (PM-DevINE) ಯೋಜನೆಯಡಿಯಲ್ಲಿ 500 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 45 ಕಿ.ಮೀ. ಐಜ್ವಾಲ್ ಬೈಪಾಸ್ ರಸ್ತೆಯು ಐಜ್ವಾಲ್ ನಗರದ ದಟ್ಟಣೆಯನ್ನು ಕಡಿಮೆ ಮಾಡಲಿದೆ. ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಥೆನ್ಜಾಲ್-ಸಿಯಾಲ್ಸುಕ್ ರಸ್ತೆಯು ತೋಟಗಾರಿಕೆ ರೈತರು, ಡ್ರ್ಯಾಗನ್ ಹಣ್ಣು ಬೆಳೆಗಾರರು, ಭತ್ತದ ಬೆಳೆಗಾರರು ಮತ್ತು ಶುಂಠಿ ಸಂಸ್ಕರಣಾಗಾರಗಳಿಗೆ ಪ್ರಯೋಜನ ನೀಡುತ್ತದೆ ಮತ್ತು ಐಜ್ವಾಲ್ ಥೆನ್ಜಾಲ್ ಲುಂಗ್ಲೈ ಹೆದ್ದಾರಿಯೊಂದಿಗೆ ಸಂಪರ್ಕವನ್ನು ಬಲಪಡಿಸುತ್ತದೆ. ಚಿಮ್ಟುಯಿಪುಯಿ ಸೇತುವೆ, ಕ್ರೀಡಾ ಅಭಿವೃದ್ಧಿಗಾಗಿ ಖೇಲೋ ಇಂಡಿಯಾ ಬಹೂಪಯೋಗಿ ಒಳಾಂಗಣ ಸಭಾಂಗಣ ಮತ್ತು ಐಜ್ವಾಲ್‌ನ ಮುಲ್ಖಾಂಗ್‌ನಲ್ಲಿ ಎಲ್‌ಪಿಜಿ ಬಾಟ್ಲಿಂಗ್ ಸ್ಥಾವರಕ್ಕೆ ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಮಂತ್ರಿ ಜನವಿಕಾಸ್ ಕಾರ್ಯಕ್ರಮ್ (PMJVK) ಯೋಜನೆಯಡಿಯಲ್ಲಿ ಕವರ್ತಾದಲ್ಲಿ ವಸತಿ ಶಾಲೆ ಮತ್ತು ತ್ಲಾಂಗ್ನುವಾಮ್‌ನಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಯನ್ನೂ ಪ್ರಧಾನಿಯವರು ಇದೇ ವೇಳೆ ಉದ್ಘಾಟಿಸಿದರು.

Prime Minister Narendra Modi on Saturday inaugurated Mizoram's first railway line. He flagged off the state's first Capital Express train connecting the city of Aizawl with Delhi.